ಬೆಂಗಳೂರು: “ಸಾ.ಹಿ.ಪ್ರಾ.ಶಾಲೆ ಕಾಸರಗೋಡು’ ಸಿನಿಮಾ ಶೂಟಿಂಗ್ ನಡೆದ ಶಾಲೆಗೆ ನಿರ್ದೇಶಕ ರಿಷಬ್ ಶೆಟ್ಟಿ ಹೊಸ ರೂಪ ಕೊಟ್ಟಿದ್ದಾರೆ.
ರಿಷಬ್ ಶೆಟ್ಟಿ ಅವರು ಕರಾವಳಿ ಭಾಗದ ಕೈರಂಗಳ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಸಿನಿಮಾದ ಚಿತ್ರೀಕರಣ ಮಾಡಿದ್ದರು. ಆದರೆ ಆ ಶಾಲೆ ತುಂಬಾ ಹದಗೆಟ್ಟಿತ್ತು. ಚಿತ್ರ ಭರ್ಜರಿ ಯಶಸ್ಸು ಪಡೆದ ಬೆನ್ನಲ್ಲೇ ರಿಷಬ್ ಶೆಟ್ಟಿ ಅವರು ಆ ಶಾಲೆಯನ್ನು ದತ್ತು ಪಡೆದು ಅಭಿವೃದ್ಧಿ ಪಡಿಸಲಾಗುವುದು ಎಂದು ಭರವಸೆ ನೀಡಿದ್ದರು. ನೀಡಿದ ಭರವಸೆಯಂತೆ ಶಾಲೆಯನ್ನು ಅಭಿವೃದ್ಧಿ ಮಾಡಿ ನೀಡಿದ ಮಾತನ್ನು ಉಳಿಸಿಕೊಂಡಿದ್ದಾರೆ.
ಕೈರಂಗಳ ಶಾಲೆಯ ಗೋಡೆಗಳಿಗೆ ವಿವಿಧ ಬಣ್ಣಗಳನ್ನು ಬಳಿದು ಹೊಸ ಶಾಲೆಯಾಗಿ ಮಾರ್ಪಡಿಸಿದ್ದಾರೆ. ಅಷ್ಟೇ ಅಲ್ಲದೇ ಗೋಡೆಯ ಮೇಲೆ ಸಂಸ್ಕೃತಿ, ಜನಪದ, ಪರಿಸರ ಸೇರಿದಂತೆ ಅನೇಕ ಚಿತ್ರಕಲೆಗಳನ್ನು ಬಿಡಿಸಲಾಗಿದೆ. ಸಂಸ್ಕೃತಿಯ ರೂಪ ಪಡೆದಿರುವ ಶಾಲೆ ನೋಡಲು ಸುಂದರವಾಗಿ ಆಕರ್ಷಕವಾಗಿ ಕಾಣುತ್ತಿದೆ. ಈ ಬಗ್ಗೆ ರಿಷಬ್ ಶೆಟ್ಟಿ ಅವರು ಟ್ವೀಟ್ ಮಾಡುವ ಮೂಲಕ ಹೇಳಿಕೊಂಡಿದ್ದಾರೆ.
“ರಜೆ ಮುಗಿಸಿ ಬರುವ ಮಕ್ಕಳಿಗೆ ಹೊಸ ವರ್ಷಕ್ಕೆ ಹೊಸ ಶಾಲೆ, ಹೊಸ ಕಲಿಕೆ, ಹೊಸ ಜೀವನವನ್ನು ನೀಡುವ ಪ್ರಯತ್ನದಲ್ಲಿ ಮೊದಲ ಹೆಜ್ಜೆ ಇಟ್ಟಿದ್ದೇವೆ. ಆ ಮಕ್ಕಳ ಭವಿಷ್ಯಕ್ಕೂ, ನಮ್ಮ ಈ ಪ್ರಯತ್ನಕ್ಕೂ ನಿಮ್ಮ ಸಹಕಾರವಿರಲಿ” ಎಂದು ಬರೆದು ಶಾಲೆಯ ಫೋಟೋಗಳನ್ನು ಅಪ್ಲೋಡ್ ಮಾಡಿದ್ದಾರೆ.
ರಜೆ ಮುಗಿಸಿ ಬರುವ ಮಕ್ಕಳಿಗೆ ಹೊಸ ವರ್ಷಕ್ಕೆ ಹೊಸ ಶಾಲೆ, ಹೊಸ ಕಲಿಕೆ, ಹೊಸ ಜೀವನವನ್ನು ನೀಡುವ ಪ್ರಯತ್ನದಲ್ಲಿ ಮೊದಲ ಹೆಜ್ಜೆ ಇಟ್ಟಿದ್ದೇವೆ. ಆ ಮಕ್ಕಳ ಭವಿಷ್ಯಕ್ಕೂ, ನಮ್ಮ ಈ ಪ್ರಯತ್ನಕ್ಕೂ ನಿಮ್ಮ ಸಹಕಾರವಿರಲಿ 🙂 #savekannadaschool pic.twitter.com/GRbkMQXtxo
— Rishab Shetty (@shetty_rishab) April 25, 2019
“ಸಾ.ಹಿ.ಪ್ರಾ.ಶಾಲೆ ಕಾಸರಗೋಡು’ ಸಿನಿಮಾದಲ್ಲಿ ದಿನಕಳೆದಂತೆ ಮುಚ್ಚಿಹೋಗುತ್ತಿರುವ ಕನ್ನಡ ಶಾಲೆಯನ್ನು ಉಳಿಸಿಕೊಳ್ಳಲು ಮಕ್ಕಳು ಹೇಗೆ ಹೋರಾಟ ಮಾಡುತ್ತಾರೆ ಎಂಬುದನ್ನು ತೋರಿಸಲಾಗಿತ್ತು.