ಕಲಬುರಗಿ: ಅನ್ನ ಭಾಗ್ಯ, ಕ್ಷೀರ ಭಾಗ್ಯ ಮತ್ತು ಶಾದಿ ಭಾಗ್ಯ ನೀಡಿದ ರಾಜ್ಯ ಕಾಂಗ್ರೆಸ್ ಸರ್ಕಾರ ಈಗ ಕುಟೀರ ಭಾಗ್ಯ ನೀಡಿಲು ಮುಂದಾಗಿದೆ.
ಅನ್ನ, ಕ್ಷೀರ, ಶಾದಿ ಭಾಗ್ಯ, ಹೀಗೆ ನಾನಾ ಭಾಗ್ಯಗಳನ್ನ ನಾಡಿಗೆ ನೀಡಿದ ರಾಜ್ಯ ಕಾಂಗ್ರೆಸ್ ಸರ್ಕಾರ ಈಗ ಕುಟೀರ ಭಾಗ್ಯ ನೀಡಲು ಮುಂದಾಗಿದ್ದು, ಕಲಬುರಗಿ ಸೇರಿದಂತೆ ರಾಜ್ಯದ ಎಂಟು ಜಿಲ್ಲೆಗಳಲ್ಲಿ ಮೊದಲು ಈ ಯೋಜನೆ ಜಾರಿಗೆ ಬರಲಿದೆ.
ಸರ್ಕಾರವೇ ಖುದ್ದು ಹೈವೇ ಬಳಿ ವಿಶ್ರಾಂತಿ ಕುಟೀರ ಆರಂಭಿಸಲು ಮುಂದಾಗಿದ್ದು, ರುಚಿಯಾದ ಊಟ, ಊಟದ ನಂತರ ಕೆಲಕಾಲ ವಿಶ್ರಾಂತಿ ಪಡೆಯಲು ತಂಗುದಾಣ. ಜೊತೆಗೆ ಪ್ರವಾಸಿ ಮಾಹಿತಿ ಕೇಂದ್ರ. ಹೀಗೆ ಹಲವು ಬಗೆಗಳು ಈ ಸರ್ಕಾರಿ ಕುಟೀರದಲ್ಲಿರುತ್ತವೆ. ಪ್ರವಾಸೋದ್ಯಮ ಇಲಾಖೆಯೇ ಈ ಯೋಜನೆಯನ್ನು ತರಲು ಸಿದ್ಧವಾಗಿದೆ ಎಂದು ಪ್ರವಾಸೋದ್ಯಮ ಮತ್ತು ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಮೊದಲಿಗೆ ಕಲಬುರಗಿಯ ಮಾಡಬೂಳ ಬಳಿ ಈ ಕುಟೀರ ತಲೆಎತ್ತಲಿದೆ. ಸುಮಾರು 2.30 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುವ ಈ ಕುಟೀರಕ್ಕೆ ಈಗಾಗಲೇ 2 ಎಕರೆ ಜಾಗ ನೋಡಿ ನಕಾಶೆ ರೆಡಿಮಾಡಲಾಗಿದೆ. ನಂತರ ಕಾರವಾರ, ಹಾಸನ, ಚಿತ್ರದುರ್ಗ, ವಿಜಯಪುರ ಹೀಗೆ ಎಂಟು ಕಡೆಗಳಲ್ಲಿ ಈ ಯೋಜನೆ ವಿಸ್ತಾರವಾಗಲಿದೆ. ಅಂದುಕೊಂಡಂತೆ ಎಲ್ಲ ನಡೆದರೆ ಇನ್ನೆರಡು ತಿಂಗಳಲ್ಲಿ ಮೊದಲ ಕುಟೀರ ಉದ್ಘಾಟನೆಯಾಗಲಿದೆ.
ಇದು ಸಚಿವ ಪ್ರೀಯಾಂಕ್ ಖರ್ಗೆಯವರ ಎಲೆಕ್ಷನ್ ಭಾಗ್ಯ ಅಂತಾ ಬಿಜೆಪಿ ಟೀಕಿಸಿದೆ. ಇಷ್ಟು ದಿನ ಸುಮ್ಮನ್ನಿದ್ದು ಚುನಾವಣೆ ಹೊತ್ತಿನಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಕುಟೀರ ಭಾಗ್ಯ ಯೋಜನೆ ಜಾರಿಗೆ ತಂದಿರೋದು ಎಲೆಕ್ಷನ್ ಆಲೋಚನೆಯಿಂದ ಅಂತಾ ಹೇಳುತ್ತಿದೆ. ಕುಟೀರ ಭಾಗ್ಯ ತರುತ್ತಿರೋದು ನಮಗೂ ಖುಷಿ ವಿಚಾರವೇ, ಆದರೆ ಎಲ್ಲಾ ಯೋಜನೆಗಳಂತೆ ಈ ಯೋಜನೆ ಸಹ ಹಳ್ಳ ಹಿಡಿಯದಂತೆ ನೋಡಿಕೊಳ್ಳಬೇಕು ಎಂದು ಬಿಜೆಪಿ ಮುಖಂಡ ಅರುಣ್ ಕುಲಕರ್ಣಿ ಹೇಳಿದ್ದಾರೆ.