ಮಹಿಳೆಗೆ ಕಾರು ಡಿಕ್ಕಿ ಹೊಡೆದಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ನಟ ಯುವ ರಾಜ್ಕುಮಾರ್ ಈಗ ಕ್ಷಮೆ ಕೇಳಿದ್ದಾರೆ. ಬೆಂಗಳೂರಿನಲ್ಲಿ ನಡೆದ ಎಕ್ಕ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಯುವ ರಾಜ್ಕುಮಾರ್ (Yuva Rajkumar) ಘಟನೆಗೆ ಪಶ್ಚಾತ್ತಾಪ ಪಟ್ಟು ಮಹಿಳೆಗೆ ಕ್ಷಮೆ ಕೇಳಿದ್ದಾರೆ. ಮಹಿಳೆ ಮೇಲೆ ಕಾರು ಹತ್ತಿಸಿ ತಪ್ಪಿಸಿಕೊಂಡು ಹೋಗಿದ್ದಾರೆ ಎಂಬ ಆರೋಪ ಹೊತ್ತಿದ್ದ ಯುವ ರಾಜ್ಕುಮಾರ್, ಇದೀಗ ಘಟನೆಯ ಸಂಪೂರ್ಣ ಚಿತ್ರಣ ಬಿಚ್ಚಿಟ್ಟಿದ್ದಾರೆ. ಘಟನೆಗೆ ನೊಂದು ಕ್ಷಮೆಯನ್ನೂ ಯಾಚಿಸಿದ್ದಾರೆ.
ಯುವ ರಾಜ್ಕುಮಾರ್ ನಟನೆಯ ಎರಡನೇ ಚಿತ್ರ `ಎಕ್ಕ’ ಸಿನಿಮಾ ಟೀಮ್ ಪ್ರಚಾರಕ್ಕೆಂದು ತುಮಕೂರಿನ ಸಿದ್ದಗಂಗಾ ಮಠಕ್ಕೆ ತೆರಳಿದ್ದ ವೇಳೆ ದುರ್ಘಟನೆ ನಡೆದಿತ್ತು. ತುಮಕೂರಿನಲ್ಲಿ ಸಿನಿಮಾ ಪ್ರಚಾರದ ವೇಳೆ ಸಿದ್ದಗಂಗಾ ಮಠಕ್ಕೆ ನಟ ಯುವ ರಾಜ್ಕುಮಾರ್ ಹಾಗೂ ಇತರರು ಭೇಟಿ ನೀಡಿದ್ದರು. ಯುವರಾಜ್ಕುಮಾರ್ ಬಂದಿದ್ದ ಕಾರಣಕ್ಕೆ ಆ ಸ್ಥಳದಲ್ಲಿ ಭಾರೀ ಜನಸಂದಣಿ ಏರ್ಪಟ್ಟಿತ್ತು. ಆಗ ನಡೆದ ತಳ್ಳಾಟ ನೂಕಾಟದಲ್ಲಿ ಯುವ ರಾಜ್ಕುಮಾರ್ ಕುಳಿತಿದ್ದ ಕಾರು ಮಹಿಳೆಯ ಕಾಲ ಮೇಲೆ ಹರಿದಿತ್ತು. ಘಟನೆಯಿಂದ ಮಹಿಳೆಯ ಕಾಲಿಗೆ ಪೆಟ್ಟಾಗಿತ್ತು. ಘಟನೆ ನಡೆದು ಮೂರು ದಿನಗಳ ಬಳಿಕ ಆ ವಿಚಾರವಾಗಿ ಇದೀಗ ಯುವರಾಜ್ಕುಮಾರ್ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ: Thug Life | ಹಿಂಸಾಚಾರ, ಬೆದರಿಕೆ ಹಾಕಿದವರ ವಿರುದ್ಧ ಕ್ರಮ ಯಾಕಿಲ್ಲ – ಕರ್ನಾಟಕ ಸರ್ಕಾರಕ್ಕೆ ಸುಪ್ರೀಂ ಪ್ರಶ್ನೆ
ಯುವ ರಾಜ್ಕುಮಾರ್ ಹೇಳಿದ್ದೇನು?
ಮಹಿಳೆಯ ಕಾಲ ಮೇಲೆ ಕಾರು ಹತ್ತಿದ್ದ ವಿಚಾರ ಗೊತ್ತಿರಲಿಲ್ಲ. ಬೆಂಗಳೂರಿಗೆ ವಾಪಸ್ ಆದ ಬಳಿಕ ಮಾಧ್ಯಮದಲ್ಲಿ ನೋಡಿದೆ. ಬಳಿಕ ನಮ್ಮ ಅಭಿಮಾನಿಗಳ ಕಡೆಯಿಂದ ಗಾಯಗೊಂಡ ಮಹಿಳೆಗೆ ಎಲ್ಲಾ ಸೌಕರ್ಯ ಮಾಡಿಕೊಡಲಾಯ್ತು. ಬೌನ್ಸರ್ ತಳ್ಳಿದ್ದಾರೆ ಅನ್ನೋ ಮಾತು ಕೇಳಿ ಬಂದಿತ್ತು. ಈ ವಿಚಾರವಾಗಿ ನಾನು ಕ್ಷಮೆ ಕೇಳುತ್ತೇನೆ ಎಂದಿದ್ದಾರೆ ಯುವರಾಜ್ಕುಮಾರ್.