ಸುಧಾರಾಣಿ ಎಂಬ ಹೆಸರು ಕೇಳಿದಾಕ್ಷಣ ಕನ್ನಡ ಸಿನಿಮಾ ಪ್ರೇಮಿಗಳ ಸ್ಮೃತಿಪಟಲದಲ್ಲಿ ವೈವಿಧ್ಯಮಯ ಪಾತ್ರಗಳು ಹಾದು ಹೋಗುತ್ತವೆ. ಇಂಥಾ ಪಾತ್ರಗಳ ಮೂಲಕವೇ ಅಭಿಮಾನ ಮಾತ್ರವಲ್ಲದೇ ಕನ್ನಡಿಗರ ಮನೆಮಗಳಂತೂ ತುಂಬು ಪ್ರೀತಿಯನ್ನು ತನ್ನದಾಗಿಸಿಕೊಂಡಿರುವವರು ಸುಧಾರಾಣಿ. ಓರ್ವ ಕಲಾವಿದೆ ಕಾಲ ಸರಿದಂತೆ ಹೊಂದೋ ರೂಪಾಂತರ, ಆ ಮೂಲಕವೇ ಮತ್ತೆ ಪ್ರೇಕ್ಷಕರನ್ನು ಮುಖಾಮುಖೀಯಾಗೋ ಪುಳಕಗಳನ್ನೂ ತಮ್ಮದಾಗಿಸಿಕೊಂಡಿರೋ ಸುಧಾರಾಣಿ ಇದೀಗ ಚಿತ್ರಕಥಾ ಮೂಲಕ ಮತ್ತೆ ಬಂದಿದ್ದಾರೆ.
ಚಿತ್ರಕಥಾ ಈಗಾಗಲೇ ಕುತೂಹಲದ ಉತ್ತುಂಗದಲ್ಲಿರೋ ಚಿತ್ರ. ಇದು ಯಶಸ್ವಿ ಬಾಲಾದಿತ್ಯ ನಿರ್ದೇಶನದ ಚೊಚ್ಚಲ ಚಿತ್ರ. ಇದರ ಹಿಂದೆ ಪ್ರತಿಭಾವಂತ ಯುವ ಮನಸುಗಳದ್ದೊಂದು ತಂಡವಿದೆ. ಅದರ ಹುಮ್ಮಸ್ಸೇನೆಂಬುದು ಈಗಾಗಲೇ ಪ್ರೇಕ್ಷಕರ ಗಮನಕ್ಕೂ ಬಂದಿದೆ. ಸೈಕಾಲಾಜಿಕಲ್ ಥ್ರಿಲ್ಲರ್ ಕಥೆ ಹೊಂದಿರುವ ಚಿತ್ರಕಥಾದಲ್ಲಿ ತಾರಾಗಣವೂ ಪ್ರಧಾನ ಆಕರ್ಷಣೆ. ಅದರಲ್ಲಿಯೂ ಸುಧಾರಾಣಿ ಇಲ್ಲಿ ನಿರ್ವಹಿಸಿರೋ ಪಾತ್ರವಂತೂ ಅಪರೂಪದ್ದು.
ಯಾರೋ ಅನಾಮಿಕ ಕಲಾವಿದ ಬರೆದೊಂದು ಚಿತ್ರದ ಸುತ್ತಲಿನ ನಿಗೂಢದ ಸಸ್ಪೆನ್ಸ್ ಥ್ರಿಲ್ಲರ್ ಕಥೆ ಈ ಚಿತ್ರದಲ್ಲಿದೆ. ಅದರ ಸೂತ್ರಧಾರಿಣಿಯಂಥಾ ಪಾತ್ರ ಸುಧಾ ರಾಣಿಯವರದ್ದು. ನಿರ್ದೇಶಕ ಯಶಸ್ವಿ ಬಾಲಾದಿತ್ಯ ಈ ಕಥೆ ಬರೆಯುವಾಗಲೇ ಇದೊಂದು ಪಾತ್ರಕ್ಕೆ ಸುಧಾರಾಣಿಯವರನ್ನು ಗಮನದಲ್ಲಿಟ್ಟುಕೊಂಡಿದ್ದರಂತೆ. ನಂತರ ಸುಧಾರಾಣಿಯವರು ಕೂಡಾ ಈ ಪಾತ್ರವನ್ನು ಅಷ್ಟೇ ಪ್ರೀತಿಯಿಂದ ಒಪ್ಪಿಕೊಂಡು ನಟಿಸಿದ್ದಾರೆ. ಸುಧಾರಾಣಿ ತಮ್ಮ ಪಾತ್ರವನ್ನು ಮಾತ್ರವೇ ಗಮನದಲ್ಲಿಟ್ಟುಕೊಳ್ಳದೇ ಇಡೀ ಚಿತ್ರವನ್ನು ತಮ್ಮದೆಂದೇ ಭಾವಿಸಿ ನಡೆದುಕೊಂಡ ರೀತಿಯ ಬಗ್ಗೆ ಈ ಹೊಸಬರ ತಂಡದಲ್ಲೊಂದು ಖುಷಿಯಿದೆ. ಈ ಚಿತ್ರ 12ನೇ ತಾರೀಕು ಅಂದರೆ ಈ ವಾರವೇ ಬಿಡುಗಡೆಯಾಗುತ್ತಿದೆ.