ಬೆಂಗಳೂರು: ಇಂದು ನಾಡಿನಾದ್ಯಂತ ಜನರು ದಸರಾ ಹಬ್ಬವನ್ನು ಆಚರಿಸುತ್ತಿದ್ದಾರೆ. ಹಬ್ಬದ ದಿನವೇ ನಟಿ ಶ್ವೇತಾ ಶ್ರೀವಾತ್ಸವ್ ಮತ್ತೆ ತೆರೆ ಮೇಲೆ ಬರುತ್ತಿರುವ ಗುಡ್ನ್ಯೂಸ್ ಕೊಟ್ಟಿದ್ದಾರೆ. ಈ ಮೂಲಕ ಶ್ವೇತಾ ಮೂರು ವರ್ಷಗಳ ನಂತರ ಮತ್ತೆ ಸ್ಯಾಂಡಲ್ವುಡ್ಗೆ ವಾಪಸ್ ಆಗುತ್ತಿದ್ದಾರೆ.
ಶ್ವೇತಾ ಅವರು ಇನ್ಸ್ಟಾಗ್ರಾಂನಲ್ಲಿ ತಮ್ಮ ಕೆಲವು ಫೋಟೋಗಳನ್ನು ಹಂಚಿಕೊಂಡು ಈ ಬಗ್ಗೆ ತಿಳಿಸಿದ್ದಾರೆ. “ನಮಸ್ಕಾರ, ಹಬ್ಬದ ಶುಭಾಶಯಗಳು. ಇಂದು ನನ್ನ ಒಂದು ಸಂತಸದ ವಿಷಯವನ್ನು ಹಂಚಿಕೊಳ್ಳಲು ಇಚ್ಛಿಸುತ್ತೇನೆ” ಎಂದು ಹೇಳಿಕೊಂಡಿದ್ದಾರೆ.
ತುಂಬಾ ಸಮಯದ ನಂತರ ನಾನು ಸಿನಿಮಾಗೆ ಸಹಿ ಮಾಡಿದ್ದೇನೆ. ಅದರಲ್ಲಿ ನಾನು ಸೂಪರ್ ಕಾಪ್ ಆಗಿ ಕಾಣಿಸಿಕೊಳ್ಳಲಿದ್ದೇನೆ. ನಿಮ್ಮ ಬೆಂಬಲ ಮತ್ತು ಆರ್ಶೀವಾದ ಸದಾ ಹೀಗೆ ಇರಲಿ. ಸಿನಿಮಾಗೆ ‘ರಹದಾರಿ’ ಎಂಬ ಟೈಟಲ್ ಫಿಕ್ಸ್ ಮಾಡಲಾಗಿದೆ. ನಿರ್ದೇಶಕ ಗಿರೀಶ್ ವೈರಮುಡಿ ಆಕ್ಷನ್-ಕಟ್ ಹೇಳುತ್ತಿದ್ದು, ಮಂಜುನಾಥ ಶಾಮನೂರು ಮತ್ತು ಬಸವರಾಜು ಅವರು ನಿರ್ಮಾಣ ಮಾಡುತ್ತಿದ್ದಾರೆ. ರೋಣದ ಬಕ್ಕೇಶ್ ಮತ್ತು ಕೆ.ಸಿ.ರಾವ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ” ಎಂದು ಸಿನಿಮಾದ ಬಗ್ಗೆ ಸಂಪೂರ್ಣ ಮಾಹಿತಿ ಕೊಟ್ಟಿದ್ದಾರೆ.
ಈ ಸಿನಿಮಾದ ಮೂಲಕ ಮೊದಲ ಬಾರಿಗೆ ಶ್ವೇತಾ ಖಾಕಿ ತೊಡಲಿದ್ದು, ವಿಶಿಷ್ಟ ರೀತಿಯ ಲುಕ್ ಇರಲಿದೆ. ಅಷ್ಟೇ ಅಲ್ಲದೇ ಚಿತ್ರದಲ್ಲಿ ಸಾಹಸದ ದೃಶ್ಯಗಳೂ ಇವೆ. ಈ ಹಿಂದೆ `ಒಂದ್ ಕಥೆ ಹೇಳ್ಲಾ’ ಚಿತ್ರವನ್ನು ನಿರ್ದೇಶಿಸಿದ್ದ ಗಿರೀಶ್ಗೆ ಇದು ಎರಡನೇ ಸಿನಿಮಾವಾಗಿದೆ. `ಇದೊಂದು ರಾಬರಿ-ಥ್ರಿಲ್ಲರ್ ಶೈಲಿಯ ಸಿನಿಮಾವಾಗಿದೆ. ಡಿಸೆಂಬರ್ನಲ್ಲಿ ಶೂಟಿಂಗ್ ಆರಂಭಿಸಲು ಚಿತ್ರತಂಡ ಪ್ಲಾನ್ ಮಾಡಿದೆ.
ಈ ಬಗ್ಗೆ ಮಾತನಾಡಿದ ನಿರ್ದೇಶಕ ಗಿರೀಶ್, ಈ ಹಿಂದೆ ಶಂಕರ್ನಾಗ್ ಮತ್ತು ಪ್ರಭಾಕರ್ ಅವರು ಇಂತಹ ಅನೇಕ ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಅವರ ಬಳಿಕ ಈ ಶೈಲಿಯ ಸಿನಿಮಾಗಳು ಬಂದಿರಲಿಲ್ಲ. ಇದರಲ್ಲಿ ವಿಭಿನ್ನ ರೀತಿಯ ಕಥೆ ಹೆಣೆಯಲಾಗಿದ್ದು, ಒಬ್ಬ ಸೂಪರ್ ಕಾಪ್ ಹಾಗೂ ಒಂದು ರಾಬರಿ ತಂಡದ ನಡುವೆ ಕಥೆ ಸಾಗುತ್ತದೆ. ಸೂಪರ್ ಕಾಪ್ ಆಗಿ ಶ್ವೇತಾ ಅವರನ್ನು ಆಯ್ಕೆ ಮಾಡಲಾಗಿದೆ. ರಾಬರಿ ತಂಡದಲ್ಲಿ 2-3 ಪ್ರಮುಖ ಪಾತ್ರಗಳಿದ್ದು, ಅದಕ್ಕೂ ಸೇರಿ ಉಳಿದ ತಾರಾಗಣದ ಆಯ್ಕೆ ಮಾಡಬೇಕಿದೆ ಎಂದು ತಿಳಿಸಿದ್ದಾರೆ.
https://www.instagram.com/p/B3TbUrtjKcC/?utm_source=ig_embed&utm_campaign=dlfix