ಮೈಸೂರು: ಸ್ಯಾಂಡಲ್ವುಡ್ ನಟಿ ಹರಿಪ್ರಿಯಾ ಚಾಮುಂಡಿ ಬೆಟ್ಟವನ್ನು ಹತ್ತಿ ದೇವಿಯ ದರ್ಶನ ಪಡೆದಿದ್ದಾರೆ.
ಸೋಮವಾರ ಯುವದಸರಾ ಕಾರ್ಯಕ್ರಮಕ್ಕಾಗಿ ಮೈಸೂರಿಗೆ ಆಗಮಿಸಿದ್ದ ನಟಿ ಹರಿಪ್ರಿಯಾ ಮಂಗಳವಾರ ಚಾಮುಂಡಿಬೆಟ್ಟದ ತಪ್ಪಲಿನಿಂದ 1,001 ಮೆಟ್ಟಿಲುಗಳನ್ನ ಹತ್ತಿ ತಾಯಿಯ ದರ್ಶನ ಪಡೆದರು. ನಾನು ಎರಡನೇ ಬಾರಿ ಬೆಟ್ಟವನ್ನು ಹತ್ತಿದ್ದೇನೆ. ಮೈಸೂರೆಂದರೆ ನನಗೆ ಇಷ್ಟದ ಊರು. ಬೆಟ್ಟ ಹತ್ತವುದು ನನಗೆ ಇಷ್ಟ ಎಂದು ಹೇಳಿದರು.
ದಸರೆಯ ಅಂಗವಾಗಿ ಸೋಮವಾರ ರಾತ್ರಿಯ ಯುವ ದಸರಾ ಕಾರ್ಯಕ್ರಮ ಅಕ್ಷರಶಃ ಸ್ಯಾಂಡಲ್ವುಡ್ ಬೆಡಗಿಯರಿಂದ ಹಾಗೂ ಸಂಗೀತ ಗಾಯಕರಿಂದ ರಂಗೇರಿತ್ತು. ಮೈಸೂರು ಮಹಾರಾಜ ಕಾಲೇಜು ಮೈದಾನದಲ್ಲಿ ರಾತ್ರಿ ನಡೆದ ನಾಲ್ಕನೇ ದಿನದ ಯುವ ದಸರಾ ಕಾರ್ಯಕ್ರಮದಲ್ಲಿ ಸ್ಯಾಂಡಲ್ ವುಡ್ ಬೆಡಗಿಯರು ಮಾಡಿದ ಡ್ಯಾನ್ಸ್ಗೆ ಪಡ್ಡೆ ಹೈಕಳಂತು ಹುಚ್ಚೆದ್ದು ಕುಣಿದರು. ನಟಿಯರಾದ ಹರಿಪ್ರಿಯಾ, ಶುಭಾಪುಂಜಾ, ಸೋನುಗೌಡ ಹಾಗೂ ಇನ್ನಿತರ ನಟಿಯರ ಡ್ಯಾನ್ಸ್ ಯುವ ದಸರೆಯ ಸಂಭ್ರಮವನ್ನು ಇಮ್ಮಡಿಗೊಳಿಸಿತ್ತು.
ಸ್ಯಾಂಡಲ್ವುಡ್ ಬೆಡಗಿಯರ ನೃತ್ಯವಲ್ಲದೇ ಗಾಯಕರ ಕಂಠ ಸಿರಿಯಿಂದ ಮೂಡಿ ಬಂದ ಗಾಯನವೂ ನೆರದಿದ್ದವರ ಮನಕ್ಕೆ ತಂಪೆರೆದಿತ್ತು. ಸಂಜೀತ್ ಹೆಗ್ಡೆ, ಅನುರಾಧ ಭಟ್, ಸಂತೋಷ್, ಚಿನ್ಮಯ್ ಸೇರಿದಂತೆ ಇನ್ನಿತರ ಹಿನ್ನೆಲೆ ಗಾಯಕರು ಹಾಡಿದ ಟಪ್ಪಾಂಗ್ ಗುಚ್ಚಿ ಮೆಲೊಡಿ ಹಾಡುಗಳಿಗಂತೂ ಜನ ಹುಚ್ಚೆದ್ದು ಕುಣಿದರು. ಕುಣಿದು ಸುಸ್ತಾದ ಯುವಸ್ತೋಮವನ್ನು ಕಾಮಿಡಿ ಕಿಲಾಡಿ ಖ್ಯಾತಿ ಶಿವರಾಜ್ ಕೆ.ಆರ್.ಪೇಟೆ ಹಾಗೂ ನಯನ ತಮ್ಮ ಕಾಮಿಡಿಯಿಂದ ಹೊಟ್ಟೆ ಹುಣ್ಣಾಗುವಷ್ಟು ನಗಿಸಿದರು. ಇಷ್ಟೇ ಅಲ್ಲದೇ ಕಾಲೇಜು ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ನೃತ್ಯಗಳು ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿದವು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv