ಕನ್ನಡ ಚಿತ್ರರಂಗದ ಖ್ಯಾತ ನಟಿ ಲೀಲಾವತಿ (Leelavathi) ನಿಧನಕ್ಕೆ ಉಪೇಂದ್ರ ಅವರು (Upendra) ಸಂತಾಪ ಸೂಚಿಸಿದ್ದಾರೆ. ಇದೀಗ ಲೀಲಾವತಿ ಅವರ ಅಂತಿಮ ದರ್ಶನ ಪಡೆದಿದ್ದಾರೆ. ಲೀಲಾವತಿ ಅವರು ಕನ್ನಡ ಚಿತ್ರರಂಗದ ಶ್ರೇಷ್ಠ ನಟಿ ಎಂದು ಉಪೇಂದ್ರ ಮಾತನಾಡಿದ್ದಾರೆ. ಹಿರಿಯ ನಟಿಯ ನಿಧನದ ಬಗ್ಗೆ ಭಾವುಕರಾಗಿದ್ದಾರೆ.
ಲೀಲಾವತಿ ಅವರು ಭಾರತಕ್ಕೆ ಗೊತ್ತು ಅವರೆಂತಹ ಶ್ರೇಷ್ಠ ಕಲಾವಿದೆ ಅಂತ. ಅವರನ್ನು ಇಂದು ಕಳೆದುಕೊಂಡಿದ್ದೀವಿ. ತಾನು ಹೋಗ್ತೀನಿ ಅಂತ ಅವರಿಗೆ ಮೊದಲೇ ಗೊತ್ತಿತ್ತು ಅನಿಸುತ್ತೆ. ಆಸ್ಪತ್ರೆ ಕಟ್ಟಿಸೋದು ಸೇರಿದಂತೆ ಸಾಕಷ್ಟು ಸಮಾಜ ಸೇವೆ ಮಾಡಿಯೇ ಹೋಗಿದ್ದಾರೆ. ವಿನೋದ್ ರಾಜ್ ಹೇಳುತ್ತಿದ್ದರು ಅವರಿಗೆ ತುಂಬಾ ಕನಸಿತ್ತು ಅಂತ. ಅದನ್ನ ಈಡೇರಿಸುತ್ತೇನೆ ಎಂದು ಕೂಡ ಹೇಳಿದ್ದರು. ಅದನ್ನೆಲ್ಲಾ ಪೂರೈಸುವ ಶಕ್ತಿ ದೇವರು ಅವರಿಗೆ ಕೊಡಲಿ ಅಂತ ಉಪೇಂದ್ರ ಮಾತನಾಡಿದ್ದಾರೆ.
ಬೆಳಿಗ್ಗೆಯಿಂದ ಲೀಲಾವತಿ ಅವರ ಅಂತಿಮ ದರ್ಶನ ಪಡೆಯಲು ಕಲಾವಿದರು, ಆಪ್ತರು, ಅಭಿಮಾನಿಗಳು ಆಗಮಿಸುತ್ತಿದ್ದಾರೆ. ಇಂದು ಸರಕಾರಿ ಸಕಲ ಗೌರವದೊಂದಿಗೆ ಸೋಲದೇವನಹಳ್ಳಿಯಲ್ಲಿರುವ ಲೀಲಾವತಿ ತೋಟದ ಮನೆಯಲ್ಲಿ ಮಧ್ಯಾಹ್ನ 3:30ಕ್ಕೆ ಅಂತ್ಯ ಸಂಸ್ಕಾರ ನೆರವೇರಲಿದೆ. ಇದನ್ನೂ ಓದಿ:ಮಧ್ಯಾಹ್ನ 3.30ಕ್ಕೆ ಲೀಲಾವತಿ ಅಂತ್ಯ ಸಂಸ್ಕಾರ: ಜಿಲ್ಲಾಧಿಕಾರಿ ಮಾಹಿತಿ
ನಟಿ ಲೀಲಾವತಿ ಅವರು ವಯೋಸಹಜ ಕಾಯಿಲೆಯಿಂದ (ಡಿ.8) ನಿಧನರಾಗಿದ್ದಾರೆ. ಅವರ ಆರೋಗ್ಯದಲ್ಲಿ ಮತ್ತೆ ಸಮಸ್ಯೆ ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಎರಡು ದಿನಗಳಿಂದ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿತ್ತು. ಡಿಸೆಂಬರ್ 8ರಂದು ಮಧ್ಯಾಹ್ನ ದಿಢೀರ್ ಅಂತ ಲೋ ಬಿಪಿ ಸಮಸ್ಯೆ ಶುರುವಾಗಿದೆ. ತಕ್ಷಣವೇ ಅವರನ್ನು ನೆಲಮಂಗಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಲೀಲಾವತಿ ಇಹಲೋಕ ತ್ಯಜಿಸಿದ್ದರು.