‘ಕಹೋ ನಾ ಪ್ಯಾರ್ ಹೈ’ (Kaho Na Pyaar Hai) ನಾಯಕಿ ಅಮೀಷಾ ಪಟೇಲ್ (Ameesha Patel) ವಂಚನೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ರಾಂಚಿಯ ಸಿವಿಲ್ ನ್ಯಾಯಾಲಯಕ್ಕೆ ಸೆರೆಂಡರ್ ಆಗಿದ್ದಾರೆ. ಮುಖಕ್ಕೆ ಬಟ್ಟೆ ಸುತ್ತಿಕೊಂಡು ಸಹಾಯಕರೊಬ್ಬರೊಡನೆ ನ್ಯಾಯಾಲಯಕ್ಕೆ ಆಗಮಿಸಿದ ಅಮೀಷಾ ಪಟೇಲ್ ನ್ಯಾಯಾಧೀಶರ ಮುಂದೆ ಹಾಜರಾಗಿದ್ದಾರೆ. ನಟಿ ಅಮೀಷಾ ವಿರುದ್ಧ ರಾಂಚಿ ನ್ಯಾಯಾಲಯ ಬಂಧನದ ವಾರೆಂಟ್ ಹೊರಡಿಸಿತ್ತು. ಬಂಧನದಿಂದ ತಪ್ಪಿಸಿಕೊಳ್ಳಲೆಂದು ಅಮೀಷಾ ಪಟೇಲ್ ನ್ಯಾಯಾಲಯದ ಮೊರೆ ಹೋಗಿದ್ದಾರೆ.
2018ರಲ್ಲಿ ನಟಿಯ ವಿರುದ್ಧ ಹೂಡಲಾಗಿದ್ದ ವಂಚನೆ ಪ್ರಕರಣದಲ್ಲಿ ನಟಿಯ ವಿರುದ್ಧ ವಾರೆಂಟ್ ಹೊರಡಿಸಲಾಗಿತ್ತು. ಹಲವು ಬಾರಿ ನೋಟಿಸ್ ನೀಡಿದರೂ ವಿಚಾರಣೆಗೆ ಬರದೇ ಇದ್ದ ಕಾರಣ, ಸಿವಿಲ್ ನ್ಯಾಯಾಲಯವು (Civil Court) ವಾರೆಂಟ್ ಜಾರಿ ಮಾಡಿತ್ತು. ಈಗ ಬಂಧನದಿಂದ ತಪ್ಪಿಸಿಕೊಳ್ಳಲು ನಟಿಯು ನ್ಯಾಯಾಲಯದ ಮುಂದೆ ಹಾಜರಾಗಿದ್ದಾರೆ. ನಟಿಗೆ ಜಾಮೀನು ನೀಡಲಾಗಿದ್ದು, ಜೂನ್ 21 ಖುದ್ದಾಗಿ ಹಾಜರಾಗುವಂತೆ ಸೂಚಿಸಲಾಗಿದೆ. ಅಷ್ಟಕ್ಕೂ ಆಗಿದ್ದೇನು.?
2018ರಲ್ಲಿ ಜಾರ್ಖಂಡ್ ಮೂಲದ ಸಿನಿಮಾ ನಿರ್ಮಾಪಕ ಅಜಯ್ ಕುಮಾರ್ ಸಿಂಗ್ ಎಂಬುವರು ಅಮೀಷಾ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದರು. ‘ದೇಸಿ ಮ್ಯಾಜಿಕ್’ ಹೆಸರಿನ ಸಿನಿಮಾ ಮಾಡಲು ಅಜಯ್ ಕುಮಾರ್ ಸಿಂಗ್ 2.5 ಕೋಟಿ ಹಣ ವರ್ಗಾವಣೆ ಮಾಡಿದ್ದರು. ಆದರೆ ಅಮೀಷಾ ಪಟೇಲ್ ಸಿನಿಮಾ ಮಾಡದೆ ಹಣವನ್ನು ತಮ್ಮ ವೈಯಕ್ತಿಕವಾಗಿ ಬಳಸಿಕೊಂಡಿದ್ದರು. ಬಳಿಕ ನಟಿ ಅಮೀಷಾ, 2.50 ಕೋಟಿಯ ಚೆಕ್ ಅನ್ನು ಅಜಯ್ ಕುಮಾರ್ಗೆ ನೀಡಿದ್ದರು. ಆದರೆ ಆ ಚೆಕ್ ಬೌನ್ಸ್ ಆಗಿತ್ತು. ಹೀಗಾಗಿ ಅಜಯ್ ಕುಮಾರ್ ಸಿಂಗ್ ನಟಿಯ ವಿರುದ್ಧ ದೂರು ದಾಖಲಿಸಿದ್ದರು. ಇದನ್ನೂ ಓದಿ:ರಶ್ಮಿಕಾ ಮಾತ್ರವಲ್ಲ, ಪೂಜಾಗೂ ಠಕ್ಕರ್ ಕೊಡ್ತಿದ್ದಾರೆ ‘ಭರಾಟೆ’ ಬ್ಯೂಟಿ ಶ್ರೀಲೀಲಾ
2022ರಲ್ಲಿ ಅಮೀಷಾ ಪಟೇಲ್ ತನ್ನ ವಿರುದ್ಧ ಕ್ರಿಮಿನಲ್ ಕಾನೂನು ಕ್ರಮ ಕೈಗೊಳ್ಳದಂತೆ ಸೂಚಿಸುವಂತೆ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಅಲ್ಲಿ ಅಮೀಷಾ ವಿರುದ್ಧ ಕ್ರಿಮಿನಲ್ ಮೊಕದ್ದಮೆಯ ವಿರುದ್ಧ ಕ್ರಮಕ್ಕೆ ತಡೆ ಸಿಕ್ಕಿತಾದರೂ ಚೆಕ್ ಬೌನ್ಸ್ ಪ್ರಕರಣವು ಶಿಕ್ಷಾರ್ಹ ಪ್ರಕರಣವಾದ್ದರಿಂದ ತನಿಖೆ ಹಾಗೂ ವಿಚಾರಣೆಗೆ ತಡೆ ನೀಡಿರಲಿಲ್ಲ. ಮತ್ತೆ ಅಮೀಷಾ ಪಟೇಲ್ ಜಾರ್ಖಂಡ್ ಹೈಕೋರ್ಟ್ ಮೊರೆ ಹೋಗಿ ತಮ್ಮ ವಿರುದ್ಧ ಪ್ರಕರಣವನ್ನು ಹಾಗೂ ಸಿವಿಲ್ ನ್ಯಾಯಾಲಯ ನೀಡಿರುವ ಸಮನ್ಸ್ ಅನ್ನು ರದ್ದು ಮಾಡುವಂತೆ ಮನವಿ ಮಾಡಿದ್ದರು. ಆದರೆ ಅಮೀಷಾರ ಅರ್ಜಿಯನ್ನು ಹೈಕೋರ್ಟ್ ರದ್ದು ಮಾಡಿತು. ಈಗ ಅಂತಿಮವಾಗಿ ಅಮೀಷಾ ಪಟೇಲ್ ರಾಂಚಿ ಸಿವಿಲ್ ಕೋರ್ಟ್ಗೆ ಶರಣಾಗಿದ್ದಾರೆ.
ತೆಲುಗು- ಹಿಂದಿ ಸೇರಿದಂತೆ ಹಲವು ಸಿನಿಮಾಗಳ ಮೂಲಕ ನಟಿ ಸಂಚಲನ ಮೂಡಿಸಿದ್ದಾರೆ. ಇದೀಗ ಅಮೀಷಾ ನಟನೆಯ ‘ಗದರ್ 2’ ಸಿನಿಮಾ ತೆರೆಗೆ ಅಪ್ಪಳಿಸೋದ್ದಕ್ಕೆ ಸಿದ್ಧವಾಗಿದೆ.