ಕಾರವಾರ: ಕರ್ನಾಟಕ ವಿಧಾನಸಭಾ ಚುನಾವಣಾ ಪ್ರಚಾರ ಭರ್ಜರಿಯಿಂದ ಸಾಗುತ್ತಿದ್ದು, ಸ್ಟಾರ್ ನಾಯಕರು ಪ್ರಚಾರದಲ್ಲಿ ಸಕ್ರಿಯವಾಗಿ ತೊಡಗಿದ್ದಾರೆ.
ಇಂದು ನಟ ರಾಕಿಂಗ್ ಸ್ಟಾರ್ ಯಶ್, ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಶಿರಸಿ ಸಿದ್ದಾಪುರ ಕ್ಷೇತ್ರದಲ್ಲಿ ಬಿಜೆಪಿ ಪರ ಪ್ರಚಾರ ಮಾಡಿದ್ದಾರೆ. ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಪರವಾಗಿ ನಟ ಯಶ್ ರೋಡ್ ಶೋ ಮಾಡುವ ಮೂಲಕ ಮತಯಾಚನೆ ಮಾಡಿದ್ದಾರೆ.
ಸಿದ್ದಾಪುರದ ತಿಮ್ಮಪ್ಪ ನಾಯ್ಕ ಸರ್ಕಲ್ನಲ್ಲಿ ರೋಡ್ ಶೋ ವೇಳೆ ಯಶ್ ಮಾತನಾಡಿದ್ದು, ಸಮಾಜ, ರಾಜಕಾರಣಿಗಳು ಹಾಗೂ ನಾವು ಸೇರಿದರೆ ಅಭಿವೃದ್ಧಿ ಸಾಧ್ಯ. ನಿಮ್ಮೂರೇ ನನಗೆ ಸ್ಫೂರ್ತಿ. ಶಿವಾನಂದ ಕಳವೆ ಅವರ ಕೆಲಸಗಳು ನನಗೆ ಸ್ಫೂರ್ತಿ ಕೊಟ್ಟಿದೆ. ನಾನು ಉತ್ತಮ ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತಿದ್ದೇನೆ. ಶಿಲೆ ನಮ್ಮೂರಲ್ಲೇ ಇದ್ದರೂ ನಮಗೆ ಕಾಣುವುದಿಲ್ಲ. ಅದೇ ರೀತಿ ಕಾಗೇರಿ ಅವರ ವ್ಯಕ್ತಿತ್ವ. ಕಾಗೇರಿಯವರನ್ನ ಗೆಲ್ಲಿಸಿ. ಕಾಗೇರಿ ಅವರ ಮುಖಾಂತರ ನಾನು ಬಂದು ಮುಂದಿನ ದಿನಗಳಲ್ಲಿ ಕೆಲಸ ಮಾಡುತ್ತೇನೆ. ಜನಗಳಿಗೋಸ್ಕರ ನಾನು ಬಂದೆ ಎಂದು ಹೇಳಿದ್ದಾರೆ.
ಇದೇ ವೇಳೆ ಅವರು ಸಿನಿಮಾ ಡೈಲಾಗ್ ಹೇಳಿದ್ದು, ನಾವು ಮಾಡುವ ಒಂದು ವೋಟಿಂದ 5 ವರ್ಷ ನಮ್ಮ ಭವಿಷ್ಯ ಇರುತ್ತದೆ. `ಬಿರುಗಾಳಿ ಸುಂಟರಗಾಳಿ ಯಾವಾಗ್ಲೋ ಒಂದು ಸಾರಿ ಬರುವುದು. ಅದು ಬರುತ್ತೆ ಅಂದಾಗ ಭಯ ಇರುತ್ತೆ. ಬಂದು ಹೋದ ಮೇಲೆ ಅದರ ಹವಾ ಇರುತ್ತದೆ. ನಾನು ಬರೋವರೆಗೆ ಮಾತ್ರ ಬೇರೆಯವರ ಹವಾ, ನಾನು ಬಂದ್ಮೇಲೆ ನಮ್ದೆ ಹವಾ’ ಎಂದು ಹೇಳಿದ್ದಾರೆ.