-ಇತ್ತ ದರ್ಶನ್ ಕಾರ್ ನಾಪತ್ತೆ
ಮೈಸೂರು: ನಟ ದರ್ಶನ್ ಕಾರು ಅಪಘಾತದಲ್ಲಿ ಬಲಗೈ ಮುರಿದುಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರಿಗಾಗಿ ಪತ್ನಿ ವಿಜಯಲಕ್ಷ್ಮಿ ಮತ್ತು ಮಗ ಆಸ್ಪತ್ರೆಯಲ್ಲಿ ಕಾಯುತ್ತಿದ್ದಾರೆ.
ಇಂದು ಮುಂಜಾನೆ ಮೈಸೂರಿನ ಹಿನಕಲ್ ರಿಂಗ್ ರಸ್ತೆಯಲ್ಲಿ ಡಿವೈಡರಿಗೆ ಡಿಕ್ಕಿ ಹೊಡೆದು ದರ್ಶನ್ ಕಾರ್ ಅಪಘಾತ ಸಂಭವಿಸಿದೆ. ಕಾರನ್ನು ಸ್ವತಃ ದರ್ಶನ್ ಅವರೇ ಚಲಾಯಿಸುತ್ತಿದ್ದರಂತೆ. ಮೈಸೂರಿನ ಹೊರವಲದಲ್ಲಿರುವ ಆಸ್ಪತ್ರೆಯಲ್ಲಿ ದರ್ಶನ್ ಅವರನ್ನು ದಾಖಲಿಸಲಾಗಿದೆ. ದರ್ಶನ್ ಅವರ ಕೈ ಮೂಳೆ ಮುರಿದಿದ್ದು, ಆಪರೇಷನ್ ಥಿಯೇಟರ್ ನಲ್ಲಿ ಚಿಕಿತ್ಸೆ ನಡೆಯುತ್ತಿದೆ.
ದರ್ಶನ್ ಅವರಿಗೆ ಅಪಘಾತ ಸಂಭವಿಸಿದ ಬಗ್ಗೆ ಮಾಹಿತಿ ತಿಳಿದ ಪತ್ನಿ ವಿಜಯಲಕ್ಷ್ಮಿ, ಮಗ ವಿನೀಶ್, ನಿರ್ಮಾಪಕ ಸಂದೀಪ್ ನಾಗರಾಜು ಪುತ್ರ ಮತ್ತು ದೇವರಾಜ್ ಅವರ ಕಿರಿಯ ಪುತ್ರ ಪ್ರಣಮ್ ಆಸ್ಪತ್ರೆಗೆ ಬಂದಿದ್ದಾರೆ. ಅಪಘಾತದಲ್ಲಿ ಪ್ರಜ್ವಲ್ ದೇವರಾಜ್ ಅವರಿಗೆ ತರಚಿದ ಗಾಯಗಳಾಗಿದ್ದು, ದೇವರಾಜ್ ಅವರ ಕೈ ಬೆರಳುಗಳಿಗೆ ಗಾಯಗಳಾಗಿದೆಯಂತೆ. ಇವರೆಲ್ಲರು ಭಾನುವಾರದಿಂದ ಜೊತೆಯಲ್ಲಿದ್ದಾರೆ. ಇನ್ನು ಅರ್ಧ ಗಂಟೆಯಲ್ಲಿ ದರ್ಶನ್ ಚಿಕಿತ್ಸೆ ಮುಗಿಯಲಿದೆ ಎನ್ನಲಾಗಿದೆ.
ಇತ್ತ ಅಪಘಾತದ ಸ್ಥಳದಲ್ಲಿ ದರ್ಶನ್ ಕಾರು ನಾಪತ್ತೆಯಾಗಿದೆ. ವಿವಿ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲೂ ಕಾರ್ ಇಲ್ಲ. ಇದರಿಂದ ದರ್ಶನ್ ಅಪಘಾತದ ವಿಚಾರದಲ್ಲಿ ಪೊಲೀಸರು ಗೌಪ್ಯತೆ ಕಾಪಾಡುತ್ತಿದ್ದಾರಾ ಎಂಬ ಮಾತು ಕೇಳಿ ಬರುತ್ತಿದೆ.
ಭಾನುವಾರ ದರ್ಶನ್, ದೇವರಾಜ್ ಹಾಗೂ ಪ್ರಜ್ವಲ್ ದೇವರಾಜ್ ಅವರು ಮೃಸೂರಿನ ಮೃಗಾಲಯಕ್ಕೆ ಭೇಟಿ ನೀಡಿದ್ದರು. ಅಷ್ಟೇ ಅಲ್ಲದೇ ಪ್ರಾಣಿಗಳನ್ನು ದತ್ತು ಪಡೆದುಕೊಂಡು ಅರಮನೆಯ ಸುತ್ತ ಓಡಾಡಿ, ಮಾವಾಡಿಗಳ ಜೊತೆ ಊಟ ಮಾಡಿ, ಯದುವೀರ್ ಅವರೊಡನೆ ಮಾತನಾಡಿ ಇಂದು ಬೆಳಗಿನ ಜಾವ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದರು. ಒಂದೇ ಕಾರಿನಲ್ಲಿ ದರ್ಶನ್, ನಟರಾದ ದೇವರಾಜ್ ಹಾಗೂ ಪ್ರಜ್ವಲ್ ದೇವರಾಜ್ ಪ್ರಯಾಣಿಸುತ್ತಿದ್ದರು. ಈ ವೇಳೆ ಮೈಸೂರಿನ ಹೊರವಲಯದ ಹಿನಕಲ್ ಬಳಿ ಕಾರು ರಸ್ತೆ ಡಿವೈಡರ್ ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://www.youtube.com/watch?v=FFi-X9R8Chw
https://www.youtube.com/watch?v=d7mbVstCWvY