ಬೆಂಗಳೂರು: ಮಂಗಳೂರು ಬಜ್ಪೆ ವಿಮಾನ ನಿಲ್ದಾಣದಲ್ಲಿ ಕಳೆದ ಮೂರು ದಿನಗಳ ಹಿಂದೆ ಪತ್ತೆಯಾಗಿದ್ದ ಬಾಂಬ್ ಪ್ರಕರಣ ಜನರ ಮನಸ್ಸಿನಲ್ಲಿ ಸಾಕಷ್ಟು ಆತಂಕವನ್ನು ಸೃಷ್ಟಿ ಮಾಡಿತ್ತು. ಕಳೆದ ಮೂರು ದಿನಗಳಿಂದ ಪ್ರಕರಣದಲ್ಲಿ ಹಲವು ಬೆಳವಣಿಗೆಗಳು ಕಾಣಿಸಿಕೊಂಡು ಬಾಂಬ್ ಇಟ್ಟಿದ್ದ ಆರೋಪಿ ಆದಿತ್ಯ ರಾವ್ ಪೊಲೀಸ್ರ ಎದುರು ಶರಣಾಗಿದ್ದ. ಇದರ ಬೆನ್ನಲ್ಲೇ ಕರ್ನಾಟಕ ವಾಣಿಜ್ಯ ಮಂಡಳಿಯಲ್ಲಿ ‘1st ರ್ಯಾಂಕ್ ಟೆರರಿಸ್ಟ್ ಆದಿತ್ಯ’ ಶೀರ್ಷಿಕೆಯನ್ನು ರಿಜಿಸ್ಟರ್ ಮಾಡಲಾಗಿದೆ.
ಮಂಗಳೂರು ಬಾಂಬ್ ಪ್ರಕರಣ ಇದೀಗ ತೆರೆಮೇಲೆ ಬರಲಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ‘1st ರ್ಯಾಂಕ್ ಟೆರರಿಸ್ಟ್ ಆದಿತ್ಯ’ ಅನ್ನೋ ಹೆಸರಲ್ಲಿ ಟೈಟಲ್ ರಿಜಿಸ್ಟರ್ ಆಗಿದೆ. ನಿರ್ಮಾಪಕ ತುಳಸಿರಾಮ್ ಅವರು ಟೈಟಲ್ ರಿಜಿಸ್ಟರ್ ಮಾಡಿಸಿದ್ದಾರೆ.
ರಾಜ್ಯದಲ್ಲಿ ಆದಿತ್ಯ ರಾವ್ ಬಾಂಬ್ ಇಟ್ಟ ಪ್ರಕರಣ ಭಾರೀ ಚರ್ಚೆಗೆ ಕಾರಣವಾಗಿದ್ದು, ನಿರ್ಮಾಪಕರು ಈ ಘಟನೆಯನ್ನೇ ಆಧಾರವಾಗಿಟ್ಕೊಂಡು ಆದಿತ್ಯ ಹೆಸರನ್ನೇ ಟೈಟಲ್ನಲ್ಲೂ ಇಟ್ಟು ಸಿನಿಮಾ ಮಾಡಲು ಮುಂದಾಗಿದ್ದಾರೆ. ಶ್ರೀನಿವಾಸ್ ಸಿನಿಮಾಸ್ ಸಂಸ್ಥೆಯ ಮೂಲಕ ಚಿತ್ರ ತೆರೆಗೆ ಬರಲಿದ್ದು, ಆದರೆ ಈ ಸಿನಿಮಾ ಯಾವಾಗ ಸೆಟ್ಟೇರುತ್ತೆ? ಚಿತ್ರದ ನಿರ್ದೇಶಕರು ಯಾರು? ಕಥೆ ಏನು? ತೆರೆಮೇಲೆ ಆದಿತ್ಯ ಪಾತ್ರವನ್ನು ಯಾರು ನಿರ್ವಹಿಸಿಲಿದ್ದಾರೆ ಎಂಬುವುದು ಸಾಕಷ್ಟು ಕುತೂಹಲ ಮೂಡಿದೆ.