ಸ್ಯಾಂಡಲ್ವುಡ್ ಶಾಕುಂತಲೆ ಐಶಾನಿ ಶೆಟ್ಟಿ (Aishani Shetty) ಇದೀಗ ನಟನೆಯಿಂದ ನಿರ್ದೇಶನದತ್ತ (Director) ಹೊರಟಿದ್ದಾರೆ. ತಾವೇ ಬರೆದ ಕಥೆಯನ್ನು ದೃಶ್ಯ ರೂಪದಲ್ಲಿ ತೋರಿಸಲು ಸಜ್ಜಾಗಿದ್ದಾರೆ. ಈ ಮೂಲಕ ನಟಿ ಡೈರೆಕ್ಷನ್ ಕ್ಯಾಪ್ ತೊಟ್ಟಿದ್ದಾರೆ. ಇದನ್ನೂ ಓದಿ:ಅವಕಾಶ ಸಿಕ್ಕರೆ ಕನ್ನಡದಲ್ಲಿ ನಟಿಸ್ತೇನೆ : ನಟಿ ಚಾಂದನಿ
‘ವಾಸ್ತು ಪ್ರಕಾರ’ (Vastuprakara) ಸಿನಿಮಾದ ನಟಿ ಐಶಾನಿ ಶೆಟ್ಟಿಗೆ ತಾವು ಬಹುದಿನಗಳಿಂದ ನಿರ್ದೇಶಕಿ ಆಗಬೇಕು ಎಂಬ ಕನಸಿತ್ತು. ಈಗ ಆ ಕನಸಿನತ್ತ ಹೆಜ್ಜೆ ಇಡ್ತಿದ್ದಾರೆ. ಅದಕ್ಕಾಗಿ 2 ವರ್ಷಗಳ ಕಾಲ ಶ್ರಮಿಸಿದ್ದಾರೆ. ಎರಡು ವರ್ಷಗಳ ಹಿಂದೆ ಹೊಳೆದ ಕಥೆಯ ಮೇಲೆ ಕೆಲಸ ಮಾಡಿ ಈಗ ನಟನೆಯ ಜೊತೆಗೆ ನಿರ್ದೇಶನ ಮಾಡಲು ರೆಡಿಯಾಗಿದ್ದಾರೆ.
ಈ ಹಿಂದೆ ಐಶಾನಿ ‘ಕಾಜಿ’ ಎಂಬ ಕಿರುಚಿತ್ರ ನಿರ್ದೇಶನ ಮಾಡಿದ್ದರು. ಅದು ಹಲವು ಚಿತ್ಸೋತ್ಸವದಲ್ಲಿ ಆಯ್ಕೆಯಾಗಿ, ಮೆಚ್ಚುಗೆ ಕೂಡ ಪಡೆಯಿತು. ಈಗ ಮೊದಲ ಚಲನಚಿತ್ರ ನಿರ್ದೇಶನ ಮಾಡಲು ತಯಾರಿ ಮಾಡಿಕೊಂಡಿದ್ದಾರೆ. ನನ್ನೂರಿನ ಭಾಗದಲ್ಲಿ ನಡೆಯುವ ಕಥೆಯಿದು. ಕಂಟೆಂಟ್ ಇರುವಂಥ ಕಮರ್ಷಿಯಲ್ ಚಿತ್ರವಿದು. ಇದರಲ್ಲಿ ಹೀರೊ ಅಥವಾ ಹೀರೋಯಿನ್ ಇರುವುದಿಲ್ಲ. ಕಥೆಯೇ ಮುಖ್ಯ ಪಾತ್ರ. ಸದ್ಯಕ್ಕೆ ಈ ಚಿತ್ರದ ಫೈನಲ್ ಡ್ರಾಫ್ಟ್ ರೆಡಿಯಾಗಿದ್ದು, ಶೀಘ್ರದಲ್ಲೇ ಪ್ರಿ ಪ್ರೊಡಕ್ಷನ್ ಕೆಲಸ ಶುರುವಾಗಲಿದೆ ಎಂದು ಐಶಾನಿ ತಮ್ಮ ಮುಂದಿನ ಯೋಜನೆಗಳ ಬಗ್ಗೆ ಹಂಚಿಕೊಂಡಿದ್ದಾರೆ.
ನಮ್ಮ ಸಿನಿಮಾ ಹೆಣ್ಣು ಮಕ್ಕಳ ಪರವಾಗಿ ಇರುವಂತಹ ಕಥೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನಲ್ಲಿ ಚಿತ್ರೀಕರಣ ನಡೆಯಲಿದೆ. ಇದೇ ಜೂನ್ ಅಂತ್ಯದಲ್ಲಿ ಸಿನಿಮಾ ಬಗ್ಗೆ ಅಧಿಕೃತ ಮಾಹಿತಿ ನೀಡೋದಾಗಿ ನಟಿ ತಿಳಿಸಿದ್ದಾರೆ.
‘ವಾಸ್ತು ಪ್ರಕಾರ’ ಸಿನಿಮಾದ ಮೂಲಕ ಪರಿಚಿತರಾದ ಐಶಾನಿ, ಪ್ಲಸ್, ರಾಕೇಟ್, ನಡುವೆ ಅಂತರವಿರಲಿ, ನಮ್ ಗಣಿ ಬಿಕಾಂ ಪಾಸ್, ಧರಣಿ ಮಂಡಲ ಮಧ್ಯದೊಳಗೆ, ಹೊಂದಿಸಿ ಬರೆಯಿರಿ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ.