– ಮೀಟೂ ಅನುಭವವಾದ್ರೆ ಚಪ್ಪಲಿ ಕೈಗೆ ಬರಲಿ
ಬೆಂಗಳೂರು: ನಟಿ ಶ್ರುತಿ ಹರಿಹರನ್ ಮತ್ತೆ ಮೀಟೂ ಬಗ್ಗೆ ಮಾತನಾಡಿದ್ದು, ಯುವತಿಯರು ಹಾಗೂ ಮಹಿಳೆಯರ ಜೊತೆಗೆ ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ನಗರದ ಖಾಸಗಿ ಹೋಟೆಲ್ನಲ್ಲಿ ಫೇಸ್ಬುಕ್ ವತಿಯಿಂದ ಹಿರಿಯ ಪತ್ರಕರ್ತೆ ಬರ್ಖಾ ದತ್ ನೇತೃತ್ವದಲ್ಲಿ ‘ವಿ ದಿ ವುಮೆನ್’ ಎಂಬ ಸಂವಾದವನ್ನು ಇಂದು ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶ್ರುತಿ ಹರಿಹರನ್ ಮೀಟೂ ವಿಚಾರವಾಗಿ ಮಾತನಾಡಿದ್ದಾರೆ. ಇದನ್ನೂ ಓದಿ: ಪುತ್ರಿಯ ವಿಡಿಯೋ ಪೋಸ್ಟ್ ಮಾಡಿ ಭಾವನಾತ್ಮಕ ಸಾಲು ಬರೆದ ಶ್ರುತಿ ಹರಿಹರನ್
ನನ್ನ ಮೇಲೆ ಲೈಂಗಿಕ ದೌರ್ಜನ್ಯವಾಗಿದೆ ಎಂದು ಮೀಟೂ ದೂರು ಕೊಟ್ಟಿದ್ದಕ್ಕೆ ಹೆಮ್ಮೆ ಇದೆ. ನಾನು ಯಾವುತ್ತೂ ಮುಜುಗರ ಪಟ್ಟುಕೊಂಡಿಲ್ಲ. ಕಾನೂನು ಹೋರಾಟ ಮುಂದುವರಿಸುತ್ತೇನೆ ಎಂದು ಶ್ರುತಿ ಹರಿಹರನ್ ತಿಳಿಸಿದ್ದಾರೆ.
ಮೀಟೂ ವಿಚಾರದಿಂದಾಗಿ ಸಿನಿಮಾ ಅವಕಾಶಗಳು ಕಡಿಮೆಯಾಯಿತು. ಇದಕ್ಕೆ ಖಂಡಿತ ವಿಷಾದವಿಲ್ಲ. ಘಟನೆಯಿಂದಾಗಿ ಇಲ್ಲಿಯವರೆಗೂ ಯಾವುದೇ ಸಿನಿಮಾ ಅವಕಾಶ ಬಂದಿಲ್ಲ. ಇದರ ಬಗ್ಗೆ ನನಗೆ ಚಿಂತೆ ಇಲ್ಲ. ಈ ಒಂದು ವರ್ಷದಲ್ಲಿ ಕುಟುಂಬದ ಜೊತೆಗೆ ಕಾಲ ಕಳೆಯಲು ಅವಕಾಶ ಸಿಕ್ಕಿತು. ಮಗಳು ಹಾಗೂ ಪತಿಯ ಜೊತೆಗೆ ಸಂತೋಷವಾಗಿದ್ದೇನೆ ಎಂದರು. ಇದನ್ನೂ ಓದಿ: ಡಬಲ್ ಸಂಭ್ರಮದಲ್ಲಿ ಶ್ರುತಿ ಹರಿಹರನ್
ಈ ಬಾರಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಬಂದಿದ್ದು ಹೆಚ್ಚು ಖುಷಿಕೊಟ್ಟಿದೆ. ಪ್ರಶಸ್ತಿ ಬಂದಿರುವುದಕ್ಕೆ ಮತ್ತೆ ಸಿನಿಮಾಗಳಲ್ಲಿ ನಟಿಸಲು ಅವಕಾಶ ಸಿಗಬಹುದು ಎಂಬ ನಿರೀಕ್ಷೆ ಹೊಂದಿದ್ದೇನೆ. ಮೀಟೂನಂತಹ ಪ್ರಕರಣಗಳಲ್ಲಿ ಸಾಕ್ಷಿ ಇರುವುದಿಲ್ಲ. ಹೀಗಾಗಿ ಇಂತಹ ಪ್ರಕರಣಗಳಲ್ಲಿ ಧೈರ್ಯದಿಂದ ಹೋರಾಡಬೇಕು ಎಂದು ತಿಳಿಸಿದರು.
ಇದೇ ಕಾರ್ಯಕ್ರದಲ್ಲಿ ಮಾತನಾಡಿದ ಶ್ರುತಿ ಹರಿಹರನ್ ತಾಯಿ, ನಿಮಗೆ ಮೀಟೂ ಅನುಭವ ಆದರೆ ಸುಮ್ಮನೆ ಇರಬೇಡಿ. ಸುಂದರ ಚಪ್ಪಲಿ ಕೈಗೆ ಎತ್ತಿಕೊಳ್ಳಿ ಎಂದು ಸಂವಾದದಲ್ಲಿ ಸೇರಿದ್ದ ಮಹಿಳೆಯರಿಗೆ ತಿಳಿಸಿದರು.