ಬೆಳಗಾವಿ/ಚಿಕ್ಕೋಡಿ: ಕನ್ನಡ ಚಲನಚಿತ್ರದ ಮಿನುಗು ತಾರೆ ಕಲ್ಪನಾ ಇಂದಿಗೆ ನಮ್ಮನ್ನ ಅಗಲಿ 40 ವರ್ಷಗಳಾಗಿವೆ. ಮೇ 12, 1979 ರಲ್ಲಿ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಗೋಟೂರ ಗ್ರಾಮದ ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದಲ್ಲಿ ವಜ್ರ ಅರಿದು ತಿಂದು ಕಲ್ಪನಾ ಆತ್ಮಹತ್ಯೆ ಮಾಡಿಕೊಂಡಿದ್ದರು.
ಮಿನುಗು ತಾರೆ ಸಾವನ್ನಪ್ಪಿ 40 ವರ್ಷಗಳು ಕಳೆದರೂ ಗೋಟೂರು ಗ್ರಾಮದಲ್ಲಿ ಕಲ್ಪನಾ ಆತ್ಮ ಇನ್ನೂ ಜೀವಂತವಾಗಿದೆ ಎಂಬ ಭಯ ಜನರನ್ನು ಕಾಡುತ್ತಿದೆ ಎಂದು ಕೆಲ ಗ್ರಾಮಸ್ಥರು ಹೇಳುತ್ತಾರೆ. ಬಹುತೇಕರು ಕಲ್ಪನಾ ಅವರ ಆತ್ಮ, ದೆವ್ವ, ಭೂತ ಇಂಥದು ಯಾವುದು ಇಲ್ಲ ಎಂದು ವಾದಿಸುತ್ತಾರೆ.
ಗೋಡಗೇರಿ ಬಸವರಾಜ್ ಮಾಲೀಕತ್ವದ ನಾಟಕ ಕಂಪನಿಯಿಂದ ಸಂಕೇಶ್ವರ ಪಟ್ಟಣದಲ್ಲಿ ಆಯೋಜಿಸಿದ್ದ ನಾಟಕದಲ್ಲಿ ಕಲ್ಪನಾ ಆಗಮಿಸಿದ್ದರು. ಅಂದು ಗೋಟೂರು ಗ್ರಾಮದ ಪ್ರವಾಸಿ ಮಂದಿರದಲ್ಲಿ ವಾಸ್ತವ್ಯ ಮಾಡಿದ್ದರು. ಆದರೆ ಗೋಡಗೇರಿ ಬಸವರಾಜ್ ನಡುವಿನ ಜಗಳದಿಂದ ಬೇಸತ್ತು ಕಲ್ಪನಾ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ಹೇಳಲಾಗುತ್ತದೆ.
ಮಿನುಗು ತಾರೆ ಕಲ್ಪನಾ ಸಾವನ್ನಪ್ಪಿ 40 ವರ್ಷಗಳು ಕಳೆದರೂ ಗೋಟೂರು ಗ್ರಾಮದಲ್ಲಿ ಒಂದು ರೀತಿಯ ಭಯ ಜನರನ್ನು ಕಾಡುವುದರಲ್ಲಿ ಎರಡು ಮಾತಿಲ್ಲ. ಅವರು ವಾಸವಿದ್ದ ಪ್ರವಾಸಿ ಮಂದಿರ ಹಾಗೂ ಅದರ ಸಮೀಪವಿರುವ ಮಾವಿನ ಮರ ಎಂದರೇ ಜನರಲ್ಲಿ ಇನ್ನೂ ಭಯ ಇರುವುದು ಅಷ್ಟೇ ಸತ್ಯ. ಮಾವಿನ ಮರದ ನೆರಳಲ್ಲಿ ಕಲ್ಪನಾ ವಿಶ್ರಾಂತಿ ಪಡೆಯುತ್ತಿದ್ದರು ಎಂದು ಸ್ಥಳೀಯರು ಹೇಳುತ್ತಾರೆ. ಏನೇ ಆಗಲಿ ಶರಪಂಜರದ ನಾ ಬಂದೇ ನಾ ಬಂದೇ ಎಂಬ ಕಲ್ಪನಾ ಅವರ ಡೈಲಾಗ್ ಗೋಟೂರ ಪ್ರವಾಸಿ ಮಂದಿರಕ್ಕೆ ಬರುವ ಪ್ರತಿಯೊಬ್ಬರು ಹೊಡೆದು ಮಿನುಗು ತಾರೆಯನ್ನು ನೆನಪು ಮಾಡಿಕೊಳ್ಳುತ್ತಾರೆ.