ಪ್ರಭಾಸ್ (Prabhas) ನಟನೆಯ ‘ಆದಿಪುರುಷ್’ (Adipurush) ಸಿನಿಮಾ ನಾನಾ ಕಾರಣಗಳಿಂದಾಗಿ ಸದ್ದಾಗುತ್ತಿದೆ. ಗ್ರಾಫಿಕ್ಸ್ ಕಾರಣದಿಂದಾಗಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದರೆ, ಪಾತ್ರಗಳ ಆಯ್ಕೆ ಮತ್ತು ಅದರ ಪೋಷಣೆಯ ಕಾರಣದಿಂದಾಗಿ ಹಿಂದೂಗಳ ಕಣ್ಣು ಕೆಂಪಾಗಿಸಿದೆ. ಅಯೋಧ್ಯೆಯಲ್ಲಿ ಅದ್ಧೂರಿಯಾಗಿ ಟೀಸರ್ ರಿಲೀಸ್ ಮಾಡುವ ಮೂಲಕ ಹಿಂದೂಗಳನ್ನು ತಮ್ಮತ್ತ ಸೆಳೆದುಕೊಳ್ಳುವ ಪ್ಲ್ಯಾನ್ ಉಲ್ಟಾ ಆಗಿದೆ. ಹಾಗಾಗಿ ಸಿನಿಮಾ ವಿವಾದಕ್ಕೆ ಕಾರಣವಾಗಿದೆ.
ಆದಿಪುರುಷ್ ಸಿನಿಮಾದಲ್ಲಿ ರಾಮ, ಸೀತೆ, ಆಂಜನೇಯ, ರಾವಣ ಸೇರಿದಂತೆ ಹಲವು ಪಾತ್ರಗಳನ್ನು ಕೆಟ್ಟದ್ದಾಗಿ ಬಿಂಬಿಸಲಾಗಿದೆ ಎನ್ನುವುದು ಚಿತ್ರತಂಡದ ಮೇಲಿನ ಆರೋಪ. ಇದೀಗ ಅದು ಕೇವಲ ಆರೋಪವಾಗಿ ಉಳಿದುಕೊಂಡಿಲ್ಲ. ಕಾನೂನು ಸಮರಕ್ಕೂ ರೆಡಿಯಾಗಿದೆ. ನಟ ಪ್ರಭಾಸ್ , ಸೈಫ್ ಅಲಿಖಾನ್ (Saif Ali Khan) ಹಾಗೂ ನಿರ್ದೇಶಕ ಓಂ ರಾವತ್ (Om Rawat) ಸೇರಿ ಚಿತ್ರತಂಡದ ಐವರ ವಿರುದ್ಧ ಕೇಸ್ ದಾಖಲಿಸಲಾಗಿದೆ. ಇದನ್ನೂ ಓದಿ:ತಮಿಳು ಬಿಗ್ ಬಾಸ್ಗೆ ಕಾಲಿಟ್ಟ ಕನ್ನಡತಿ ರಚಿತಾ ಮಹಾಲಕ್ಷ್ಮಿ
ಆದಿಪುರುಷ್ ಸಿನಿಮಾದಲ್ಲಿ ರಾಮ, ರಾವಣ ಸೇರಿದಂತೆ ಹಲವು ಪಾತ್ರಗಳನ್ನು ನೈಜವಾಗಿ ತೋರಿಸಿಲ್ಲ. ಆ ಪಾತ್ರಗಳಿಗೆ ಅವಮಾನ ಮಾಡಲಾಗಿದೆ ಎಂದು ಉತ್ತರ ಪ್ರದೇಶದಲ್ಲಿ ವ್ಯಕ್ತಿಯೊಬ್ಬರು ದೂರು ಸಲ್ಲಿಸಿದ್ದಾರೆ. ಈ ಸಂಬಂಧ ದೂರು ಸ್ವೀಕರಿಸಿರುವ ನ್ಯಾಯಾಲಯವು (Court) ಅಕ್ಟೋಬರ್ 27ರಂದು ವಿಚಾರಣೆ ನಡೆಸಲು ದಿನಾಂಕ ನಿಗದಿ ಮಾಡಿದೆ. ಈ ಹಿಂದೆಯೂ ದೆಹಲಿಯಲ್ಲೂ ಮತ್ತೊಂದು ದೂರು ಚಿತ್ರತಂಡದ ವಿರುದ್ಧ ದಾಖಲಾಗಿತ್ತು.
ಐನೂರು ಕೋಟಿಗೂ ಅಧಿಕ ಬಜೆಟ್ ನಲ್ಲಿ ಈ ಸಿನಿಮಾ ತಯಾರಾಗಿದ್ದು, 3 ಡಿಯಲ್ಲೂ ಈ ಚಿತ್ರವನ್ನು ನೋಡಬಹುದಾಗಿದೆ. ಗ್ರಾಫಿಕ್ಸ್ ಕಳಪೆಯಾಗಿಲ್ಲ, ಅದು 3 ಡಿ ತಂತ್ರಜ್ಞಾನದಲ್ಲಿ ಮೂಡಿ ಬಂದಿರುವುದರಿಂದ ಮಸುಕಾಗಿ ಕಾಣಿಸುತ್ತಿದೆ ಎಂದು ಮೊನ್ನೆಯಷ್ಟೇ ನಿರ್ದೇಶಕರು ಸ್ಪಷ್ಟನೆ ಕೊಟ್ಟಿದ್ದರು. ಆ ಪಾತ್ರಗಳ ಪೋಷಣೆಯನ್ನು ಯಾಕೆ ಆ ರೀತಿಯಲ್ಲಿ ಚಿತ್ರಿಸಿದ್ದಾರೆ ಎನ್ನುವುದನ್ನು ಕೋರ್ಟನಲ್ಲಿ ನಿರ್ದೇಶಕರು ಹೇಳಬೇಕಿದೆ. ಅಲ್ಲದೇ, ಎಲ್ಲವನ್ನೂ ಸರಿ ಮಾಡಿಕೊಂಡೇ ಚಿತ್ರವನ್ನು ರಿಲೀಸ್ ಮಾಡಬೇಕಿದೆ.