ಬೆಂಗಳೂರು: ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಈ ಮೂರೂ ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿರುವ ರಾಜರಾಜೇಶ್ವರಿನಗರದಲ್ಲಿ ಇಂದು ಮತದಾನ ನಡೆಯುತ್ತಿದ್ದು, ಅಮೂಲ್ಯ ಜಗದೀಶ್ ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ್ದಾರೆ.
ಸದ್ಯಕ್ಕೆ ಆರ್ ಆರ್ ನಗರ ವಿಧಾನಸಭಾ ಕ್ಷೇತ್ರದಲ್ಲಿ ಸುಗಮ ಮತದಾನ ನಡೆಯುತ್ತಿದೆ. 11 ಗಂಟೆ ಹೊತ್ತಿಗೆ ಶೇಕಡಾ 10ಕ್ಕೂ ಹೆಚ್ಚು ಮತದಾನ ಆಗಿದೆ. ಬಿಇಟಿ ಕಾನ್ವೆಂಟ್ ಸ್ಕೂಲ್ ನಲ್ಲಿ ಮತದಾನ ಮಾಡುವುದಕ್ಕೆ ಜೆಡಿಎಸ್ ಅಭ್ಯರ್ಥಿ ರಾಮಚಂದ್ರ ಬಂದಿದ್ದರು. ರಾಮಚಂದ್ರ ಜೊತೆ ಮಗ ಜಗದೀಶ್, ಸೊಸೆ ಅಮೂಲ್ಯ ಹಾಗು ಕುಟುಂಬ ವರ್ಗದವರು ಬಂದು ಮತದಾನ ಮಾಡಿದ್ದಾರೆ.
ಮದುವೆ ಆದಮೇಲೆ ಇದೇ ಮೊದಲ ಬಾರಿಗೆ ಪತಿ ಜಗದೀಶ್ ಜೊತೆ ಬಂದು ನಟಿ ಅಮೂಲ್ಯ ಮತ ಚಲಾಯಿಸಿದ್ದಾರೆ. ಮತ ಚಲಾಯಿಸಿ ಮಾಧ್ಯಮದೊಂದಿಗೆ ಮಾತನಾಡಿದ ಅಮೂಲ್ಯ ಜಗದೀಶ್, ಇದು ನಮ್ಮ ಹಕ್ಕು, ನಮ್ಮ ಹಕ್ಕನ್ನು ನಾವೇ ಸರಿಯಾಗಿ ಉಪಯೋಗಿಸಿಕೊಳ್ಳಬೇಕು. ಒಂದೇ ವೇಳೆ ನಾವು ಅದನ್ನು ಉಪಯೋಗಿಸಿಕೊಳ್ಳಲಿಲ್ಲ ಅಂದರೆ ಬೇರೆಯವರು ಬೇರೆ ಬೇರೆ ರೀತಿಯಲ್ಲಿ ಉಪಯೋಗಿಸಿಕೊಳ್ಳುವ ಪರಿಸ್ಥಿತಿ ಬರುತ್ತವೆ. ಹಾಗಾಗಿ ನಮ್ಮ ಹಕ್ಕನ್ನು ನಾವೇ ಯಾರಿಗೂ ಬಿಟ್ಟುಕೊಡದೆ ನಾವೇ ಮತದಾನ ಮಾಡೋಣ. ಆದ್ದರಿಂದ ಒಬ್ಬ ಒಳ್ಳೆ ವ್ಯಕ್ತಿಯನ್ನು ಶಾಸಕರಾಗಿ ಆರ್ ಆರ್ ನಗರಕ್ಕೆ ಆಯ್ಕೆ ಮಾಡಿ. ಎಲ್ಲರೂ ವೋಟ್ ಮಾಡಿ ಎಂದು ಹೇಳಿದ್ದಾರೆ.
ಕ್ಷೇತ್ರವನ್ನು ಗೆದ್ದು ವಿಧಾನಸಭಾ ಸದಸ್ಯ ಬಲವನ್ನು ಹೆಚ್ಚಿಸಿಕೊಳ್ಳಲು ಬಿಜೆಪಿ ಹಪಹಪಿಸುತ್ತಿದ್ರೆ, ಮತ್ತೊಂದು ಕಡೆ ಮೈತ್ರಿಕೂಟದ ಜೆಡಿಎಸ್ ಹಾಗೂ ಕಾಂಗ್ರೆಸ್ ಪ್ರತ್ಯೇಕವಾಗಿ ಕಣಕ್ಕಿಳಿದಿವೆ. ಇಂದು ಬೆಳಗ್ಗೆ 7ರಿಂದ ಸಂಜೆ 7 ಗಂಟೆಯವರೆಗೆ ಮತದಾನ ನಡೆಯಲಿದೆ. ಆರ್ ಆರ್ ನಗರದಲ್ಲಿ 4 ಲಕ್ಷದ 71 ಸಾವಿರದ 459 ಮತದಾರರಿದ್ದು, ಒಟ್ಟು 421 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ.