ಚೆನ್ನೈ: ಕಾರು ಅಪಘಾತದಲ್ಲಿ ನಟಿ ಹಾಗೂ ಮಾಡೆಲ್ ಆಗಿದ್ದ ರೇಖಾ ಸಿಂಧು ಸಾವನ್ನಪ್ಪಿದ್ದಾರೆ.
ಚೆನ್ನೈ- ಬೆಂಗಳೂರು ರಾಷ್ಟ್ರಿಯ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ. ಘಟನೆಯಲ್ಲಿ 22 ವರ್ಷದ ರೇಖಾ ಸಿಂಧು ಸೇರಿದಂತೆ ಒಟ್ಟು ನಾಲ್ವರು ಸಾವನ್ನಪ್ಪಿದ್ದಾರೆ
ರೇಖಾ ತನ್ನ ಸ್ನೇಹಿತರ ಜೊತೆಯಲ್ಲಿ ಚೆನ್ನೈನಿಂದ ಬೆಂಗಳೂರಿಗೆ ಬರುತ್ತಿದ್ದ ವೇಳೆ ಪೇರಣಂಬಟ್ ಬಳಿಯ ಸುಣ್ಣಂಪುಕುಟ್ಟೈ ಬಳಿ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ಎಲ್ಲರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆಂದು ವರದಿಯಾಗಿದೆ.
ಅಪಘಾತದಲ್ಲಿ ಮೃತಪಟ್ಟ ಇತರರನ್ನು ಅಭಿಷೇಕ್ ಕುಮಾರನ್(22), ಜಯಂಚಂದ್ರನ್(23) ಹಾಗೂ ರಕ್ಷಣ್(20) ಎಂದು ಗುರುತಿಸಲಾಗಿದೆ. ಮೃತರನ್ನು ತಿರುಪಟ್ಟೂರ್ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ಘಟನೆ ಬಗ್ಗೆ ಪೊಲಿಸರು ತನಿಖೆ ನಡೆಸುತ್ತಿದ್ದಾರೆ.
ಬೆಂಗಳೂರಿನ ಬಾಣಸವಾಡಿ ನಿವಾಸಿಯಾಗಿದ್ದ ರೇಖಾ ಸಿಂಧು ಹಲವು ಜಾಹೀರಾತುಗಳಲ್ಲಿ ಹಾಗೂ ತಮಿಳು ಮತ್ತು ಕನ್ನಡ ಟಿವಿ ಕಾರ್ಯಕ್ರಮಗಳಲ್ಲಿ ಅಭಿನಯಿಸಿದ್ದರು.
ಆದ್ರೆ ಕೆಲವರು ರೇಖಾ ಸಿಂಧು ಸಾವಿನ ಸುದ್ದಿ ಕೇಳಿ ಮತ್ತೊಬ್ಬ ನಟಿ ರೇಖಾ ಕೃಷ್ಣಪ್ಪ ಎಂದು ತಪ್ಪು ತಿಳಿದಿದ್ದರು. ಈ ಬಗ್ಗೆ ರೇಖಾ ಕೃಷ್ಣಪ್ಪ ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದು, ನಾನು ಚೆನ್ನಾಗಿದ್ದೇನೆ. ದೇವಸ್ಥಾನದಲ್ಲಿದ್ದೇನೆ. ರೇಖಾ ಸಿಂಧು ಎಂಬವರು ಸಾವನ್ನಪ್ಪಿದ್ದಾರೆ. ಆದ್ರೆ ಕೆಲವರು ಅದು ನಾನು ಎಂದು ತಪ್ಪು ತಿಳಿದಿದ್ದಾರೆ. ಬೆಳಗ್ಗಿನಿಂದ ತುಂಬಾ ಕರೆಗಳು ಬರ್ತಿವೆ. ನನಗೆ ಏನೂ ಆಗಿಲ್ಲ ಎಂದು ಹೇಳಿದ್ದಾರೆ.