ರಾಯಚೂರು: ಯಶವಂತಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಚಿತ್ರನಟ ಜಗ್ಗೇಶ್ ಮತದಾನ ನಂತರ ಮಂತ್ರಾಲಯಕ್ಕೆ ಆಗಮಿಸಿ ರಾಯರ ದರ್ಶನ ಪಡೆದರು.
ಈ ವೇಳೆ ಮಂತ್ರಾಲಯದಲ್ಲಿ ಮಾತನಾಡಿದ ಜಗ್ಗೇಶ್ ಇಲ್ಲಿಯವರೆಗೂ ಚುನಾವಣೆ ಬ್ಯುಸಿಯಲ್ಲಿದ್ದೆ. ಹದಿನೈದು ದಿನದಿಂದ ಪಾರಾಯಣ ಮಾಡಲು ಆಗಿರಲಿಲ್ಲ. ಹೀಗಾಗಿ ಆರಾಧ್ಯ ದೈವ ಗುರುರಾಯರ ದರ್ಶನಕ್ಕೆ ಬಂದಿದ್ದೇನೆ ಎಂದರು.
ಇದೇ ವೇಳೆ ಸಿದ್ದರಾಮಯ್ಯ ನಾನೇ ಮುಖ್ಯಮಂತ್ರಿ ಎಂಬ ಮಾತಿಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಅವರು ಜ್ಯೋತಿಷಿಗಳಲ್ಲ, ಮೇಧಾವಿಯೂ ಅಲ್ಲ ಅವರು ಮುಖ್ಯಮಂತ್ರಿಯಾಗಲ್ಲ ಎಂದರು. ಅಲ್ಲದೇ ಯಶವಂತಪುರದಲ್ಲಿ ಜೆಡಿಎಸ್ ಕಾಂಗ್ರೆಸ್ ಕಾರ್ಯಕರ್ತರು ಕಣ್ಣೆದುರಲ್ಲೇ ಹಣ ಹಂಚಿದ್ದಾರೆ ಎಂದು ಆರೋಪಿಸಿದರು.
ಚುನಾವಣೆಯಲ್ಲಿ ನನ್ನ ಸೋಲು, ಗೆಲುವನ್ನು ರಾಯರ ಮೇಲೆ ಹಾಕುವುದಿಲ್ಲ. ನಾನು ಹದಿನೈದು ದಿನದ ಅಭ್ಯರ್ಥಿ, ಯಶವಂತಪುರದಲ್ಲಿ ನನ್ನ ಗೆಲುವಿನ ಬಗ್ಗೆ ಆಶಾಭಾವನೆ ಹೊಂದಿದ್ದೇನೆ. ಪ್ರಧಾನಿ ಮೋದಿ ದೇಶದಲ್ಲಿ ಭ್ರಷ್ಟಾಚಾರ ತಡೆಯಲು ಮುಂದಾಗಿದ್ದಾರೆ. ಆದರೆ ಅದಕ್ಕೆ ಮತದಾರರು ಮತ ಹಾಕಿ ಪ್ರಜಾಪ್ರಭುತ್ವ ಉಳಿಸಬೇಕಿತ್ತು. ಮಾಧ್ಯಮಗಳು ಸಹ ಮತದಾನದ ಕುರಿತು ಸಾಕಷ್ಟು ಜಾಗೃತಿ ಮೂಡಿಸಿದ್ರು ಬೆಂಗಳೂರು ನಗರ ಸೇರಿದಂತೆ ಹಲವು ಕಡೆ ಹೆಚ್ಚಿನ ಮಂದಿ ಮತ ಹಾಕಲು ಜನರು ಬರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.