ಚೆನ್ನೈ: ಕಾಲಿವುಡ್ ನಟ ಸಿಂಬು ಕಾವೇರಿ ವಿಚಾರದ ಬಗ್ಗೆ ಮಾತನಾಡಿ ಕನ್ನಡಿಗರ ಮನಸ್ಸನ್ನು ಗೆದ್ದಿದ್ದರು. ಈಗ ಮೃತಪಟ್ಟ ತನ್ನ ಅಭಿಮಾನಿಯ ಪೋಸ್ಟರ್ ಅಂಟಿಸುವ ಮೂಲಕ ಸಿಂಬು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಸಿಂಬು ಅವರ ಅಪ್ಪಟ ಅಭಿಮಾನಿ ಮದನ್ ಕಳೆದ ವಾರ ಚೆನ್ನೈನಲ್ಲಿ ಮೃತಪಟ್ಟಿದ್ದರು. ಮದನ್ ಮೃತಪಟ್ಟಿದ್ದ ಸಮಯದಲ್ಲಿ ಸಿಂಬು ಮಣಿರತ್ನಂ ನಿರ್ದೇಶನದ ಸಿನಿಮಾದ ಶೂಟಿಂಗ್ಗಾಗಿ ಬೇರೆ ಕಡೆ ಹೋಗಿದ್ದರು. ಹಾಗಾಗಿ ಸಿಂಬು ಅವರಿಗೆ ತನ್ನ ಅಭಿಮಾನಿ ನಿಧನ ಹೊಂದಿರುವ ವಿಷಯ ತಿಳಿದಿರಲಿಲ್ಲ.
ಸಿಂಬು ತನ್ನ ಶೂಟಿಂಗ್ ಮುಗಿಸಿ ರಾತ್ರಿ ಕಾರಿನಲ್ಲಿ ಪ್ರಯಾಣಿಸುವಾಗ ಮದನ್ ಗೆಳೆಯರು ರಸ್ತೆ ಬಳಿ ಆತನ ಪೋಸ್ಟರ್ ಅಂಟಿಸುತ್ತಿದ್ದರು. ಆಗ ಸಿಂಬು ಅದನ್ನು ಗಮನಿಸಿ ತಕ್ಷಣ ಕಾರಿನಿಂದ ಇಳಿದು ಸ್ವತಃ ತನ್ನ ಅಭಿಮಾನಿಯ ಪೋಸ್ಟರ್ ಗಳನ್ನು ಅಂಟಿಸಿದ್ದಾರೆ.
ಸಿಂಬು ತನ್ನ ಅಭಿಮಾನಿಯ ಪೋಸ್ಟರ್ ಅಂಟಿಸಿದ್ದಕ್ಕೆ ಎಲ್ಲರೂ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಅಭಿಮಾನಿಯ ನಿಧನದಿಂದ ಸಿಂಬು ಬೇಸರ ವ್ಯಕ್ತಪಡಿಸಿದ್ದಾರೆ. ಮದನ್ ಅವರು ಸಿಂಬು ಫ್ಯಾನ್ ಕ್ಲಬ್ನಲ್ಲಿ ಹೆಚ್ಚು ಗುರುತಿಸಿಕೊಂಡಿದ್ದರು.