ಬೆಂಗಳೂರು: ನಟ ದರ್ಶನ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಯಜಮಾನ ಚಿತ್ರ ಸೆಟ್ಟಿರಿದ ಬಳಿಕ ಸ್ಯಾಂಡಲ್ವುಡ್ ಅಂಗಳದಲ್ಲಿ ಕೇಳಿ ಬಂದಿದ್ದ ಟೈಟಲ್ ಕುರಿತ ಚರ್ಚೆಗೆ ಸ್ಪಷ್ಟನೆ ನೀಡಿ ದರ್ಶನ್ ಬ್ರೇಕ್ ಹಾಕಿದ್ದಾರೆ.
ಯಜಮಾನ ಚಿತ್ರದ ಟೈಟಲ್ ಘೋಷಣೆ ಆದ ಬಳಿಕ ಗಾಂಧಿ ನಗರದಲ್ಲಿ ಈ ಕುರಿತು ಭಾರೀ ಚರ್ಚೆ ನಡೆದಿತ್ತು. ಅಲ್ಲದೇ ಸಾಹಸ ಸಿಂಹ ವಿಷ್ಣುವರ್ಧನ್ ಅವರ ಯಜಮಾನ ಚಿತ್ರಕ್ಕೆ ಹೋಲಿಕೆ ಮಾಡಿ ಸ್ಯಾಂಡಲ್ವುಡ್ ಯಜಮಾನ ಯಾರು ಎಂಬ ಮಾತು ಕೇಳಿ ಬಂದಿತ್ತು. ಆದರೆ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ದರ್ಶನ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ‘ನನ್ನ ಯಜಮಾನ ಸಿನಿಮಾಗೂ ವಿಷ್ಣುದಾದ ಅವರಿಗೂ ಸಂಬಂಧ ಇಲ್ಲ. ಸುಖಾ ಸುಮ್ಮನೇ ಸಿನಿಮಾದ ಬಗ್ಗೆ ಗೊಂದಲ ಮೂಡಿಸುವುದು ಬೇಡ. ಸಿನಿಮಾ ರಂಗದಲ್ಲಿ ಈ ಬಗ್ಗೆ ಚರ್ಚೆಯಾಗುತ್ತಿದೆ. ಅದ್ದರಿಂದ ಮತ್ತೊಮ್ಮೆ ಹೇಳುತ್ತಿದ್ದೇವೆ. ಇಂಡಸ್ಟ್ರಿಗೆ ಒಬ್ಬರೇ ‘ಯಜಮಾನ’, ಅದು ವಿಷ್ಣುದಾದ ಮಾತ್ರ ಎಂದು ಹೇಳಿದರು.
ಈ ಹಿಂದೆ ವಿಷ್ಣುವರ್ಧನ್ ಅವರ ಯಜಮಾನ ಚಿತ್ರ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿತ್ತು. ಈಗ ಮತ್ತೆ ಅದೇ ಹೆಸರಿನಲ್ಲಿ ದರ್ಶನ್ ಅವರ ಸಿನಿಮಾ ಬಿಡುಗಡೆ ಆಗುತ್ತಿದೆ. ಈ ಕುರಿತು ಚಿತ್ರದ ನಿರ್ದೇಶಕ ವಿ ಹರಿಕೃಷ್ಣ ಅವರು ಕೂಡ ಈ ಹಿಂದೆಯೇ ಸ್ಪಷ್ಟನೆ ನೀಡಿದ್ದರು. ಚಿತ್ರದ ಕಥೆಯನ್ನು ದರ್ಶನ್ ಅವರಿಗಾಗಿಯೇ ಬರೆಸಿದ್ದೆನೆ. ಅಲ್ಲದೇ ಚಿತ್ರದ ಕಥೆಯ ಬರವಣಿಗೆಯಲ್ಲಿ ನನ್ನ ಪಾತ್ರವೂ ಇದೆ. ಹಲವು ವರ್ಷಗಳಿಂದ ನನಗೆ ದರ್ಶನ್ ಅವರೊಂದಿಗೆ ಒಡನಾಟವಿದ್ದು, ಸಹಜವಾಗಿಯೇ ದರ್ಶನ್ ಅವರ ವ್ಯಕ್ತಿತ್ವ ಮತ್ತು ಚಿತ್ರರಂಗದಲ್ಲಿ ಅವರ ಅನುಭವ ಬಗ್ಗೆ ಗೊತ್ತಿದೆ. ಅದ್ದರಿಂದ ಯಜಮಾನ ಹೆಸರಿನಲ್ಲಿ ಚಿತ್ರ ಮಾಡಿದ್ದೇನೆ ಎಂದು ಸ್ಪಷ್ಟಪಡಿಸಿದ್ದರು.
ಯಜಮಾನ ಚಿತ್ರವನ್ನು ಶೈಲಜಾ ನಾಗ್ ಹಾಗೂ ಬಿ ಸುರೇಶ್ ಅವರ ಹೊಸ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡುತ್ತಿದ್ದು, ನಟಿ ರಶ್ಮಿಕಾ ಸಿನಿಮಾದಲ್ಲಿ ದರ್ಶನ್ ಪಕ್ಕ ಕಾಣಿಸಿಕೊಂಡಿದ್ದಾರೆ. ಚಿತ್ರ ಟೇಲರ್, ಹಾಡು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸಿದ್ದು, ಹಲವು ದಾಖಲೆಗಳನ್ನ ನಿರ್ಮಾಣ ಮಾಡಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv