ಮೈಸೂರು: ನಟ ಪುನೀತ್ ರಾಜ್ಕುಮಾರ್ ಅವರು ಹಿರಿಯ ನಟ ಶಂಕರ್ ಅಶ್ವಥ್ ಮನೆಗೆ ತೆರಳಿ ಅವರ ಕುಟುಂಬದವರನ್ನು ಭೇಟಿ ಮಾಡಿದ್ದಾರೆ.
ಮೈಸೂರಿನ ಸರಸ್ವತಿ ಪುರಂನಲ್ಲಿನ ನಟ ಶಂಕರ್ ಅಶ್ವಥ್ ಮನೆಗೆ ಇಂದು ಬೆಳಗ್ಗೆ ಪುನೀತ್ ಹೋಗಿದ್ದು, ಅವರ ಮೆನೆಯಲ್ಲಿಯೇ ಉಪ್ಪಿಟ್ಟು ಕೇಸರಿಬಾತ್ ಸವಿದಿದ್ದಾರೆ. ಮೈಸೂರಿನಲ್ಲಿ ನಡೆಯುತ್ತಿದ್ದ ‘ಯುವರತ್ನ’ ಸಿನಿಮಾ ಶೂಟಿಂಗ್ನಲ್ಲಿ ಪುನೀತ್ ಭಾಗಿಯಾಗಿದ್ದರು. ಈ ವಿಚಾರ ತಿಳಿದ ಶಂಕರ್ ಅಶ್ವಥ್, ಪುನೀತ್ ಅವರನ್ನು ಮನೆಗೆ ಬರುವಂತೆ ಮನವಿ ಮಾಡಿಕೊಂಡಿದ್ದರು.
ಅವರ ಮನವಿ ಮೇರೆಗೆ ಪುನೀತ್ ಇಂದು ಶಂಕರ್ ಅವರ ಮನೆಗೆ ಭೇಟಿ ನೀಡಿದ್ದಾರೆ. ಮನೆಗೆ ಹೋದಾಗ ಶಂಕರ್ ಅಶ್ವಥ್ ತಾಯಿ ಶಾರದಮ್ಮ ಅವರ ಕಾಲಿಗೆ ನಮಸ್ಕಾರ ಮಾಡಿ ಪುನೀತ್ ಆಶೀರ್ವಾದ ಪಡೆದುಕೊಂಡಿದ್ದಾರೆ. ನಂತರ ಅರ್ಧ ಗಂಟೆಗಳ ಕಾಲ ಶಂಕರ್ ಅಶ್ವಥ್ ಮನೆಯವರ ಜೊತೆ ಕಾಲ ಕಳೆದಿದ್ದಾರೆ.
ಇತ್ತೀಚೆಗಷ್ಟೆ ಪುನೀತ್ ಮತ್ತು ಯಶ್ ಕೂಡ ಭೇಟಿಯಾಗಿದ್ದು, ಅವರಿಬ್ಬರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ನಂತರ ಮರುದಿನ ಮತ್ತೆ ಯಶ್ ಮತ್ತು ಅಪ್ಪು ಒಟ್ಟಿಗೆ ಭೇಟಿಯಾಗಿ ಊಟ ಕೂಡ ಮಾಡಿದ್ದರು. ಯಶ್ ಅಭಿನಯದ ‘ಕೆಜಿಎಫ್ 2’ ಚಿತ್ರದ ಚಿತ್ರೀಕರಣ ಕೂಡ ಮೈಸೂರಿನಲ್ಲಿ ನಡೆಯುತ್ತಿದೆ. ಹೀಗಾಗಿ ಇಬ್ಬರು ನಟರು ಭೇಟಿಯಾಗಿ ಮಾತುಕತೆ ನಡೆಸಿದ್ದರು.