ನಾಲ್ಕೈದು ದಿನಗಳಿಂದ ನಟ ಜೈ ಜಗದೀಶ್ ಅವರು ತಮ್ಮ ತೋಟಕ್ಕೆ ಹೊರಟಾಗ, ಬೆಳ್ಳೂರು ಕ್ರಾಸ್ ಟೋಲ್ ಬಳಿ ವ್ಯಕ್ತಿಯೊಂದಿಗೆ ಗಲಾಟೆಯಾಗಿ ಅದು ಪೊಲೀಸ್ ಠಾಣೆ ಮೆಟ್ಟಿಲು ಏರಿತ್ತು. ಗಲಾಟೆಯಾಗಿ ಐದು ದಿನಗಳ ಬಳಿಕ ಆವ್ಯಕ್ತಿಯು ದೂರು ನೀಡಿದ್ದನ್ನು ಕೇಳಿ ಸ್ವತಃ ಜೈ ಜಗದೀಶ್ ಅವರೇ ಅಚ್ಚರಿ ವ್ಯಕ್ತ ಪಡಿಸಿದ್ದಾರೆ. ಆ ವ್ಯಕ್ತಿ ಮಾಡಿರುವ ಆರೋಪಗಳನ್ನು ಅವರು ತಳ್ಳಿ ಹಾಕಿದ್ದಾರೆ. ಗಲಾಟೆ ನಡೆದದ್ದು ನಿಜವಾದರೂ, ಆ ವ್ಯಕ್ತಿ ದೂರಿನಲ್ಲಿ ಬರೆದದ್ದು ಸುಳ್ಳು ಎಂದು ಹೇಳಿದ್ದಾರೆ ಜೈ ಜಗದೀಶ್.
ಪ್ರತಿವಾರವೂ ಜೈ ಜಗದೀಶ್ ನ್ಯಾಷನಲ್ ಹೈವೇಯಲ್ಲಿ ತೋಟಕ್ಕೆ ಹೋಗುತ್ತಾರಂತೆ. ಹೀಗೆ ಹೋಗುವ ಸಂದರ್ಭದಲ್ಲಿ ಬೆಳ್ಳೂರು ಕ್ರಾಸ್ ಟೋಲ್ ಬಳಿ ಬಸ್ ನಿಂತಿದೆ. ಆ ಬಸ್ ನಿಂದ ವ್ಯಕ್ತಿಯೊಬ್ಬ ಬಾಟಲಿ ಬಿಸಾಡಿದ್ದಾನೆ. ಅದನ್ನು ಕಂಡು ಜೈ ಜಗದೀಶ್ ಆ ವ್ಯಕ್ತಿಯನ್ನು ಪ್ರಶ್ನಿಸಿದ್ದಾರೆ. ಜಗಳ ಇಲ್ಲಿಂದ ಪ್ರಾರಂಭವಾಗಿದೆ. ಆ ವ್ಯಕ್ತಿಯು ಬಾಟಲಿ ಬಿಸಾಡಿದ್ದು ನಾನಲ್ಲ ಅಂದರೆ, ನೀನೇ ಬಿಸಾಡಿದ್ದು ಎಂದು ಜೈ ಜಗದೀಶ್ ಹೇಳಿದ್ದಾರೆ. ಆಗ ಆ ವ್ಯಕ್ತಿಯೇ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ ಎಂದಿದ್ದಾರೆ ಜೈ ಜಗದೀಶ್. ಓದಿ : ಧನಂಜಯ್ ನಟನೆಯ ಮತ್ತೊಂದು ಸಿನಿಮಾ ರಿಲೀಸ್ ಘೋಷಣೆ : ವರ್ಷದ ಅತೀ ಹೆಚ್ಚು ಸಿನಿಮಾ ರಿಲೀಸ್ ಆದ ನಟ ಡಾಲಿ
ಮಾತಿಗೆ ಮಾತು ಬೆಳೆದಾಗ ಬರೀ ಬೈಗುಳಗಳು ಮಾತ್ರವಲ್ಲ, ಹೊಡೆಯುವಂತೆ ಜೈ ಜಗದೀಶ್ ಮೇಲೆ ಆ ವ್ಯಕ್ತಿ ಬಂದನಂತೆ. ಆ ಜೈ ಜಗದೀಶ್ ಕಾರು ಡ್ರೈವರ್ ಆತನ್ನು ಬಿಡಿಸುವುದಕ್ಕಾಗಿ ಹೋಗಿದ್ದಾರೆ. ಅಲ್ಲದೇ ವ್ಯಕ್ತಿಯು ಕಾರಿನ ಕೀ ಕಿತ್ತುಕೊಂಡಾಗ ಅದನ್ನು ವಾಪಸ್ಸು ಪಡೆಯಲು ಹರಸಾಹಸವೇ ನಡೆದಿದೆ. ಆ ವೇಳೆಯಲ್ಲಿ ವ್ಯಕ್ತಿ ಬಟ್ಟೆ ಹರಿದಿದೆ. ಘಟನೆ ನಡೆದು ಐದು ದಿನಗಳ ನಂತರ ದೂರು ದಾಖಲಾಗಿದೆ. ಅದು ಆ ವ್ಯಕ್ತಿಯಲ್ಲ, ಅವರ ತಂದೆ ಕೊಟ್ಟಿರುವ ದೂರು ಎಂದಿದ್ದಾರೆ ಜೈ ಜಗದೀಶ್.