ಬೆಂಗಳೂರು: ಕೈ ಸ್ಟಾರ್ ಪ್ರಚಾರಕಿ, ಬಹುಭಾಷಾ ನಟಿ, ಕಾಂಗ್ರೆಸ್ ವಕ್ತಾರೆ ನಟಿ ಖುಷ್ಬೂ ಅವರ ಕಿವಿಯೋಲೆ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಶನಿವಾರ ನಡೆದ ಕೆಪಿಸಿಸಿ ಸಭೆಗೆ ಖುಷ್ಬೂ ಕಮಲದ ಹೂವಿನ ಕಿವಿಯೋಲೆ ಧರಿಸಿದ್ದು, ಸದ್ಯ ಈಗ ಸಾಕಷ್ಟು ವೈರಲ್ ಆಗಿದೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಜನರಲ್ಲಿ ಭಾರೀ ಕುತೂಹಲ ಉಂಟಾಗಿದೆ.
ಇದಕ್ಕೂ ಮೊದಲು ಬಿಜೆಪಿ ಖುಷ್ಬೂ ಅವರ ಮೂಲ ಹೆಸರನ್ನಿಟ್ಟುಕೊಂಡು ಸಾಮಾಜಿಕ ಜಾಲತಾಣದಲ್ಲಿ ದಾಳಿ ಆರಂಭಿಸಿತ್ತು. ಖುಷ್ಬೂ ತಮ್ಮ ಗುರುತನ್ನು ಮರೆಮಾಚುತ್ತಿದ್ದು, ತಮ್ಮ ಧರ್ಮವನ್ನು ಕೀಳಾಗಿ ನೋಡುತ್ತಿದ್ದಾರೆ. ಅಷ್ಟೇ ಅಲ್ಲದೇ ಹೆಸರನ್ನು ಮುಚ್ಚಿಡುತ್ತಿದ್ದಾರೆ ಎಂದು ಬಿಜೆಪಿ ಫಾಲೋವರ್ಸ್ ಗಳು ಸಾಮಾಜಿಕ ಜಾಲತಾಣದಲ್ಲಿ ಟೀಕೆ ಮಾಡತೊಡಗಿದರು.
ಈ ಟೀಕೆಯ ಬಳಿಕ ಖುಷ್ಬೂ ಅವರು ಟ್ವೀಟರ್ ಖಾತೆಯಲ್ಲಿ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ಖುಷ್ಬೂ ಸುಂದರ್ ಜೊತೆಗೆ ಬಿಜೆಪಿಗಾಗಿ ನಖಟ್ ಖಾನ್ ಎಂದು ಬರೆದುಕೊಂಡಿದ್ದಾರೆ.
ಬಿಜೆಪಿಯ ಟೀಕೆಗೆ ಪ್ರತಿಕ್ರಿಯಿಸಿದ ಅವರು, ಸಮಸ್ಯೆಗಳನ್ನು ಪರಿಹರಿಸಬೇಕಾದವರು ಬೇರೆಯವರ ವೈಯಕ್ತಿಕ ಜೀವನದಲ್ಲಿ ಚಿಲ್ಲರೆ ರಾಜಕೀಯ ಮಾಡುತ್ತಿದ್ದಾರೆ. ನನ್ನ ಪೋಷಕರು ನಖಟ್ ಎಂದು ಹೆಸರನ್ನು ಇಟ್ಟಿದ್ದರು. ಬಿಜೆಪಿಯವರಿಗೆ ಬುದ್ಧಿ ಕಲಿಸಲು ನಾನು ಹೆಸರು ಬದಲಾಯಿಸಿದ್ದೇನೆ ಎಂದು ತಿರುಗೇಟು ನೀಡಿದ್ದಾರೆ.