-ಬ್ಯಾರಿಕೇಡ್ ಹಾಕಿ ವೇದಿಕೆ ಸಿದ್ಧತೆ
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬಕ್ಕೂ ಮುನ್ನವೇ ಅಭಿಮಾನಿಗಳ ಗಿಫ್ಟ್ ದರ್ಶನ್ ಮನೆ ತಲುಪಿದೆ.
ದರ್ಶನ್ ಅಭಿಮಾನಿಯೊಬ್ಬರು ಲೋಡ್ಗಟ್ಟಲೆ ಅಕ್ಕಿ ಮೂಟೆಗಳನ್ನ ದರ್ಶನ್ ಮನೆಗೆ ತಂದು ತಲುಪಿಸಿದ್ದಾರೆ. ಅಷ್ಟೇ ಅಲ್ಲದೇ ಆರ್.ಆರ್ ನಗರದ ದರ್ಶನ್ ನಿವಾಸದ ಮುಂದೆ ಬ್ಯಾರಿಕೇಡ್ ಹಾಕಿ ವೇದಿಕೆ ರೆಡಿಮಾಡಲಾಗುತ್ತಿದೆ. ತಮ್ಮ ಹುಟ್ಟುಹಬ್ಬಕ್ಕೆ ಗಿಫ್ಟ್ ರೂಪದಲ್ಲಿ ಸಿಗುವ ಎಲ್ಲಾ ಧಾನ್ಯಗಳನ್ನೂ ಪ್ರತೀ ಜಿಲ್ಲೆಯ ಒಂದು ಅನಾಥಾಶ್ರಮ, ವೃದ್ಧಾಶ್ರಮ ಹಾಗೂ ಸಿದ್ಧಗಂಗಾ ಮಠಕ್ಕೆ ನೀಡುವ ಜವಾಬ್ದಾರಿಯನ್ನ ದರ್ಶನ್ ಹೊತ್ತುಕೊಂಡಿದ್ದಾರೆ. ಇದನ್ನೂ ಓದಿ: ಪ್ರೀತಿಯ ಅಭಿಮಾನಿಗಳಿಗೆ ನಮಸ್ಕಾರ ತಿಳಿಸಿ ಪತ್ರ ಬರೆದ ದರ್ಶನ್
ಫೆ.16 ರಂದು 42 ವಸಂತಕ್ಕೆ ಕಾಲಿಡಲಿರುವ ಹಿನ್ನೆಲೆಯಲ್ಲಿ ಕೇಕ್, ಪಟಾಕಿ, ಹೂ ಹಾರಕ್ಕಾಗಿ ಹಣ ವ್ಯಯ ಮಾಡದಂತೆ ದರ್ಶನ್ ತಮ್ಮ ಅಭಿಮಾನಿಗಳಿಗೆ ಹೇಳಿಕೊಂಡಿದ್ದರು. ಹೀಗಾಗಿ ದರ್ಶನ್ ಮನವಿಯನ್ನ ಚಾಚೂ ತಪ್ಪದೆ ಪಾಲಿಸುವ ಅಭಿಮಾನಿಗಳು ಈ ವರ್ಷದಿಂದ ಸಮಾಜಮಖಿ ಕಾರ್ಯಕ್ಕೆ ಮುಂದಾಗುತ್ತಿದ್ದಾರೆ. ಹುಟ್ಟುಹಬ್ಬಕ್ಕೆ ಎರಡು ದಿನ ಮುಂಚೆಯೇ ಆರ್.ಆರ್ ನಗರದ ದರ್ಶನ್ ಮನೆಗೆ ಆಹಾರ ಧಾನ್ಯಗಳ ಉಡುಗೊರೆ ಸಂಗ್ರಹವಾಗುತ್ತಿದೆ.
ದರ್ಶನ್ ಅವರು ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಳ್ಳಲು ನಿರ್ಧರಿಸಿದ್ದರು. ಈ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೆ ತಮ್ಮ ಅಭಿಮಾನಿಗಳಿಗೆ ಪತ್ರ ಬರೆದಿದ್ದರು. “ಪ್ರೀತಿಯ ಅಭಿಮಾನಿಗಳಿಗೆ ನಮಸ್ಕಾರ. ಇತ್ತೀಚೆಗೆ ಕೆಲವು ಅಭಿಮಾನಿಗಳು ನನ್ನ ಹುಟ್ಟುಹಬ್ಬದ ಪ್ರಯುಕ್ತ ನನ್ನ ಮನೆಯ ಹತ್ತಿರ ಆಹಾರ ಪದಾರ್ಥಗಳನ್ನು ತಂದು ನೀಡುತ್ತೇವೆ. ಅದನ್ನು ಸಿದ್ದಗಂಗಾ ಮಠ ಹಾಗೂ ಕೆಲವು ಅನಾಥಾಶ್ರಮಕ್ಕೆ ತಲುಪಿಸಿ ಎಂದು ಕೇಳಿಕೊಂಡು ಫೇಸ್ಬುಕ್ನಲ್ಲಿ ವಿಡಿಯೋ ಮಾಡಿ ಬಿಟ್ಟಿರುವುದು ತುಂಬಾ ಸಂತೋಷದ ವಿಷಯವಾಗಿದೆ. ನನ್ನ ಹುಟ್ಟುಹ್ಬಬ್ಬಕ್ಕೆ ನೀವುಗಳು ಕೊಡುತ್ತಿರುವ ಉಡುಗೊರೆ ಎಂದು ತಿಳಿದು ಅದನ್ನು ಪ್ರತಿ ಜಿಲ್ಲೆಯ ಅನಾಥಾಶ್ರಮಕ್ಕೆ, ವೃದ್ಧಾಶ್ರಮಕ್ಕೆ ಹಾಗೂ ಸಿದ್ದಗಂಗಾ ಮಠಕ್ಕೆ ತಲುಪಿಸುವ ಜವಾಬ್ದಾರಿಯನ್ನು ತುಂಬಾ ಸಂತೋಷದಿಂದ ನಾನೇ ತೆಗೆದುಕೊಳ್ಳುತ್ತೇನೆ. ಆದಷ್ಟು ಬಟ್ಟೆ ಬ್ಯಾಗ್ಗಳನ್ನೇ ಬಳಸಿ. ವಂದನೆಗಳೊಂದಿಗೆ ಇಂತಿ ನಿಮ್ಮ ಪ್ರೀತಿಯ ದಾಸ ದರ್ಶನ್” ಎಂದು ಪತ್ರವನ್ನು ಬರೆದು ಪೋಸ್ಟ್ ಮಾಡಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv