ಕಾಂತಾರ ಸಿನಿಮಾ ರಿಲೀಸ್ ಆದಾಗ ಜಗ್ಗೇಶ್ ಅಮೆರಿಕಾದಲ್ಲಿದ್ದರು. ಹಾಗಾಗಿ ಸಿನಿಮಾವನ್ನು ತಡವಾಗಿ ನೋಡಿ, ಆ ಅನುಭವವನ್ನು ಅಕ್ಷರಕ್ಕೆ ಇಳಿಸಿದ್ದಾರೆ. ಸಿನಿಮಾ ನೋಡಿದ ಮೇಲೆ ತಮ್ಮಲ್ಲಾದ ಬದಲಾವಣೆಯನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅದನ್ನೇ ಇಲ್ಲಿ ಪ್ರಕಟಿಸಲಾಗಿದೆ.
ಕನ್ನಡ ಚಿತ್ರರಂಗದ ಒಳಿತು ಬಯಸಿ ಬದುಕುತ್ತಿರುವ ಜೀವ ನನ್ನದು. ಕಾರಣ ನನ್ನ ಬದುಕಿಗೆ ಸಕಲವೂ ನೀಡಿದ ನನ್ನ ತಾಯಿ ಕನ್ನಡ (Kannada) ಚಿತ್ರರಂಗ. ಬಾಲ್ಯದಿಂದ ಕನ್ನಡ ಹಾಗೂ ರಾಜಣ್ಣನ (ಡಾ.ರಾಜ್ ಕುಮಾರ್) ಹುಚ್ಚು ಅಭಿಮಾನಿಯಾದ ನಾನು ಕರುನಾಡ ದಾಟಿ ಹೊರಹೋಗದೆ ಬದುಕಿದವನು. ಸದಾ ನನ್ನ ಕನ್ನಡದ ಕಲಾರಂಗ ಜಗಮೆಚ್ಚುವ ರಂಗ ಆಗಬೇಕು ಎಂದು ಹಂಬಲಿಸುವ ಜನ್ಮ ನನ್ನದು.
ಇತ್ತೀಚಿನ ಚಿತ್ರ ಕಾಂತಾರ (Kantara) ವಿದೇಶಕ್ಕೆ ಬಂದ ಕಾರಣ ನೋಡಲಾಗಲಿಲ್ಲ. ಆದರೆ ನನ್ನ ಅಕ್ಕನ ಮಗ ಜೀವನ್ ಹಾಗು ನನ್ನ ಅನೇಕ ಚಿತ್ರ ‘ಗುರು’, ‘ಮೇಲುಕೋಟೆ ಮಂಜ’ ಚಿತ್ರದಲ್ಲಿ ಖಳನಟನಾಗಿ ಅಭಿನಯಿಸಿದನು ಇಂದು ಅಮೆರಿಕಾದ ( America) ಡೆನ್ವರ್ ನಲ್ಲಿ ವರೆಕಲ್ ಸಂಸ್ಥೆಯಲ್ಲಿ ಶ್ರೇಷ್ಠ ಸ್ಥಾನದಲ್ಲಿರುವ. ಅವನ ಮನೆ ಹತ್ತಿರದಲ್ಲೆ ಮಾಲ್ ಇತ್ತು. ಅಲ್ಲಿ ಕಾಂತಾರ ನೋಡುವ ಅವಕಾಶ ಸಿಕ್ಕಿತು ನೋಡಿ ಬಂದೆ.
ನಾನು ದಕ್ಷಿಣ ಕನ್ನಡದ ದೇವಾಲಯದ ಭಕ್ತ. ವರ್ಷಕ್ಕೆ ಒಂದು ಬಾರಿ ಪೊಳಲಿ, ಕಟೀಲು, ಉಡುಪಿ ಕೃಷ್ಣ, ಮೂಕಾಂಬಿಕೆ, ಕೊರಗಜ್ಜ, ಅಂಬಲಪಾಡಿ, ಉಡುಪಿ ರಾಯರ ಮಠ ದರ್ಶನ ಪಡೆಯುವುದು ನನ್ನ 30 ವರ್ಷದ ಅಭ್ಯಾಸ. ಇದು ನನ್ನ ಪ್ರಕಾರ ಶ್ರೇಷ್ಠ ದೇವಭೂಮಿ. ಆಧ್ಯಾತ್ಮಿಕ ಅನುಭವಕ್ಕೆ ಈ ಕ್ಷೇತ್ರದಲ್ಲಿ ಸಂತೃಪ್ತ ಭಾವ ಸಿಗುತ್ತದೆ. ಇಂಥ ನಾಡಿನಿಂದ ಎಂಥ ಅದ್ಭುತ ನಟ, ನಿರ್ದೇಶಕ ರಿಷಬ್ ಶೆಟ್ಟಿ ಹುಟ್ಟಿ ಬಂದ. ಎಂಥ ಅದ್ಭುತ ಕೊಡುಗೆ ಈತ ಕನ್ನಡ ಚಿತ್ರರಂಗಕ್ಕೆ. ಕಾಂತಾರ ಕಡೆಯ 25 ನಿಮಿಷ ನಾನು ಎಲ್ಲಿರುವೆ ಎಂದು ಮರೆತು ಹೋಯಿತು. ಚಿತ್ರ ನೋಡಿದ ಮೇಲೆ ಮೌನವಾಯಿತು.
ದೇಹ ಮನಸ್ಸು ಹೊರಬಂದಾಗ ಕಾಕತಾಳಿಯ ಎಂಬಂತೆ ಮಂತ್ರಾಲಯ ನರಸಿಂಹಚಾರ್ ವಾಟ್ಸ್ಯಾಪ್ ಕರೆಮಾಡಿ ರಾಯರ ದರ್ಶನ ಮಾಡಿಸಿದರು. ಮೂಕವಿಸ್ಮಿತನಾದೆ. ನಂತರ ನನಗೆ ಅನಿಸಿದ್ದು ಇದು ರಿಷಬ್ (Rishabh Shetty) ಮಾಡಿದ ಚಿತ್ರವಲ್ಲಾ, ಬದಲಿಗೆ ಆತನ ವಂಶೀಕರ ತಂದೆ ತಾಯಿಯ ಆಶೀರ್ವಾದ. ನಶಿಸುತ್ತಿರುವ ಆಧ್ಯಾತ್ಮಿಕ ಭಾವ ಮತ್ತೆ ಮನುಷ್ಯರಿಗೆ ನೆನಪಿಸಲು ದೇವರೆ ಬಂದು ಆತನ ಕೈಯಲ್ಲಿ ಇಂಥ ಅದ್ಭುತ ಸಿನಿಮಾ ಮಾಡಿಸಿದ್ದಾರೆ. ದೇವರ ದಯೆಯಿಂದ ರಿಷಬನಿಗೆ ನೂರ್ಕಾಲ ಆಯುಷ್ಯ ಆರೋಗ್ಯ ಕೊಟ್ಟು ಕನ್ನಡ ಕಲಾರಂಗಕ್ಕೆ ಆತನ ಸೇವೆ ಇದೆ ರೀತಿ ಮುಂದುವರಿಯಲಿ ಎಂದು ನನ್ನ ಶುಭಹಾರೈಕೆ.
ಕಾಂತಾರ ಸಿನಿಮಾ (Cinema)ಅಲ್ಲಾ, ರೋಮಾಂಚನ ಅನುಭವ. god bless entire team