ಚಯನ್ ಶೆಟ್ಟಿ ನಿರ್ದೇಶನದ ಬಹುನಿರೀಕ್ಷಿತ ಚಿತ್ರ ‘ಅಧಿಪತ್ರ’ (Adhipatra) ಈ ವಾರ ಅಂದರೆ, ಫೆಬ್ರವರಿ 7ರಂದು ತೆರೆಗಾಣಲಿದೆ. ರೂಪೇಶ್ ಶೆಟ್ಟಿ (Roopesh Shetty) ನಾಯಕನಾಗಿ ನಟಿಸಿರುವ ಈ ಸಿನಿಮಾ ಈಗಾಗಲೇ ಟ್ರೈಲರ್ ಸೇರಿದಂತೆ ನಾನಾ ರೀತಿಯಲ್ಲಿ ಈಗಾಗಲೇ ಪ್ರೇಕ್ಷಕರನ್ನು ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಆರಂಭಿಕ ಗೆಲುವಿನ ಎಲ್ಲ ಲಕ್ಷಣಗಳೂ ಇದೀಗ ಅಧಿಪತ್ರದ ಮುಂದಿದೆ. ಇಂಥಾದ್ದೊಂದು ಸಕಾರಾತ್ಮಕ ವಾತಾವರಣ ಒಂದಿಡೀ ಚಿತ್ರತಂಡವನ್ನು ಖುಷಿಗೊಳಿಸಿದೆ. ಈ ಚಿತ್ರದಲ್ಲಿ ಅನುಭವೀ ನಟರದ್ದೊಂದು ದಂಡೇ ಇದೆ. ಕಡಲ ತಡಿಯಿಂದ ಬಂದು ಕನ್ನಡ ಚಿತ್ರರಂಗದಲ್ಲಿ ಭದ್ರವಾಗಿ ನೆಲೆ ಕಂಡುಕೊಂಡಿರುವ ರಘು ಪಾಂಡೇಶ್ವರ ‘ಅಧಿಪತ್ರ’ದ ಪ್ರಮುಖವಾದ ಪಾತ್ರವೊಂದಕ್ಕೆ ಜೀವ ತುಂಬಿದ್ದಾರೆ.
Advertisement
ಸಾಮಾನ್ಯವಾಗಿ ಕಡಲ ತಡಿಯ ಕಥೆಯೆಂದರೆ, ಅಲ್ಲಿ ಆ ಭಾಗದ ನಂಬಿಕೆಗಳ ಇರುವಿಕೆ ಖಾಯಂ. ಅಧಿಪತ್ರದಲ್ಲೂ ಕೂಡಾ ಅಂಥಾ ಅಪರೂಪದ ಆಚರಣೆಗಳ ಹಾಜರಿ ಇದೆ. ಆ ವಿಚಾರ ಟ್ರೈಲರ್ ಮೂಲಕವೇ ಸಾಬೀತಾಗಿದೆ. ನಿರ್ದೇಶಕ ಚಯನ್ ಶೆಟ್ಟಿ ಇದರ ಪ್ರತೀ ಪಾತ್ರಗಳನ್ನೂ ವಿಶಿಷ್ಟವಾಗಿ ರೂಪಿಸಿದ್ದಾರಂತೆ. ಟ್ರೈಲರ್ ನೋಡಿದವರಿಗೆಲ್ಲ ಅಧಿಪತ್ರದಲ್ಲಿ ಟ್ವಿಸ್ಟುಗಳ ಹಂಗಾಮವೇ ಇದೆ ಎಂಬ ವಿಚಾರ ಖಾತರಿಯಾಗಿದೆ. ಅಂಥಾ ಮಹತ್ವದ ತಿರುವಿನೊಂದಿಗೆ, ಪ್ರೇಕ್ಷಕರ ಅಂದಾಜನ್ನೇ ಅದುರಿಸುವಂಥಾ ಪಾತ್ರವಿಲ್ಲಿ ರಘು ಪಾಂಡೇಶ್ವರರಿಗೆ ಸಿಕ್ಕಿದೆ. ಇದನ್ನೂ ಓದಿ:ಡಿಸಿಎಂ ಡಿಕೆಶಿ ಮನೆಗೆ ಕಿಚ್ಚ ಸುದೀಪ್ ಭೇಟಿ- ಕಾರಣವೇನು?
Advertisement
Advertisement
ಅಂದಹಾಗೆ, ಅವರಿಲ್ಲಿ ಪಟ್ಟಾಭಿರಾಮ ಎಂಬ ಪಾತ್ರವನ್ನು ಆವಾಹಿಸಿಕೊಂಡಿದ್ದಾರೆ. ಈ ಪಾತ್ರ ಆರಂಭದಲ್ಲಿ ಸೀದಾ ಸಾದ ಶೈಲಿಯಲ್ಲಿ ಸಾಗುತ್ತೆ. ಅದರ ಮೂಲಕವೇ ನಿರ್ದೇಶಕರು ಒಂದಷ್ಟು ಬೆರಗುಗಳನ್ನಿಟ್ಟಿದ್ದಾರಂತೆ. ಅದೇನೆಂಬುದು ಈ ವಾರವೇ ಎಲ್ಲರೆದುರು ಜಾಹೀರಾಗಲಿದೆ. ಇಂಥಾದ್ದೊಂದು ಪಾತ್ರ ತಮಗೊಲಿದು ಬಂದ ಬಗ್ಗೆ ರಘು ಅವರಲ್ಲೊಂದು ಧನ್ಯತೆಯ ಭಾವವಿದೆ. ಹೊಸಬರೆಂಬ ಸುಳಿವನ್ನೇ ಕೊಡದಂತೆ ಕೆಲಸ ಮಾಡಿರುವ ಚಯನ್ ಶೆಟ್ಟಿಯಂಥಾ ನಿರ್ದೇಶಕರು ಮತ್ತು ಪ್ರತಿಭಾನ್ವಿತರ ತಂಡದೊಂದಿಗೆ ಕೆಲಸ ಮಾಡಿದ ತುಂಬು ಖುಷಿಯೂ ಅವರಲ್ಲಿದೆ. ಸಸ್ಪೆನ್ಸ್ ಥ್ರಿಲ್ಲರ್ ಜಾನರಿನಲ್ಲಿಯೇ ಭಿನ್ನವಾಗಿ ನಿಲ್ಲಬಲ್ಲ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಗೆಲ್ಲುತ್ತದೆಂಬ ಭರವಸೆ ರಘು ಪಾಂಡೇಶ್ವರರದ್ದು.
Advertisement
ಪ್ರತೀ ಸೀನುಗಳೂ ಚೆಂದಗೆ ಮೂಡಿ ಬರಬೇಕೆಂಬ ನಿರ್ದೇಶಕರ ಹಂಬಲ, ಅದಕ್ಕೆ ನಿರ್ಮಾಪಕರ ಕಡೆಯಿಂದ ಸಿಗುತ್ತಿದ್ದ ಸಹಕಾರ ಮತ್ತು ಚಿತ್ರತಂಡದ ಉತ್ಸಾಹಗಳೆಲ್ಲ ಅಧಿಪತ್ರದ ಅನುಭವವನ್ನು ರಘು ಅವರೊಳಗೆ ಅಚ್ಚಾಗಿಸಿದೆ. ಬಹುಶಃ ಈ ಚಿತ್ರ ರಘು ಪಾಂಡೇಶ್ವರರ ಸಿನಿಮಾ ಯಾನದಲ್ಲಿ ಮೈಲಿಗಲ್ಲು ಸೃಷ್ಟಿಸುವ ಸಾಧ್ಯತೆಗಳಿವೆ. ಇಷ್ಟೆಲ್ಲ ವಿಶೇಷತೆಗಳನ್ನು ಒಡಲಲ್ಲಿಟ್ಟುಕೊಂಡಿರುವ ಅಧಿಪತ್ರ ಫೆಬ್ರವರಿ ೭ರಂದು ರಾಜ್ಯಾದ್ಯಂತ ತೆರೆಗಾಣಲಿದೆ. ಕೆಆರ್ ಸಿನಿ ಕಂಬೈನ್ಸ್ ಬ್ಯಾನರಿನಡಿಯಲ್ಲಿ ಅಧಿಪತ್ರ ನಿರ್ಮಾಣಗೊಂಡಿದೆ. ರೂಪೇಶ್ ಶೆಟ್ಟಿ, ಜಾನ್ವಿ, ಎಂ.ಕೆ ಮಠ, ಪ್ರಕಾಶ್ ತುಮಿನಾಡು, ದೀಪಕ್ ರೈ, ಪ್ರಶಾಂತ್ ನಟನಾ, ರಘು ಪಾಂಡೇಶ್ವರ ಮುಂತಾದವರ ತಾರಾಗಣವಿದೆ. ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸಿರುವ ಶ್ರೀಕಾಂತ್ ಅವರೇ ಸಂಕಲನದ ಜವಾಬ್ದಾರಿಯನ್ನೂ ನಿಭಾಯಿಸಿದ್ದಾರೆ.