ದಕ್ಷಿಣ ಸಿನಿಮಾ ರಂಗದಲ್ಲಿ ಅತೀ ಹೆಚ್ಚು ಸಂಭಾವನೆ (Remuneration) ಪಡೆಯುವ ನಟರ ಪಟ್ಟಿಯಲ್ಲಿ ತಮಿಳು ಮತ್ತು ತೆಲುಗು (Telugu) ನಟರೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ಚಿತ್ರವೊಂದಕ್ಕೆ ಕನಿಷ್ಠ ಹತ್ತು ಕೋಟಿಯಿಂದ ಗರಿಷ್ಠ ನೂರು ಕೋಟಿ ರೂಪಾಯಿ ಸಂಭಾವನೆ ಪಡೆಯುವ ನಟರು ಅಲ್ಲಿದ್ದಾರೆ. ಹಾಗಾಗಿ ಸಂಭಾವನೆ ವಿಚಾರ ಬಂದರೆ ರಜನಿಕಾಂತ್, ಕಮಲ್ ಹಾಸನ್, ದಳಪತಿ ವಿಜಯ್, ಪವನ್ ಕಲ್ಯಾಣ್ (Pawan Kalyan) , ಚಿರಂಜೀವಿ, ಜ್ಯೂನಿಯರ್ ಎನ್.ಟಿ.ಆರ್ ಹೀಗೆ ಪ್ರಮುಖ ನಟರ ಹೆಸರು ಕೇಳಿ ಬರುತ್ತವೆ. ಇವರ ಸಂಭಾವನೆ ವಿಚಾರ ನಾನಾ ರೀತಿಯಲ್ಲೂ ಚರ್ಚೆ ಆಗಿದ್ದಿದೆ. ಆದರೆ, ಈವರೆಗೂ ಅಧಿಕೃತವಾಗಿ ಯಾರೂ ತಮ್ಮ ಸಂಭಾವನೆ ಬಗ್ಗೆ ಮಾತನಾಡಿರಲಿಲ್ಲ.
ಇದೇ ಮೊದಲ ಬಾರಿಗೆ ಪವನ್ ಕಲ್ಯಾಣ್ ಅಧಿಕೃತವಾಗಿ ತಮ್ಮ ಸಂಭಾವನೆ ಬಗ್ಗೆ ಮಾತನಾಡಿದ್ದಾರೆ. ತಾವು ಚಿತ್ರವೊಂದಕ್ಕೆ ಎಷ್ಟು ಸಂಭಾವನೆ ಪಡೆಯುತ್ತೇನೆ ಮತ್ತು ಎಷ್ಟು ದಿನ ಕಾಲ್ ಶೀಟ್ ನೀಡುತ್ತೇನೆ ಎನ್ನುವ ವಿಚಾರವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಜನಸೇನಾ ಪಕ್ಷದ 10ನೇ ವರ್ಷದ ವಾರ್ಷಿಕೋತ್ಸವದಲ್ಲಿ ಮಾತನಾಡಿದ ಅವರು, ತಮ್ಮ ಸಂಭಾವನೆ ಎಷ್ಟು ಮತ್ತು ಹೇಗೆ ಎನ್ನುವುದನ್ನು ಬಹಿರಂಗ ಪಡಿಸಿದ್ದಾರೆ. ಇದನ್ನೂ ಓದಿ: ಡಾಲಿ ನಟನೆಯ `ಹೊಯ್ಸಳ’ ಚಿತ್ರದ ಟೈಟಲ್ ಬದಲಾಗಿದ್ದೇಕೆ?
ಪವನ್ ಕಲ್ಯಾಣ್ ಜನಸೇನಾ (Janasena) ಪಕ್ಷ ಕಟ್ಟಿದಾಗಿನಿಂದ ಅವರ ಸಂಭಾವನೆ ವಿಚಾರವಾಗಿ ವಿರೋಧಿಗಳು ಮಾತನಾಡುತ್ತಲೇ ಇದ್ದರು. ಅಭಿಮಾನಿಗಳನ್ನು ದುರುಪಯೋಗ ಪಡಿಸಿಕೊಂಡು ಪಕ್ಷ ಕಟ್ಟುತ್ತಿದ್ದಾರೆ. ಆ ಪಕ್ಷದ ಹಿಂದೆ ಹಣ ಮಾಡುವ ಉದ್ದೇಶವಿದೆ ಎಂದು ಟೀಕೆ ಮಾಡಿದ್ದೂ ಇದೆ. ಅದೆಲ್ಲದಕ್ಕೂ ಉತ್ತರ ನೀಡಿರುವ ಪವನ್ ಕಲ್ಯಾಣ್, ‘ನನಗೆ ದುಡ್ಡಿನ ಚಿಂತೆ ಇಲ್ಲ. ನಾನು ದುಡ್ಡು ಮಾಡುವುದಕ್ಕೂ ಬಂದಿಲ್ಲ. ಸಿನಿಮಾ ಒಪ್ಪಿಕೊಂಡರೆ ದಿನಕ್ಕೆ 2 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತೇನೆ. ಒಂದು ಚಿತ್ರಕ್ಕೆ 22 ದಿನಗಳ ಕಾಲ್ ಶೀಟ್ ಕೊಡುವೆ. 44 ಕೋಟಿ ರೂಪಾಯಿ ಬರುತ್ತದೆ. ಊಟ ಮಾಡುವುದೇ ದಿನಕ್ಕೆ ಒಂದೇ ಸಲ’ ಎಂದು ಭಾವುಕರಾಗಿ ಮಾತನಾಡಿದ್ದಾರೆ.
ತಮ್ಮ ಭಾಷಣದಲ್ಲಿ ಸಂಭಾವನೆಯ ವಿಚಾರವಷ್ಟೇ ಅಲ್ಲ, ತಾವು ಚಿತ್ರಕ್ಕೆ ಕೊಡುವ ಡೇಟ್ ಬಗ್ಗೆಯೂ ಮಾಹಿತಿಯನ್ನು ಹೊರ ಹಾಕಿದ್ದಾರೆ. ಕೋಟಿ ಕೋಟಿ ಸಂಪಾದನೆಯನ್ನು ಸಿನಿಮಾದಲ್ಲೇ ಮಾಡುತ್ತೇನೆ. ಅದಕ್ಕೆ ರಾಜಕೀಯಕ್ಕೆ ಬರಬೇಕಿಲ್ಲ ಎಂದು ತಿರುಗೇಟು ನೀಡಿದ್ದಾರೆ. ಜನಸೇವೆಗೆ ತಾವು ಜನಸೇನಾ ಪಕ್ಷ ಕಟ್ಟಿರುವುದಾಗಿಯೂ ತಿಳಿಸಿದ್ದಾರೆ.