ಮಂಡ್ಯ: ಚಿತ್ರನಟ ಮತ್ತು ಚಿತ್ರೋದ್ಯಮಿ ನವೀನ್ ಚಂದರ್ (55) ಅನಾರೋಗ್ಯದಿಂದ ಬಳಲುತ್ತಿದ್ದು, ಮಂಗಳವಾರ ವಿಧಿವಶರಾಗಿದ್ದಾರೆ.
ಮೃತ ನವೀನ್ ಚಂದರ್ ಅವರು ಮೂಲತಃ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ದೇವರಮಲ್ಲನಾಯಕನಹಳ್ಳಿ ಗ್ರಾಮದವರಾಗಿದ್ದಾರೆ. ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ನವೀನ್ ಚಂದರ್, ಬೆಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ನಿಧನರಾಗಿದ್ದಾರೆ.
ನವೀನ್ ಚಂದರ್ ಅವರು ಅಂಬರೀಶ್ ನಾಯಕರಾಗಿದ್ದ ‘ಕಾಲಚಕ್ರ’ ಸಿನಿಮಾದಲ್ಲಿ ಸಹನಟನಾಗಿ ಅಭಿನಯಿಸುವ ಮೂಲಕ ಚಿತ್ರರಂಗಕ್ಕೆ ಪಾರಾರ್ಪಣೆ ಮಾಡಿದ್ದರು. ನಂತರ ಕೂಡ್ಲು ರಾಮಕೃಷ್ಣ ನಿರ್ದೇಶನದ ‘ಕಾದಂಬರಿ’ ಸಿನಿಮಾದ ಮೂಲಕ ನಾಯಕನಾಗಿದ್ದರು.
‘ಪ್ರಿಯಾ ಒ ಪ್ರಿಯಾ’, ‘ಪೂಜಾ’, ‘ಶ್ರುತಿ’ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದು, ಇಂದು ಸ್ವ ಗ್ರಾಮದಲ್ಲಿ ನವೀನ್ ಚಂದರ್ ಅವರ ಅಂತ್ಯಕ್ರಿಯೆ ನಡೆದಿದೆ.