ಕರ್ನಾಟಕ ರಾಜ್ಯ ಚಲನಚಿತ್ರ ವರ್ಣಾಲಂಕಾರ ಮತ್ತು ಕೇಶಾಲಂಕಾರ ಕಲಾವಿದರ ಸಂಘದಿಂದ ಕ್ರಿಕೆಟ್ ಟೂರ್ನಿ ಆಯೋಜನೆ
ಇದೇ ಮೊದಲ ಬಾರಿಗೆ ತಂತ್ರಜ್ಞರಿಗಾಗಿ ‘ಕರ್ನಾಟಕ ರಾಜ್ಯ ಚಲನಚಿತ್ರ ವರ್ಣಾಲಂಕಾರ ಮತ್ತು ಕೇಶಾಲಂಕಾರ ಕಲಾವಿದರ ಸಂಘ’ದಿಂದ ಆಯೋಜಿಸಲಾಗಿರುವ ಕೆಎಂಹೆಚ್ಕಪ್ (KMH) ಕ್ರಿಕೆಟ್ ಟೂರ್ನಿ ಲೋಗೋ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ಈ ಟೂರ್ನಿಯ ರಾಯಭಾರಿ ಆಗಿರುವ ನಟಿ ಭಾವನಾ ರಾಮಣ್ಣ (Bhavana Ramanna) ಲೋಗೊ ಬಿಡುಗಡೆ ಮಾಡಿದರು. ಕಾಂಗ್ರೆಸ್ ಮುಖಂಡರಾದ ದಿನೇಶ್, ಸಂಘದ ಅಧ್ಯಕ್ಷರಾದ ಎಸ್.ಬಾಬು ಧರ್ಮೇಂದ್ರ ಹಾಗೂ ಕಾರ್ಯದರ್ಶಿ ದಿನೇಶ್ ಆಚಾರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಇದನ್ನೂ ಓದಿ:ಕನಸಿನಲ್ಲೂ ಯಾರಿಗೂ ಕೇಡು ಬಯಸೋರು ಅಲ್ಲ- ದರ್ಶನ್ ಪರ ನಿಂತ ತೆಲುಗು ನಟ ನಾಗ ಶೌರ್ಯ
ಕರ್ನಾಟಕ ರಾಜ್ಯ ಚಲನಚಿತ್ರ ವರ್ಣಾಲಂಕಾರ ಮತ್ತು ಕೇಶಾಲಂಕಾರ ಕಲಾವಿದರ ಸಂಘಕ್ಕೆ ಮೂವತ್ತೈದು ವರ್ಷಗಳ ಇತಿಹಾಸವಿದೆ. ಅನೇಕ ಹಿರಿಯರು ಈ ಸಂಘವನ್ನು ಕಟ್ಟಿ ಬೆಳೆಸಿದ್ದಾರೆ. ಇದೇ ಮೊದಲ ಬಾರಿಗೆ ನಮ್ಮ ಸಂಘದ ವತಿಯಿಂದ ಕೆಎಂಹೆಚ್ಕಪ್ ಕ್ರಿಕೆಟ್ ಟೂರ್ನಿ ಆಯೋಜಿಸಲಾಗಿದೆ. ಸದಾ ನಮ್ಮ ಸಂಘದ ಜೊತೆಯಿರುವ ನಟಿ ಭಾವನಾ ರಾಮಣ್ಣ ಈ ಟೂರ್ನಿಯ ರಾಯಭಾರಿಯಾಗಿದ್ದಾರೆ. ಜುಲೈ 20 ಹಾಗೂ 21 ಶನಿವಾರ ಹಾಗೂ ಭಾನುವಾರ ವಿಜಯನಗರದ ಬಿ.ಜಿ.ಎಸ್ ಮೈದಾನದಲ್ಲಿ ಈ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿ ನಡೆಯಲಿದೆ. ಬೆಳಗ್ಗೆ 8 ರಿಂದ ರಾತ್ರಿ 8ವರೆಗೂ ಪಂದ್ಯಗಳು ನಡೆಯುತ್ತದೆ. ನಾಕೌಟ್ ಪಂದ್ಯಗಳು ಆರು ಓವರ್ ಇರುತ್ತದೆ. ಫೈನಲ್ ಪಂದ್ಯ ಎಂಟು ಓವರ್ ನದಾಗಿರುತ್ತದೆ. ಗೆದ್ದ ಮೊದಲ ತಂಡಕ್ಕೆ 49,999 ರೂಪಾಯಿ ಹಾಗೂ ರನ್ನರ್ ತಂಡಕ್ಕೆ 24,999 ರೂಪಾಯಿ ಬಹುಮಾನ ನೀಡಲಾಗುವುದು.
ಟೂರ್ನಿಯಲ್ಲಿ ಭಾಗವಹಿಸುವ ತಂಡಕ್ಕೆ ಹತ್ತುಸಾವಿರ ಪ್ರವೇಶದರವಿರುತ್ತದೆ. ಕರ್ನಾಟಕ ಚಲನಚಿತ್ರ ಕಾರ್ಮಿಕರ ಒಕ್ಕೂಟಕ್ಕೆ ಒಳಪಡುವ ಹನ್ನೆರಡು ಸಂಘಗಳು ಹಾಗೂ ಮಾಧ್ಯಮದ ಮಿತ್ರರು ಈ ಟೂರ್ನಿಯಲ್ಲಿ ಭಾಗವಹಿಸಲಿದ್ದಾರೆ. ಒಟ್ಟು ಹದಿನಾಲ್ಕು ತಂಡಗಳು ಟೂರ್ನಿಯಲ್ಲಿ ಭಾಗಿಯಾಗಲಿದೆ ಎಂದು ಸಂಘದ ಅಧ್ಯಕ್ಷರಾದ ಬಾಬು ಧರ್ಮೇಂದ್ರ ತಿಳಿಸಿದರು.
ತಮ್ಮ ಮೊದಲ ಚಿತ್ರಕ್ಕೆ ಮೇಕಪ್ ಮಾಡಿದ ವೆಂಕಟೇಶ್ ಅವರನ್ನು ನೆನಪಿಸಿಕೊಂಡು ಮಾತು ಆರಂಭಿಸಿದ ಭಾವನಾ ರಾಮಣ್ಣ, ನಾನು ನಟಿಸುವ ಎಲ್ಲಾ ಚಿತ್ರಗಳ ನಿರ್ಮಾಪಕರಿಗೆ ಹೇಳುವುದು ಮೇಕಪ್ ಹಾಗೂ ಕೇಶಾಲಂಕಾರಕ್ಕೆ ಈ ಸಂಘದ ಸದಸ್ಯರೆ ಇರಲಿ ಎಂದು. ಈಗ ಸಾಕಷ್ಟು ಜನರು ಸಮಾಜಿಕ ಜಾಲತಾಣಗಳಲ್ಲಿ ಮೇಕಪ್ ಕುರಿತು ಪ್ರಮೋಷನ್ ಮಾಡಿಕೊಳ್ಳುತ್ತಾರೆ. ಅದರಿಂದ ಇವರಿಗೆ ಸ್ವಲ್ಪ ತೊಂದರೆಯಾಗುತ್ತಿದೆ. ಇನ್ನೂ ಈ ಟೂರ್ನಿಯ ಬಗ್ಗೆ ಹೇಳಬೇಕೆಂದರೆ, ಹೆಚ್ಚಾಗಿ ಕಲಾವಿದರು ಕ್ರಿಕೆಟ್ ಆಡುತ್ತೇವೆ. ತಂತ್ರಜ್ಞರು ಆಡುವುದು ಕಡಿಮೆ. ಕಾರ್ಮಿಕರು ಹಾಗೂ ತಂತ್ರಜ್ಞರಿಗಾಗಿ ಆಯೋಜಿಸಿರುವ ಈ ಕ್ರಿಕೆಟ್ ಟೂರ್ನಿಯ ರಾಯಭಾರಿಯಾಗಿದ್ದು ಖುಷಿಯಾಗಿದೆ. ಟೂರ್ನಿ ಯಶಸ್ವಿಯಾಗಲಿ ಎಂದರು.