ವಿಜಯಪುರ: ಪತ್ರಕರ್ತ ಸುನಿಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಿದ ಪ್ರಕರಣ ಸಂಬಂಧ ತನಿಖೆ ತೀವ್ರಗೊಳಿಸಿರುವ ಸಿಸಿಬಿ, ವಿಜಯಯಪುರದ ಸಿಂಧಗಿಯಲ್ಲಿ ಮತ್ತೊಬ್ಬ ಆರೋಪಿ ವಿಜು ಬಡಿಗೇರ್ಗಾಗಿ ತೀವ್ರ ಶೋಧ ನಡೆಸಿದೆ.
ಭೀಮಾತೀರದ ಹಂತಕ ಶಶಿಧರ್ ಮುಂಡೆವಾಡಿ ಅಳಿಯ ವಿಜು ಬಡಿಗೇರ್ ಮನೆಯನ್ನು ಪತ್ತೆಹಚ್ಚಿರುವ ಸಿಸಿಬಿ, ಅಲ್ಲಿಗೆ ಹೋಗುವಷ್ಟರಲ್ಲಿ ಬಡಿಗೇರ್ ಎಸ್ಕೇಪ್ ಆಗಿದ್ದಾನೆ. ಸಿಂಧಗಿ ಪಟ್ಟಣದ ಕಂಟೆಪ್ಪನ ಪ್ಲಾಟ್ ನಲ್ಲಿರುವ ವಿಜು ಬಡಿಗೇರ ಮನೆಯಲ್ಲಿ ಇದೀಗ ಸಿಸಿಬಿ ಪೊಲೀಸರು ಶೋಧ ನಡೆಸ್ತಿದ್ದಾರೆ. ವಿಜು ಸದ್ಯ ಸಿಂಧಗಿಯಲ್ಲೇ ಅಡಗಿ ಕುಳಿತಿರುವ ಬಗ್ಗೆ ಸಿಸಿಬಿ ಪೊಲೀಸರಿಗೆ ಅನುಮಾನಗಳಿವೆ.
ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಿದ ಆರೋಪವನ್ನು ಎದುರಿಸುತ್ತಿರುವ ಪತ್ರಕರ್ತ ರವಿ ಬೆಳಗೆರೆ ಸಿಸಿಬಿ ಕಚೇರಿಯಲ್ಲೇ ಮೂರನೇ ದಿನ ಕಳೆದಿದ್ದಾರೆ. ಇಂದು ಮಧ್ಯಾಹ್ನ ಸುಮಾರು 12 ಗಂಟೆಗೆ ಎಸಿಎಂಎಂ ಕೋರ್ಟ್ಗೆ ಪೊಲೀಸರು ಹಾಜರುಪಡಿಸಲಿದ್ದಾರೆ. ರವಿ ಬೆಳಗೆರೆ ಪರ ವಕೀಲ ದಿವಾಕರ್ ಜಾಮೀನಿಗೆ ಅರ್ಜಿ ಸಲ್ಲಿಸಲಿಸಿದ್ದಾರೆ. ಆದರೆ ಸಿಸಿಬಿ ಅಕ್ರಮ ಶಸ್ತ್ರಾಸ್ತ್ರ, ಕೊಲೆ ಸಂಚು ಸೇರಿ ಇನ್ನಿತರ ಜಾಮೀನು ರಹಿತ ಸೆಕ್ಷನ್ ಹಾಕಿದ್ದಾರೆ. ಆದ್ದರಿಂದ ಅನಾರೋಗ್ಯದ ನೆಪವೊಡ್ಡಿ ಜಾಮೀನು ನೀಡುವಂತೆ ವಕೀಲರು ವಾದ ಮಂಡಿಸಲಿದ್ದಾರೆ.
ಇದಕ್ಕಾಗಿ ಬಿಪಿ, ಶುಗರ್, ನರ ದೌರ್ಬಲ್ಯ ಸೇರಿದಂತೆ ಹಲವು ಕಾಯಿಲೆಗಳಿಂದ ಬೆಳಗೆರೆ ಬಳಲುತ್ತಿರುವ ಕುರಿತು ಮೆಡಿಕಲ್ ಸರ್ಟಿಫಿಕೇಟ್ಗಳನ್ನು ಕೂಡ ರೆಡಿ ಮಾಡಿಕೊಂಡಿದ್ದಾರೆ. ಒಂದು ವೇಳೆ ಜಾಮೀನು ನೀಡದಿದ್ದರೆ ಕನಿಷ್ಠ ಪಕ್ಷ ಆಸ್ಪತ್ರೆಗೆ ಸೇರಿಸಲು ಮನವಿ ಮಾಡುವ ಸಾಧ್ಯತೆ ಇದೆ. ಜೊತೆಗೆ ಜಾಮೀನು ಅರ್ಜಿ ಇತ್ಯರ್ಥವಾಗುವವರೆಗೆ ಮಧ್ಯಂತರ ಜಾಮೀನಿಗೂ ಮನವಿ ಮಾಡಿದ್ದಾರೆ.