ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರೋ ನಟ ದರ್ಶನ್ (Darshan) ನೋವಿನಲ್ಲೇ ದಿನಗಳನ್ನು ದೂಡುತ್ತಿದ್ದಾರಂತೆ. ಆ ನೋವನ್ನು ಕಡಿಮೆ ಮಾಡಿಕೊಳ್ಳುವುದಕ್ಕಾಗಿ ಅವರು ಯೋಗ ಮತ್ತು ಹನುಮಾನ್ ಚಾಲೀಸ್ ಪಠಣಕ್ಕೆ ಮುಂದಾಗಿದ್ದಾರಂತೆ. ನಿತ್ಯವೂ ಈಗ ಜೈಲಿನಲ್ಲಿ ಕೂತು ದರ್ಶನ್ ಹನುಮಾನ್ ಚಾಲೀಸ್ ಪಠಣ ಮಾಡುತ್ತಿದ್ದಾರೆ. ಜೊತೆಗೆ ಜೈಲರ್ ಗೆ ಮನವಿ ಮಾಡಿ ಅಲ್ಲೇ ಸಿಗುವ ಪುಸ್ತಕಗಳನ್ನು ಓದುತ್ತಿದ್ದಾರಂತೆ.
ಪರಪ್ಪನ ಅಗ್ರಹಾರ ಜೈಲಿಗೆ ದರ್ಶನ್ ಸೇರಿ ಮೂರು ವಾರಗಳು ಕಳೆದಿವೆ. ಒಂದೊಂದು ದಿನವನ್ನೂ ಅವರು ಕಳೆಯೋಕೆ ಕಷ್ಟ ಪಡ್ತಿದ್ದಾರೆ. ಆರೋಗ್ಯದಲ್ಲಿ ಆಗಾಗ್ಗೆ ಸಮಸ್ಯೆ ಕಾಣಿಸಿಕೊಳ್ತಿದೆ. ನಿತ್ಯವೂ ಅವರ ತೂಕ ಕಳೆದುಕೊಳ್ಳುತ್ತಿದ್ದಾರೆ. ಜೊತೆಗೆ ಜೈಲಿನ ಆಹಾರ ಕೂಡ ಅವರಿಗೆ ಒಗ್ಗುತ್ತಿಲ್ಲ. ಇದರಿಂದಾಗಿ ದರ್ಶನ್ ಕುಗ್ಗಿ ಹೋಗಿದ್ದಾರಂತೆ. ಖಿನ್ನತೆಯಿಂದಲೂ ಬಳಲುತ್ತಿದ್ದಾರಂತೆ.
ಆರೋಗ್ಯದ ಸಮಸ್ಯೆಯನ್ನು ಮುಂದಿಟ್ಟುಕೊಂಡು ಮೊನ್ನೆಯಷ್ಟೇ ತನಗೆ ಮನೆ ಊಟ ಬೇಕು ಅಂತ ಮಾನ್ಯ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು ದರ್ಶನ್. ಈ ಅರ್ಜಿಯ ವಿಚಾರಣೆಯನ್ನು ಜುಲೈ 18ಕ್ಕೆ ನ್ಯಾಯಾಲಯ ಮುಂದೂಡಿದೆ. ಅವತ್ತು ಮನೆ ಊಟಕ್ಕೆ ಅನುಮತಿ ಸಿಗತ್ತಾ? ಅಥವಾ ಜೈಲೂಟವೇ ಮುಂದುವರೆಯತ್ತಾ ಅಂತ ಕಾದು ನೋಡಬೇಕು.