ಹಾಸನ: ಉತ್ತಮ ಕೆಲಸ ಮಾಡುವ ವ್ಯಕ್ತಿಗಳು ಮುಖ್ಯ. ಅದಕ್ಕಾಗಿ ಬಿಜೆಪಿ ಹಾಗೂ ಜೆಡಿಎಸ್ ಅಭ್ಯರ್ಥಿಗಳ ಪ್ರಚಾರ ಮಾಡುತ್ತಿದ್ದೇನೆ. ಯಾರು ಜನಪರ ಕೆಲಸ ಮಾಡುತ್ತಾರೋ ಅವರಿಗೆ ಮತ ಹಾಕಿ ಅಂತ ನಟ ಯಶ್ ಹೇಳಿದ್ದಾರೆ.
ನಾನು ವಿವಿಧ ಪಕ್ಷಗಳ ಅಭ್ಯರ್ಥಿಗಳ ಪರ ಪ್ರಚಾರ ಮಾಡುವುದರಿಂದ ಮತದಾರರಿಗೆ ಗೊಂದಲವಾಗಿರಬಹುದೆಂದು ಸಮರ್ಥನೆ ನೀಡಿದ ಅವರು, ನನ್ನ ಪ್ರಚಾರ ಯಾವುದೇ ಪಕ್ಷದ ಪರ ಅಲ್ಲ. ನನಗೆ ಇಷ್ಟವಾಗುವ ವ್ಯಕ್ತಿಗಳ ಪರ ಮತಯಾಚನೆ ಮಾಡುವೆ. ನಾನು ರಾಜ್ಯದ ಎಲ್ಲಿ ಬೇಕಾದ್ರೂ ಚುನಾವಣೆಗೆ ನಿಲ್ಲಬಹುದು. ಆದರೆ ಆ ಬಗ್ಗೆ ನಾನು ಚಿಂತಿಸಿಲ್ಲ. ರಾಜಕೀಯ ಎಂದರೇನು ಎಂದು ಮರು ಪ್ರಶ್ನೆ ಹಾಕಿದ್ರು. ಇದನ್ನೂ ಓದಿ: ಬಿಜೆಪಿ, ಜೆಡಿಎಸ್ ಅಭ್ಯರ್ಥಿ ಪರ ಪ್ರಚಾರ ಮಾಡ್ತಿರೋದು ಯಾಕೆ: ರಾಕಿಂಗ್ ಸ್ಟಾರ್ ಹೇಳ್ತಾರೆ ಓದಿ
ನನ್ನ ಪ್ರಚಾರದಿಂದ ಅತಂತ್ರ ವಿಧಾನ ಸಭೆ ಸೃಷ್ಟಿಯಾಗದು. ಹೆಚ್ಚು ಸ್ಥಾನ ಪಡೆಯುವ ಪಕ್ಷ ಸರ್ಕಾರ ರಚನೆ ಮಾಡಲಿ. ನನಗೆ ಗೊಂದಲ, ಸಿದ್ಧಾಂತಕ್ಕಿಂತ ಜನ ಮುಖ್ಯ, ವ್ಯಕ್ತಿ ಮುಖ್ಯ. ಇಷ್ಟು ವರ್ಷವಾದ್ರೂ ಜನರು ಮೂಲಭೂತ ಸೌಕರ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಇದು ಸೇರಿ ಶಿಕ್ಷಣ, ಆರೋಗ್ಯ, ಅಭಿವೃದ್ಧಿಗೆ ಒತ್ತು ನೀಡುವವರು ಸಿಎಂ ಆಗಬೇಕು ಅಂದ್ರು. ಇದನ್ನೂ ಓದಿ: ಎರಡು ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಮಾಡಲಿದ್ದಾರೆ ರಾಕಿಂಗ್ ಸ್ಟಾರ್!
ಜಾತಿ ಎಲ್ಲಾ ಕಡೆ ಇರುವಾಗ, ರಾಜಕೀಯದಲ್ಲಿ ಜಾತಿ ರಾಜಕೀಯ ಇರುವ ಬಗ್ಗೆ ನಾನು ಏನನ್ನೂ ಹೇಳಲಾರೆ ಅಂತ ಹೇಳಿದ್ರು. ಇಂದು ಹಾಸನದ ವಿವಿಧೆಡೆ ಜೆಡಿಎಸ್, ಬಿಜೆಪಿ ಅಭ್ಯರ್ಥಿಗಳ ಪರ ಯಶ್ ಕ್ಯಾಂಪೇನ್ ಮಾಡಲಿದ್ದಾರೆ.