ಚಿಕ್ಕಬಳ್ಳಾಪುರ: ಬಹುಭಾಷಾ ತಾರೆ ನಟಿ ಪ್ರಣೀತಾ ಬಿಸಿಲಿನ ತಾಪಕ್ಕೆ ಬಳಲಿ ಬಸವಳಿದ ಘಟನೆ ಜಿಲ್ಲೆಯ ಚಿಂತಾಮಣಿ ನಗರದ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಕ್ರೀಡಾಂಗಣದಲ್ಲಿ ನಡೆಯಿತು.
ಎಬಿವಿಪಿ ಸಂಘಟನೆ ವತಿಯಿಂದ ಆಯೋಜಿಸಲಾಗಿದ್ದ ಮಿಷನ್ ಸಾಹಸಿ-2020 ಕಾರ್ಯಕ್ರಮಕ್ಕೆ ನಟಿ ಪ್ರಣೀತಾ ಹಾಗೂ ಬಾಡಿಬಿಲ್ಡರ್ ಮಮತಾ ಸನತ್ ಕುಮಾರ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ವಿಶಾಲವಾದ ಕ್ರೀಡಾಂಗಣದಲ್ಲಿ ಬಹಿರಂಗ ವೇದಿಕೆಯಲ್ಲಿ ನಡೆದ ಕಾರ್ಯಕ್ರಮಕ್ಕೆ ಸ್ವಲ್ಪ ತಡವಾಗಿ ಆಗಮಿಸಿದ ನಟಿ ಪ್ರಣೀತಾ ಬಿಸಿಲಿನ ತಾಪಕ್ಕೆ ಬಳಲಿ ಬೆಂಡಾದರು. ಸರಿ ಸುಮಾರು 20 ನಿಮಿಷಗಳ ಕಾಲ ಬಿಸಿಲಿನ ತಾಪಕ್ಕೆ ಕಸಿವಿಸಿಗೊಂಡ ನಟಿ ಪ್ರಣೀತಾ ಕೊನೆಗೆ ತಮ್ಮ ವೇಲ್ನ ಹೊದಿಕೆಯನ್ನು ತಲೆಗೆ ರಕ್ಷಾ ಕವಚವಾಗಿ ಮಾಡಿಕೊಂಡು ಬಿಸಿಲಿನ ತಾಪಮಾನದಿಂದ ಪಾರಾಗುವ ಕೆಲಸ ಮಾಡಿದ್ದರು. ಕೊನೆಗೆ ಛತ್ರಿ ತಂದ ಆಪ್ತ ಸಿಬ್ಬಂದಿ ನಟಿ ಪ್ರಣೀತಾರನ್ನು ಬಿಸಿಲಿನ ತಾಪದಿಂದ ಪಾರು ಮಾಡಿದರು.
ಐ ಲವ್ ಯೂ ಎಂದ ವಿದ್ಯಾರ್ಥಿ: ಕಾರ್ಯಕ್ರಮದಲ್ಲಿ ವಿವಿಧ ಕಾಲೇಜು ವಿದ್ಯಾರ್ಥಿಗಳನ್ನು ಕ್ರೀಡಾಂಗಣದಲ್ಲಿ ಒಂದು ಗೂಡಿಸಿ, ಅವರಿಗೆ ಕರಾಟೆ ತರಬೇತಿ ನಿರತ ವಿದ್ಯಾರ್ಥಿಗಳಿಂದ ಆಪತ್ತಿನ ಕಾಲದಲ್ಲಿ ಆತ್ಮರಕ್ಷಣೆ ಮಾಡಿಕೊಳ್ಳುವ ಕರಾಟೆಯ ಕಲೆಗಳ ಬಗ್ಗೆ ಅರಿವು ಮಾಡಿಕೊಡಲಾಯಿತು. ಹೆಣ್ಣು ಮಕ್ಕಳ ಮೇಲೆ ದಾಳಿ ನಡೆದಾಗ ಅವರಿಂದ ಪಾರಾಗುವ ವಿವಿಧ ಕರಾಟೆ ಕಲೆಗಳನ್ನು ಪ್ರದರ್ಶಿಸಿಲಾಯಿತು. ಇದೇ ವೇಳೆ ತರಬೇತಿ ಪಡೆದ ಮಕ್ಕಳು ತಮ್ಮ ಬರಿ ಗೈಯಿಂದ ಹೆಂಚು ಹೊಡೆಯುವುದು, ಬೆಂಕಿ ಬಲೆಯಲ್ಲಿ ಹಾರುವುದು ಸೇರಿದಂತೆ ಮೈ ಹಾಗೂ ಕೈ ಗಳ ಮೇಲೆ ಬೈಕ್ ಹರಿಸಿಕೊಳ್ಳುವ ವಿವಿಧ ಸಾಹಸ ಸ್ಟಂಟ್ಗಳನ್ನು ಪ್ರದರ್ಶನ ಮಾಡಿದರು.
ವಿದ್ಯಾರ್ಥಿಗಳ ಸ್ಟಂಟ್ಗಳನ್ನು ಕಂಡು ಅಥಿತಿಗಳು ಹಾಗೂ ವಿದ್ಯಾರ್ಥಿಗಳು ಚಪ್ಪಾಳೆ ತಟ್ಟುವ ಮೂಲಕ ಮೆಚ್ಚುಗೆ ಅಭಿನಂದನೆಗಳನ್ನು ಸಲ್ಲಿಸಿದರು. ಇನ್ನೂ ಇದೇ ವೇಳೆ ನಟಿ ಪ್ರಣೀತಾ ಹಾಗೂ ಬಾಡಿಬಿಲ್ಡರ್ ಮಮತಾ ಸನತ್ ಕುಮಾರ್ ರನ್ನು ನೋಡಲು ವಿದ್ಯಾರ್ಥಿಗಳು ಮುಗಿಬಿದ್ದು ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂತಸಪಟ್ಟರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ನಟಿ ಪ್ರಣೀತಾ, ಸದ್ಯ ಸಮಾಜದಲ್ಲಿ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣಗಳು ಸಂಭವಿಸುತ್ತಿವೆ. ನಿರ್ಭಯಾ ಅತ್ಯಾಚಾರ ಪ್ರಕರಣ, ಪ್ರಿಯಾಂಕಾ ಅತ್ಯಾಚಾರ ಪ್ರಕರಣಗಳ ನಡೆದಿದ್ದು, ಹೆಣ್ಣು ಮಕ್ಕಳಿಗೆ ತಮ್ಮನ್ನ ತಾವೇ ರಕ್ಷಣೆ ಮಾಡಿಕೊಳ್ಳುವ ಆತ್ಮರಕ್ಷಣೆಯ ಕಲೆಗಳನ್ನು ಕಲಿಯುವ ಅಗತ್ಯವಿದೆ. ಬಿಸಿಲನ್ನು ಲೆಕ್ಕಿಸದೆ ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದ್ದಾರೆ. ಕಾರ್ಯಕ್ರಮ ಆಯೋಜಿಸಿದ ಸಂಘಟನೆಗೆ ಧನ್ಯವಾದಗಳನ್ನು ತಿಳಿಸಿದರು. ಇದೇ ಕಾರ್ಯಕ್ರಮದಲ್ಲಿ ವೇದಿಕೆ ಮೇಲಿದ್ದ ನಟಿ ಪ್ರಣೀತಾಗೆ ವಿದ್ಯಾರ್ಥಿಯೊಬ್ಬ ವೇದಿಕೆ ಹಿಂಭಾಗದಿಂದ ಐ ಲವ್ ಯೂ ಎಂದು ಕೂಗಿ ನಾಪತ್ತೆಯಾದ ಘಟನೆಯೂ ನಡೆಯಿತು.