ಮೈಸೂರು: ಸ್ಯಾಂಡಲ್ವುಡ್ ನ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಬ್ಯುಸಿ ಶೂಟಿಂಗ್ ಸಮಯದಲ್ಲೂ ತಮ್ಮ ಅಭಿಮಾನಿಯೊಬ್ಬರನ್ನು ಅರಮನೆ ನಗರಿಯಲ್ಲಿ ಭೇಟಿ ಮಾಡಿದ್ದಾರೆ.
ಬಸ್ ಕಂಡಕ್ಟರ್ ನ ನಿರ್ಲಕ್ಷ್ಯಕ್ಕೆ ಬಸ್ನಿಂದ ಬಿದ್ದು ಕಾಲು ಕಳೆದುಕೊಂಡಿದ್ದ ಬಾಲಕ ಉಲ್ಲೇಖ್ನನ್ನು ಶಿವರಾಜ್ ಕುಮಾರ್ ಮೈಸೂರಿನ ಸರಸ್ವತಿಪುರಂನಲ್ಲಿರುವ ಆತನ ನಿವಾಸಕ್ಕೆ ಹೋಗಿ ಭೇಟಿ ಮಾಡಿದ್ದಾರೆ. ಉಲ್ಲೇಖ್ ಆಸ್ಪತ್ರೆಯಲ್ಲಿದ್ದಾಗಲೇ ನೆಚ್ಚಿನ ನಟ ಶಿವರಾಜ್ ಕುಮಾರ್ ಅವರನ್ನ ನೋಡಬೇಕು ಎಂದು ಬಯಸಿದ್ದ. ಸುಮಾರು 7 ತಿಂಗಳ ಹಿಂದೆ ಈ ಘಟನೆ ನಡೆದಿತ್ತು. ಅಭಿಮಾನಿ ಬಾಲಕನ ಆಸೆಯನ್ನು ಮಾಧ್ಯಮಗಳ ಮೂಲಕ ಶಿವರಾಜ್ಕುಮಾರ್ ತಿಳಿದುಕೊಂಡಿದ್ದರು. ಇಂದು ಅವರ ಮನೆಗೆ ಹೋಗಿ ಭೇಟಿ ಮಾಡಿ ಸಾಂತ್ವನ ಹೇಳಿ ಬಂದಿದ್ದಾರೆ.
ಜೀವನದಲ್ಲಿ ಒಮ್ಮೆ ಅನಿರೀಕ್ಷಿತ ಕ್ಷಣ ಬರುತ್ತವೆ. ಧೈರ್ಯವಾಗಿ ಜೀವನದಲ್ಲಿ ಮುನ್ನುಗ್ಗಬೇಕು ಎಂದು ಶಿವಣ್ಣ ಬಾಲಕನಿಗೆ ಧೈರ್ಯ ತುಂಬಿದ್ದಾರೆ. ನೆಚ್ಚಿನ ನಟ ಶಿವರಾಜ್ ಕುಮಾರ್ ರನ್ನು ಕಂಡು ಉಲ್ಲೇಖ್ ಹರ್ಷ ವ್ಯಕ್ತಪಡಿಸಿದ್ದಾನೆ.