ಚೆನ್ನೈ: 18 ವರ್ಷದ ದಾಂಪತ್ಯಕ್ಕೆ ಡೈವೋರ್ಸ್ ಕೊಟ್ಟು, ಎರಡನೇ ಮದುವೆಯಾಗಿದ್ದ 53 ವರ್ಷದ ವ್ಯಕ್ತಿಗೆ ಪತ್ನಿಯೇ ಮೋಸ ಮಾಡಿ ಚಿನ್ನಾಭರಣ ಹಾಗೂ ಹಣದ ಜೊತೆ ನಾಪತ್ತೆಯಾದ ಘಟನೆ ನಗರದ ವಿಳ್ಳಿವಕ್ಕಂನಲ್ಲಿ ನಡೆದಿದೆ.
ಮೇ 26ರಂದು ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 53 ವರ್ಷದ ವೆಂಕಟರಮಣ ಅವರು ಈ ಹಿಂದೆ ಸುಶೀಲ ಎಂಬವರನ್ನು ಮದುವೆಯಾಗಿದ್ದರು. ಆದರೆ ಮದುವೆಯಾಗಿ 18 ವರ್ಷವಾದರೂ ಮಕ್ಕಳಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ವೆಂಕಟರಮಣ ಪತ್ನಿಗೆ ಡೈವೋರ್ಸ್ ನೀಡಿದ್ದರು. ಇದಾದ ಬಳಿಕ ವೆಂಕಟರಮಣ ಅವರು ಮ್ಯಾಟ್ರಿಮೋನಿಯಲ್ ವೆಬ್ಸೈಟಲ್ಲಿ ಹೆಸರು ನೋಂದಾಯಿಸಿಕೊಂಡಿದ್ದರು. ಈ ವೇಳೆ ವೆಂಕಟರಮಣ ಅವರಿಗೆ ರಮಣಮ್ಮ ಎಂಬವರ ಪರಿಚಯವಾಗಿದೆ. ಬಳಿಕ ಇಬ್ಬರೂ ಕಳೆದ ಮೇ 2ರಂದು ಮದುವೆಯಾಗಿದ್ದಾರೆ.
ಅನಾಥೆಯ ಕಥೆ ಕಟ್ಟಿದ್ಳು!: ಮದುವೆಗೂ ಮುನ್ನ ನಾನು ಅನಾಥೆ ಎಂದು 36 ವರ್ಷದ ರಮಣಮ್ಮ ಚೆನ್ನಾಗಿ ಕಥೆ ಕಟ್ಟಿದ್ದರು. ಮದುವೆಯಾಗಿ 24ನೇ ದಿನ ರಮಣಮ್ಮ ತನ್ನ ಪತಿ ಬಳಿ, ನಾನು ಆಂಧ್ರಪ್ರದೇಶದಲ್ಲಿರುವ ಸಂಬಂಧಿಕರ ಮನೆಗೆ ಹೋಗಿ ಬರುತ್ತೇನೆ ಎಂದು ಮೇ 26ರಂದು ಮನೆಯಿಂದ ಹೊರಟಿದ್ದಾರೆ. ಪತ್ನಿ ಆಂಧ್ರಪ್ರದೇಶಕ್ಕೆ ಹೊರಟಿದ್ದಾಳೆ ಎಂದು ವೆಂಕಟರಮಣ ಅವರು ನಂಬಿದ್ದಾರೆ. ಆದರೆ ಅಷ್ಟರಲ್ಲಾಗಲೇ ಮನೆಯ ಬೀರುವಿನಲ್ಲಿದ್ದ 80 ಸಾವಿರ ರೂಪಾಯಿ ನಗದು ಹಾಗೂ 32 ಗ್ರಾಂ ಚಿನ್ನಾಭರಣ ನಾಪತ್ತೆಯಾಗಿದ್ದ ವಿಷಯ ಗಮನಕ್ಕೆ ಬಂದಿದೆ. ಆದರೆ ಪತ್ನಿಗೆ ಫೋನ್ ಮಾಡುವ ವೇಳೆ ಈ ವಿಚಾರ ಹೇಳಿರಲಿಲ್ಲ. ಆದರೆ ನಂತರದ ದಿನಗಳಲ್ಲಿ ರಮಣಮ್ಮ ಫೋನ್ ಕಾಲ್ ಪಿಕ್ ಮಾಡುತ್ತಿರಲಿಲ್ಲ. ಕೊನೆಗೆ ಆಕೆಯ ಮೊಬೈಲ್ ಸ್ವಿಚ್ ಆಫ್ ಆಯಿತು.
ನಂತರ ವೆಂಕಟರಮಣ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಇದರ ಆಧಾರದಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಈ ವಿಚಾರಣೆ ವೇಳೆ ವೆಂಕಟರಮಣ ಅವರಿಗೆ ಈ ಮೊದಲೇ ಮದುವೆಯಾಗಿದ್ದ ವಿಚಾರ ಪೊಲೀಸರಿಗೆ ಗೊತ್ತಾಗುತ್ತದೆ. ಮ್ಯಾಟ್ರಿಮೋನಿಯಲ್ಲಿ ಪರಿಚಯವಾದ ರಮಣಮ್ಮ ನಾನು ಅನಾಥೆ. ನನ್ನನ್ನು ನೋಡಿಕೊಳ್ಳುವವರು ಯಾರೂ ಇಲ್ಲ ಎಂದು ಸುಳ್ಳಿನ ಕಥೆ ಹೆಣೆದಿದ್ದಾಳೆ. ಈಕೆಯ ಕಥೆ ಕೇಳಿ ಭಾವುಕರಾದ ವೆಂಕಟರಮಣ ಆಕೆಯನ್ನೇ ಮದುವೆಯಾಗಲು ನಿರ್ಧರಿಸುತ್ತಾರೆ. ಹೀಗಾಗಿ ಮೇ 2ರಂದು ವಿಳ್ಳಿವಕ್ಕಂನಲ್ಲಿರುವ ಕಾಳಿಯಮ್ಮನ್ ದೇವಾಲಯದಲ್ಲಿ ಇಬ್ಬರೂ ಮದುವೆಯಾಗಿದ್ದಾರೆ. ಮದುವೆಯಾದ ಬಳಿಕ ಇಬ್ಬರೂ ವಿಳಿವಕ್ಕಂನಲ್ಲಿರುವ ನಿವಾಸದಲ್ಲಿ ವಾಸವಾಗಿದ್ದರು.
ಸದ್ಯ ಚೆನ್ನೈ ಪೊಲೀಸರು ತನಿಖೆ ಮುಂದುವರಿಸಿದ್ದು, ರಮಣಮ್ಮ ಅವರನ್ನು ಬಂಧಿಸಲು ತಂಡವನ್ನು ರಚಿಸಿದ್ದಾರೆ.