ಬೆಂಗಳೂರು: ಪ್ರಿಯ ಪ್ರಧಾನ ಮಂತ್ರಿಗಳೇ, ಗೆಲುವಿಗಾಗಿ ಅಭಿನಂದನೆಗಳು. ಆದರೆ, ನೀವು ನಿಜಕ್ಕೂ ಸಂತೋಷವಾಗಿದ್ದೀರಾ? ಎಂದು ಬಹುಭಾಷಾ ನಟ ಪ್ರಕಾಶ್ ರೈ ಟ್ವೀಟ್ ಮಾಡಿದ್ದಾರೆ.
ಸಂಘ ಪರಿವಾರ ಮತ್ತು ಬಿಜೆಪಿ ವಿರುದ್ಧದ ಹೋರಾಟವನ್ನು ಮುಂದುವರೆಸಿರುವ ಅವರು, ಗುಜರಾತ್ ಮತ್ತು ಹಿಮಾಚಲ ಪ್ರದೇಶಗಳ ವಿಧಾನಸಭೆ ಚುನಾವಣೆಯ ಫಲಿತಾಂಶ ಬಿಜೆಪಿ ಪರ ಬಂದಿರುವ ಸಂದರ್ಭದಲ್ಲಿ ಟ್ವೀಟ್ ಮಾಡಿದ್ದಾರೆ.
ನನ್ನ ಪ್ರಿಯ ಪ್ರಧಾನಮಂತ್ರಿಗಳಿಗೆ ಎಂದು ಪತ್ರದ ಮಾದರಿಯಲ್ಲಿ ಆರಂಭವಾಗಿರುವ ಟ್ವೀಟ್ನಲ್ಲಿ ಆತ್ಮೀಯರೇ, ಅಭಿನಂದನೆಗಳು. ಹೌದು, ಆದರೆ ವಿಕಾಸದ ತಂತ್ರದಿಂದ ನೀವು ಚುನಾವಣೆಯಲ್ಲಿ ಭಾರೀ ಬಹುಮತದಿಂದ ಗೆಲ್ಲಬೇಕಾಗಿತ್ತು. 150 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲುವ ನಿಮ್ಮ ಗುರಿ ಏನಾಯ್ತು? ಒಂದು ಕ್ಷಣ ನಿಂತು ಆಲೋಚಿಸುತ್ತೀರಾ? ಒಡೆದು ಗೆಲ್ಲುವ ತಂತ್ರ ಫಲಿಸಿಲ್ಲ. ಪಾಕಿಸ್ತಾನ, ಧರ್ಮ, ಜಾತಿ, ದಬ್ಬಾಳಿಕೆ, ವೈಯಕ್ತಿಕ ಲಾಭಗಳಿಕೆಯ ಅಹಂಗಳಿಗಿಂತಲೂ ದೊಡ್ಡ ಸಮಸ್ಯೆಗಳು ನಮ್ಮ ದೇಶದಲ್ಲಿವೆ. ಗ್ರಾಮೀಣ ಪ್ರದೇಶಕ್ಕೆ ಸಂಬಂಧಿಸಿದ ಮುಖ್ಯ ಸಮಸ್ಯೆಗಳು ಇವೆ. ರೈತರ ದನಿಯನ್ನು ನಿರ್ಲಕ್ಷ್ಯಿಸಲಾಗಿದೆ ಹಾಗೂ ಗ್ರಾಮೀಣ ಭಾರತದ ಸಮಸ್ಯೆಗಳ ದನಿ ಏರಿದೆ ಕೇಳಿಸುತ್ತಿದೆಯೇ ಎಂದು ಅವರು ಪ್ರಶ್ನಿಸಿದ್ದಾರೆ.