ಸಿಎಂ ಸಿದ್ಧರಾಮಯ್ಯ (Siddaramaiah) ಇಂದು ಬಜೆಟ್ (Karnataka Budget 2024) ಮಂಡಣೆಗಾಗಿ ಹಿಡಿದು ತಂದಿದ್ದ ಬ್ಯಾಗ್ (Bag)ಗೆ ನಟ ಡಾಲಿ ಧನಂಜಯ್ (Dolly Dhananjay) ಅಂಬಾಸಿಡರ್ ಆಗಿದ್ದಾರೆ. ಇತ್ತೀಚಿಗಷ್ಟೇ ಡಾಲಿ ಧನಂಜಯ್ ಅವರು ಲಿಡ್ಕರ್ ಸಂಸ್ಥೆಗೆ ಬ್ರಾಂಡ್ ಅಂಬಾಸೆಡರ್ ಆಗಿ ಆಯ್ಕೆ ಆಗಿದ್ದರು, ಈ ಬಾರಿಯ ಮುಖ್ಯಮಂತ್ರಿಗಳು ಸೂಟ್ಕೇಸ್ ಬಿಟ್ಟು ಲಿಡ್ಕರ್ ಬ್ಯಾಗ್ ನಲ್ಲಿ ಬಜೆಟ್ ಪ್ರತಿಗಳನ್ನು ತೆಗೆದುಕೊಂಡು ವಿಧಾನಸೌಧ ಪ್ರವೇಶ ಮಾಡಿದ್ದಾರೆ. ಹಾಗಾಗಿ ಸಹಜವಾಗಿಯೇ ಡಾಲಿ ಧನಂಜಯ್ ಹರ್ಷ ವ್ಯಕ್ತ ಪಡಿಸಿದ್ದಾರೆ.
ಅಲ್ಲದೇ, ಈ ಬಾರಿಯ ಪ್ರಸಕ್ತ ಬಜೆಟ್ ನಲ್ಲಿ ಕೆಲ ಸಿನಿಮಾಗಳ ಸಾಲುಗಳನ್ನು ಬಳಸಿಕೊಳ್ಳಲಾಗಿದೆ. ಬಜೆಟ್ ಭಾಷಣದ ಆರಂಭದಲ್ಲಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಡಾ.ರಾಜಕುಮಾರ್ ಅವರ ಬಂಗಾರದ ಮನುಷ್ಯ ಸಿನಿಮಾದ ಹಾಡಿನ ಸಾಲುಗಳನ್ನ ಹೇಳುತ್ತಾ ಬಜೆಟ್ ಮಂಡನೆಯನ್ನು ಶುರು ಮಾಡಿದರು.
ಬಂಗಾರದ ಮನುಷ್ಯ ಮಾತ್ರವಲ್ಲದೆ ಕಳೆದ ವರ್ಷ ಬಿಡುಗಡೆಯಾದ ಡಾಲಿ ಧನಂಜಯ ನಿರ್ಮಾಣದ ಶಶಾಂಕ್ ಸೋಗಲ್ ನಿರ್ದೇಶನದ ಮುಸ್ತಫಾ ಸಿನಿಮಾದ ಸಾಲುಗಳನ್ನು ಕೂಡ ಬಳಸಿಕೊಳ್ಳಲಾಗಿದೆ. ಸಮಾಜ ಕಲ್ಯಾಣ ಇಲಾಖೆ ಅನುದಾನಗಳನ್ನ ಮಂಡಿಸುವ ಮುನ್ನ ಸಿಎಂ ಸಿದ್ದರಾಮಯ್ಯನವರು ಡೇರ್ ಡೆವಿಲ್ ಮುಸ್ತಫಾ ಚಿತ್ರದ ಎರಡು ಸಾಲುಗಳನ್ನ ಸದನದಲ್ಲಿ ಹೇಳಿದ್ದಾರೆ. ‘ಒಂದು ತೋಟದಲ್ಲಿ ನೂರು ಹೂವು ಅರಳಲಿ ಎಲ್ಲಾ ಕೂಡಿ ಆಡುವಂತ ಗಾಳಿ ಬೀಸಲಿ’ ಈ ಸಾಲುಗಳನ್ನ ಹೇಳುವ ಮೂಲಕ ಸಮಾಜ ಕಲ್ಯಾಣ ಇಲಾಖೆಗೆ ಕೊಟ್ಟಿರುವ ಅನುದಾನವನ್ನು ಮಂಡಿಸಿದ್ದಾರೆ.
ನಟ ಡಾಲಿ ಧನಂಜಯ್ ಅವರು ಡೇರ್ ಡೆವಿಲ್ ಮುಸ್ತಫಾ ಸಿನಿಮಾವನ್ನ ನಿರ್ಮಾಣ ಹಾಗೂ ಪ್ರಸ್ತುತಪಡಿಸಿದ್ದರು. ಅದರ ಜೊತೆಗೆ ಸಿನಿಮಾದ ಒಂದಷ್ಟು ವಿಭಾಗಗಳಲ್ಲಿ ಕೆಲಸ ಮಾಡಿದ್ದರು. ಈ ಸಾಲುಗಳನ್ನು ಕೂಡ ಖುದ್ದು ಧನಂಜಯ ಅವರೇ ಬರೆದಿದ್ದು ಎನ್ನುವುದು ವಿಶೇಷ.