ಚಿಕ್ಕಬಳ್ಳಾಪುರ: ಜಿಲ್ಲೆಯ ವಿಧಾನಸಭಾ ಕ್ಷೇತ್ರದ ರಾಜಕೀಯ ವಲಯದಲ್ಲಿ ಇಂದು ಹೊಸ ಸಂಚಲನ ಮೂಡಲಿದೆ. ಇದಕ್ಕೆ ಕಾರಣ ತೆಲುಗು ನಟ ಹಾಗೂ ಜನಸೇನಾ ಪಕ್ಷದ ಅಧ್ಯಕ್ಷ ಪವರ್ ಸ್ಟಾರ್ ಪವನ್ ಕಲ್ಯಾಣ್ ಜಿಲ್ಲೆಗೆ ಆಗಮಿಸಿತ್ತಿರುವುದು.
ಪ್ರಸ್ತುತ ಆಂಧ್ರ ಪ್ರದೇಶದ ಹಿಂದೂಪುರಂ ನಲ್ಲಿ ಜನಸೇನಾ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಭಾಗಿಯಾಗಿರುವ ನಟ ಪವನ್ ಕಲ್ಯಾಣ್ ಸಂಜೆ 5 ಗಂಟೆಗೆ ಚಿಕ್ಕಬಳ್ಳಾಪುರಕ್ಕೆ ಆಗಮಿಸಲಿದ್ದಾರೆ. ನಗರದ ಹೊರವಲಯದ ಕೆ ವಿ ಶಿಕ್ಷಣ ಸಂಸ್ಥೆಗಳ ಕ್ಯಾಂಪಸ್ ನಲ್ಲಿ ಸಮಾರಂಭ ನಡೆಯಲಿದ್ದು, ಸಿದ್ಧತೆಗಳು ಪೂರ್ಣಗೊಂಡಿದೆ.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಕೆ ವಿ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಕೆ ವಿ ನವೀನ್ ಕಿರಣ್ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ತೀರ್ಮಾನಿಸಿದ್ದಾರೆ. ನವೀನ್ ಕಿರಣ್ ಜೊತೆ ಪವನ್ ಕಲ್ಯಾಣ್ ಮಾತುಕತೆ ನಡೆಸಲಿದ್ದಾರೆ. ಹೀಗಾಗಿ ಚಿಕ್ಕಬಳ್ಳಾಪುರ ವಿಧಾನಸಭಾಕ್ಷೇತ್ರದ ರಾಜಕೀಯ ವಲಯದಲ್ಲಿ ನಟ ಪವನ್ ಕಲ್ಯಾಣ್ ಭೇಟಿ ಸಂಚಲನ ಮೂಡಿಸಿದೆ. ಹಿಂದೂಪುರಂ ನಲ್ಲಿ ಸಮಾವೇಶ ಮುಗಿದ ಬಳಿಕ ಚಿಕ್ಕಬಳ್ಳಾಪುರಕ್ಕೆ ಆಗಮಿಸಲಿರುವ ಪವನ್ ಕಲ್ಯಾಣ್ ಆಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಈಗಾಗಲೇ ಪವನ್ ಕಲ್ಯಾಣ್ ಗೆ ಸ್ವಾಗತ ಕೋರಲು ಅಭಿಮಾನಿಗಳು ಸನ್ನದ್ಧರಾಗಿದ್ದಾರೆ. ಕೆವಿ ಕ್ಯಾಂಪಸ್ ನ ಆವರಣದಲ್ಲಿ ಬೃಹತ್ ವೇದಿಕೆ ಸಿದ್ಧವಾಗಿದೆ. ಆದರೆ ಈ ಸಮಾರಂಭದ ಕುರಿತು ಮಾತನಾಡಿದ ನವೀನ್ ಕುಮಾರ್ ಕೇವಲ ಅಭಿಮಾನದ ಭೇಟಿ ಅಷ್ಟೇ, ರಾಜಕೀಯದ ಭೇಟಿ ಅಲ್ಲ ಎಂದು ತಿಳಿಸಿದ್ದಾರೆ.
ಈ ಹಿಂದೆ ಜೆಡಿಎಸ್ ಪಕ್ಷದ ಪರ ವಿಧಾನಸಭಾ ಚುನಾವಣೆಯಲ್ಲಿ ಪ್ರಚಾರ ನಡೆಸುತ್ತಾರೆ ಎಂದು ಜೆಡಿಎಸ್ ಮೂಲಗಳಿಂದ ತಿಳಿದು ಬಂದಿತ್ತು. ಈ ಕುರಿತು ಮಾಹಿ ಸಿಎಂ ಕುಮಾರಸ್ವಾಮಿ ಹಾಗೂ ಪವನ್ ಅವರ ನಡುವೆ ಮೂರು ಸುತ್ತಿನ ಮಾತುಕತೆ ಸಹ ನಡೆದಿದೆ ಎನ್ನಲಾಗಿತ್ತು. ಕರ್ನಾಟಕ ಹಾಗೂ ಆಂಧ್ರ ಗಡಿ ಭಾಗದ ಜಿಲ್ಲೆಗಳಾದ ರಾಯಚೂರು, ಕೋಲಾರ, ತುಮಕೂರು, ಬಳ್ಳಾರಿ, ಬೀದರ್, ಚಿಕ್ಕಬಳ್ಳಾಪು ಜಿಲ್ಲೆಗಳಲ್ಲಿ ಪ್ರಚಾರ ನಡೆಸುವ ಮಾಹಿತಿ ಲಭಿಸಿತ್ತು.
ಪವನ್ ಕಲ್ಯಾಣ್ ಸಿನಿಮಾ ಜೊತೆಗೆ ರಾಜಕೀಯದಲ್ಲಿ ಗುರುತಿಸಿಕೊಂಡಿದ್ದು, 2014 ಮಾರ್ಚ್ ನಲ್ಲಿ ತಮ್ಮದೇ `ಜನ ಸೇನಾ’ ಎಂಬ ಪ್ರಾದೇಶಿಕ ಪಕ್ಷವನ್ನು ಸ್ಥಾಪಿಸಿದ್ದಾರೆ. ಪಕ್ಷದ ಮೂರನೇ ವರ್ಷದ ವಾರ್ಷಿಕೋತ್ಸವದಲ್ಲಿ `ಜನಸೇನಾ’ 2019ರ ವಿಧಾನಸಭಾ ಚುನವಾಣೆಯಲ್ಲಿ ಆಂಧ್ರ ಮತ್ತು ತೆಲಂಗಾಣ ಎರಡೂ ರಾಜ್ಯಗಳಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಲಿದೆ. ಸಹೋದರ ಚಿರಂಜೀವಿ `ಜನಸೇನಾ’ ಪಕ್ಷಕ್ಕೆ ಸೇರ್ಪಡೆಯಾಗಲ್ಲ. ರಾಜಕೀಯವಾಗಿ ನನ್ನ ಆಲೋಚನೆಗಳು ಅವರೊಂದಿಗೆ ಹೊಂದಾಣಿಕೆ ಆಗುವುದಿಲ್ಲ. 2019ರ ಚುನಾವಣೆಯಲ್ಲಿ ನಮ್ಮ ಪಕ್ಷದಿಂದ ಶೇ.60ರಷ್ಟು ಕ್ಷೇತ್ರಗಳಲ್ಲಿ ಯುವಕರು ಸ್ಪರ್ಧಿಸಲಿದ್ದು, ನಾನು ಅನಂತಪುರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲಿದ್ದೇನೆ ಎಂದು ತಿಳಿಸಿದ್ದರು.