ಕಮಲ್ ಹಾಸನ್ (Kamal Haasan) ಅವರನ್ನು ಅತಿಯಾಗಿ ಪ್ರೀತಿಸುತ್ತೇವೆ, ಹಾಗಂತ ಅವರು ಹೇಳಿದ್ದನ್ನು ಒಪ್ಪಲು ಆಗಲ್ಲ ಎಂದು ನಟನ ಕನ್ನಡ ವಿವಾದಕ್ಕೆ ವಸಿಷ್ಠ ಸಿಂಹ ಪ್ರತಿಕ್ರಿಯೆ ನೀಡಿದ್ದಾರೆ. ಕ್ಷಮೆ ಕೇಳಲ್ಲ ಎಂದು ಪಟ್ಟಹಿಡಿದಿರೋ ಕಮಲ್ ಹಾಸನ್ ವಿರುದ್ಧ ವಸಿಷ್ಠ ಸಿಂಹ (Vasishta Simha) ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ:ನಾನು ಬೆದರಿಕೆಗೆ ಹೆದರಲ್ಲ, ಕ್ಷಮೆ ಕೇಳಲ್ಲ- ಕಮಲ್ ಹಾಸನ್ ಉದ್ಧಟತನ
ಕಮಲ್ ಹಾಸನ್ ಕನ್ನಡ ವಿವಾದಕ್ಕೆ ವಸಿಷ್ಠ ಮಾತನಾಡಿ, ಪ್ರೀತಿಯಿದ್ದ ಕಡೆ ಕ್ಷಮೆ ಇರಬೇಕು. ಗೌರವನೂ ಇರಬೇಕು. ಅವರು ಆಡಿರುವ ಮಾತಿಗೆ ಕ್ಷಮೆ ಕೇಳಿದ್ರೆ ದೊಡ್ಡವರಾಗುತ್ತಿದ್ದರು. ನಾವೆಲ್ಲರೂ ಅವರನ್ನು ಇಷ್ಟಪಡುತ್ತೇವೆ. ಬೇಡದ ಜಾಗದಲ್ಲಿ ಬೇಡದ ಮಾತುಗಳನ್ನಾಡಬಾರದು. ಅದು ಅವರ ವಿವೇಚನೆಗೆ ಬಿಟ್ಟಿದ್ದು ಎಂದರು. ಇದನ್ನೂ ಓದಿ:ಕನ್ನಡಕ್ಕೆ ಅಪಮಾನ ಮಾಡಿದಾಗ ಶಿವರಾಜ್ ಕುಮಾರ್ ಮಾತಾಡಬೇಕು – ರವಿ ಗಣಿಗ
ಸಿನಿಮಾ ರಿಲೀಸ್ ವೇಳೆಯೇ ಭಾಷೆಯ ಸೆಂಟಿಮೆಂಟ್ನ ಕೆಣಕೋದು ತಪ್ಪು. ಸೂಕ್ಷ್ಮ ವಿಚಾರವನ್ನು ಅಂತಹ ವೇದಿಕೆಯಲ್ಲಿ ಬಳಸಿಕೊಂಡಿದ್ದು ತಪ್ಪು. ಕಮಲ್ ಹಾಸನ್ ಅವರನ್ನು ಅತಿಯಾಗಿ ಪ್ರೀತಿಸುತ್ತೇವೆ. ಹಾಗಂತ ಎಲ್ಲವನ್ನು ಒಪ್ಪೋಕೆ ಆಗಲ್ಲ. ತಪ್ಪು ತಪ್ಪೇ. ಇಷ್ಟು ವರ್ಷಗಳ ಕಾಲ ಸಿನಿಮಾಗಳ ಮೂಲಕ ನಮ್ಮೆಲ್ಲರ ಮನಸ್ಸನ್ನು ಗೆದ್ದಿದ್ದೀರಿ. ಹೀಗಿರುವಾಗ ಭಾಷೆಯ ವಿಚಾರವನ್ನು ಟ್ರಿಗರ್ ಮಾಡುವ ಅವಶ್ಯಕತೆಯಿರಲಿಲ್ಲ. ಪ್ರೀತಿಯನ್ನು ಪಡೆದುಕೊಳ್ಳೋದು, ಕಳೆದುಕೊಳ್ಳೋದು ನಮ್ಮ ಕೈಯಲ್ಲಿಯೇ ಇದೆ ಎಂದಿದ್ದಾರೆ.
ಭಾಷೆ ಎಲ್ಲರಿಗೂ ತಾಯಿ ಇದ್ದಂತೆ. ಎಲ್ಲಾ ಭಾಷೆಯನ್ನು ಗೌರವದಿಂದ ಕಾಣಬೇಕು. ಬೆಳೆದ್ಮೇಲೆ ಏನು ಬೇಕಾದರೂ ಮಾತನಾಡಿದ್ರೆ ನಡೆಯುತ್ತದೆ ಅನ್ನೋದಲ್ಲ. ಜವಾಬ್ದಾರಿಯಿಂದ ಮಾತನಾಡಬೇಕು. ನಮ್ಮನ್ನು ಅನುಸರಿಸುವವರಿಗೆ ನಾವು ಮಾದರಿಯಾಗಿರಬೇಕು. ಇದೀಗ ಕ್ಷಮೆ ಕೇಳಲ್ಲ ಅಂದಾಗ ನಾವು ಕೂಡ ಬಿಸಿ ಮುಟ್ಟಿಸುವ ಕೆಲಸ ಮಾಡಬೇಕು ಎಂದು ವಸಿಷ್ಠ ಸಿಂಹ ಮಾತನಾಡಿದ್ದಾರೆ.
ಇಂದು (ಮೇ 30) ಚೆನ್ನೈನಲ್ಲಿ ಕಮಲ್ ಹಾಸನ್ ಮಾತನಾಡಿ, ಕ್ಷಮೆ ಕೇಳಲ್ಲ ಎಂದು ಹೇಳಿ ಮತ್ತೆ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದು ಪ್ರಜಾಪ್ರಭುತ್ವ. ನಾನು ಕಾನೂನು ಮತ್ತು ನ್ಯಾಯವನ್ನು ನಂಬುತ್ತೇನೆ. ಕರ್ನಾಟಕ, ಆಂಧ್ರಪ್ರದೇಶ ಮತ್ತು ಕೇರಳದ ಮೇಲಿನ ನನ್ನ ಪ್ರೀತಿ ನಿಜ. ನಾನು ತಪ್ಪು ಮಾಡಿಲ್ಲ, ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ. ನನ್ನಿಂದ ತಪ್ಪಾಗಿದ್ರೆ ಕ್ಷಮೆ ಕೇಳುವೆ, ನನ್ನಿಂದ ತಪ್ಪು ಆಗಿಲ್ಲ. ನನ್ನ ನಿರ್ಧಾರಕ್ಕೆ ಬದ್ಧವಾಗಿದ್ದೇನೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಯಾವುದೇ ಬೆದರಿಕೆ, ಎಚ್ಚರಿಕೆಗೆ ನಾನು ಹೆದರುವುದಿಲ್ಲ. ಕಾನೂನು ಹಾಗೂ ನ್ಯಾಯದ ಮೇಲೆ ನಂಬಿಕೆ ಇಟ್ಟಿದ್ದೇನೆ ಎಂದು ಹೇಳಿದ್ದಾರೆ.
ತಮಿಳು ಭಾಷೆಯಿಂದ ಕನ್ನಡ ಹುಟ್ಟಿದ್ದು ಎಂಬ ಕಮಲ್ ಹಾಸನ್ ಹೇಳಿಕೆಗೆ ಕರ್ನಾಟಕದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ. ತಮ್ಮ ನಟನೆಯ ಥಗ್ ಲೈಫ್ ಸಿನಿಮಾ ಸುದ್ದಿಗೋಷ್ಠಿಯಲ್ಲಿ ಕನ್ನಡದ ಹಿರಿಯ ನಟ ಶಿವರಾಜ್ಕುಮಾರ್ ಅವರ ಎದುರೇ ಕಮಲ್ ಹಾಸನ್ ಈ ಹೇಳಿಕೆ ನೀಡಿದ್ದು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.
ಕಮಲ್ ಹಾಸನ್ ಹೇಳಿಕೆ ಶುದ್ಧ ಸುಳ್ಳು. ಭಾಷಾ ಪ್ರಾವಿಣ್ಯತೆ ಇಲ್ಲದೇ ಈ ರೀತಿಯ ಉದ್ಧಟತನದ ಹೇಳಿಕೆ ನೀಡುವುದು ಸರಿಯಲ್ಲ ಎಂದು ಭಾಷಾ ವಿಜ್ಞಾನಿಗಳು ಖಂಡಿಸಿದ್ದಾರೆ. ನಟನ ಹೇಳಿಕೆಗೆ ಕನ್ನಡಪರ ಸಂಘಟನೆಗಳು ಆಕ್ರೋಶ ಹೊರಹಾಕಿವೆ. ಕೂಡಲೇ ಕನ್ನಡಿಗರ ಕ್ಷಮೆಯಾಚಿಸಿ, ಇಲ್ಲದಿದ್ದರೆ ನಿಮ್ಮ ಸಿನಿಮಾವನ್ನು ಕರ್ನಾಟಕದಲ್ಲಿ ಬ್ಯಾನ್ ಮಾಡಲಾಗುವುದು ಎಂದು ಹೋರಾಟಗಾರರು ನಟನಿಗೆ ಎಚ್ಚರಿಕೆ ನೀಡಿದ್ದಾರೆ.