ಕಾರವಾರ: ಖ್ಯಾತ ಸಿನಿಮಾ ತಾರೆ, ಮಾಜಿ ಸಚಿವ ಉಮಾಶ್ರೀ (Umashree) ಅವರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಮೊದಲ ಬಾರಿ ಯಕ್ಷಗಾನದ ಮೂಲಕ ಚಂಡೆಯ ಪೆಟ್ಟಿಗೆ ಹೆಜ್ಜೆ ಹಾಕಲಿದ್ದಾರೆ.
ಕನ್ನಡ ಸಿನಿಮಾ ರಂಗದಲ್ಲಿ 125 ಕ್ಕೂ ಹೆಚ್ಚು ಸಿನಿಮಾದಲ್ಲಿ ನಟಿಸಿದ್ದಲ್ಲದೇ ನಾಟಕ ರಂಗದಲ್ಲಿ ನಟಿಸಿ ಹೆಸರುಗಳಿಸಿರುವ ಉಮಾಶ್ರೀ ಅವರು ಇದೇ ಮೊದಲ ಬಾರಿಗೆ ಯಕ್ಷಗಾನ ರಂಗ ಪ್ರವೇಶ ಮಾಡಲಿದ್ದಾರೆ.
ಹೊನ್ನಾವರದ ಸೇಂಟ್ ಅಂಥೋನಿ ಮೈದಾನದಲ್ಲಿ ಶುಕ್ರವಾರ ಪೆರ್ಡೂರು ಅನಂತ ಪದ್ಮನಾಭ ಯಕ್ಷಗಾನ ಮಂಡಳಿಯ ಶ್ರೀರಾಮ ಪಟ್ಟಾಭಿಷೇಕ, ಮಾಯಮೃಗಾವತಿ ಯಕ್ಷಗಾನ ಪ್ರದರ್ಶನಗೊಳ್ಳಲಿದ್ದು, ಈ ಯಕ್ಷಗಾನದಲ್ಲಿ ನಟಿ ಉಮಾಶ್ರೀ ಅವರು ಮಂಥರೆಯಾಗಿ ಕಾಣಿಸಿಕೊಳ್ಳಲಿದ್ದಾರೆ.
ಇವರೊಂದಿಗೆ ಪ್ರಸಿದ್ಧ ಯಕ್ಷಗಾನ ಕಲಾವಿದರಾದ ಕಾರ್ತಿಕ್ ಚಿಟ್ಟಾಣಿ, ಉದಯ್ ಹೆಗಡೆ, ಅಪ್ಟಣ್ಣ ಗೌಡ ಮಾಗೋಡು ಸೇರಿದಂತೆ ಹಲವು ಪ್ರಸಿದ್ಧ ಕಲಾವಿದರು ಭಾಗಿಯಾಗಲಿದ್ದಾರೆ.
ಯಾರೀ ಮಂಥರೆ?
ಮಂಥರ ರಾಮಾಯಣದ ಒಂದು ವಿಶೇಷ ಪಾತ್ರ. ರಾಮಾಯಣದಲ್ಲಿ ಅವಳನ್ನು ಕುರೂಪಿಯಂತೆ ವರ್ಣಿಸಲಾಗಿದೆ. ಅವಿವಾಹಿತೆಯಾದ ಅವಳು ಕೈಕೇಯಿಯ ನಂಬಿಗಸ್ತ ಸೇವಕಿ, ಸಖಿ. ರಾಮಾಯಣ ಮಹಾಕಾವ್ಯದಲ್ಲಿ, ಅಯೋಧ್ಯೆಯ ಸಿಂಹಾಸನವು ತನ್ನ ಮಗ ಭರತನಿಗೆ ಸೇರಿದ್ದು ಮತ್ತು ರಾಮನನ್ನು ರಾಜ್ಯದಿಂದ ಗಡಿಪಾರು ಮಾಡಬೇಕೆಂದು ರಾಣಿ ಕೈಕೇಯಿಗೆ ಮನವರಿಕೆ ಮಾಡಿಕೊಟ್ಟಳು ಈ ಮಂಥರೆ. ಕೈಕೇಯಿಯ ತಾಯಿಯನ್ನು ಹೊರಹಾಕಿದ ನಂತರ ಕೈಕೇಯಿ ಮತ್ತು ಅವಳ ಅವಳಿ ಯುಧಜಿತ್ಗೆ ಸಾಕು ತಾಯಿಯಾಗಿ ಅವಳನ್ನು ಚಿತ್ರಿಸಲಾಗಿದೆ. ಕೈಕೇಯಿ ದಶರಥನನ್ನು ಮದುವೆಯಾದ ನಂತರ ಅವಳು ಕೈಕೇಯಿಯೊಂದಿಗೆ ಅಯೋಧ್ಯೆಗೆ ಹೋದಳು. ರಾಮಾಯಣ ಕಥನಕ್ಕೆ ಈಕೆ ಮುಖ್ಯ ಪಾತ್ರಧಾರಿ.
ಯಕ್ಷಗಾನದಲ್ಲಿ ಮಂಥರೆ ಪಾತ್ರವನ್ನು ಹೆಚ್ಚಾಗಿ ಪುರುಷರೇ ಮಾಡುತ್ತಾರೆ. ನವರಸವನ್ನು ಹೊಂದಿದ ಈ ಪಾತ್ರ ಯಕ್ಷ ರಾಮಾಯಣದಲ್ಲಿ ಪ್ರಮುಖ ಪಾತ್ರವೂ ಹೌದು. ಇತ್ತೀಚಿನ ದಿನದಲ್ಲಿ ಯಕ್ಷಗಾನ ತನ್ನ ಹೊಸತನಕ್ಕೆ ಬೆಸೆದುಕೊಳ್ಳುತ್ತಿದ್ದು, ಪುರಷರಿಗೆ ಸೀಮಿತವಾಗಿದ್ದ ಗಂಡು ಕಲೆಯನ್ನು ಇದೀಗ ಮಹಿಳೆಯರು ಸಹ ಮಾಡುತ್ತಿದ್ದಾರೆ. ಮೊದಲ ಬಾರಿ ಯಕ್ಷ ಲೋಕಕ್ಕೆ ಉಮಾಶ್ರೀ ಪಾದಾರ್ಪಣೆ ಹೊಸ ಹುಮ್ಮಸ್ಸು ತರಿಸಿದೆ.