ಡೆವಿಲ್ ಸಿನಿಮಾದ ಚಿತ್ರೀಕರಣ ವೇಳೆ ಕೈಗೆ ಏಟು ಮಾಡಿಕೊಂಡು ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ದರ್ಶನ್ (Darshan), ಇದೀಗ ಪತ್ನಿ ವಿಜಯಲಕ್ಷ್ಮಿ (Vijayalakshmi) ಸಮೇತ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಮತಗಟ್ಟೆಗೆ ಬಂದು ಮತದಾನ (Voting) ಮಾಡಿದ್ದಾರೆ. ಸರತಿಸಾಲಿನಲ್ಲಿ ನಿಂತು ಮತದಾನ ಮಾಡಿದ್ದಾರೆ ದರ್ಶನ್ ಮತ್ತು ವಿಜಯಲಕ್ಷ್ಮಿ.
ಕನ್ನಡದ ಹೆಸರಾಂತ ನಟಿ ರಚಿತಾ ರಾಮ್ ಕತ್ರಿಗುಪ್ಪೆಯಲ್ಲಿ ಮತದಾನ ಮಾಡಿದರು. ಸಾಮಾನ್ಯರಂತೆ ಅರ್ಧ ಗಂಟೆಗೂ ಹೆಚ್ಚು ಕಾಲ ಸರದಿ ಸಾಲಿನಲ್ಲಿ ನಿಂತು ತಮ್ಮ ಹಕ್ಕನ್ನು ಚಲಾಯಿಸಿದರು. ಅಭಿಮಾನಿಗಳು ರಚಿತಾ ಅವರ ಜೊತೆ ಸೆಲ್ಫಿ ತೆಗೆಸಿಕೊಂಡು ಸಂಭ್ರಮಸಿದರು. ಮತದಾನದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ರಚಿತಾ, ‘ಮನೆಯಲ್ಲಿ ಕೂತು ಕಾಮೆಂಟ್ ಮಾಡೋದಕ್ಕಿಂದ ಬಂದು ವೋಟ್ ಮಾಡಿ. ವೋಟ್ ಮಾಡದೇ ಬ್ಲೇಮ್ ಮಾಡಬೇಡಿ, ನಮ್ಮ ನಾಯಕರ ಆಯ್ಕೆ ಮಾಡಲೇಬೇಕು. ಬಿಸಿಲು ಅಂತ ಮನೆಯಲ್ಲಿ ಕೂರಬೇಡಿ, ಸಂಜೆವರೆಗೂ ಟೈಂ ಇದೆ ಬಂದು ವೋಟ್ ಮಾಡಿ. ಹಿರಿಯನಾಗರೀಕರೆ ಉತ್ಸಾಹದಿಂದ ವೋಟ್ ಮಾಡುವಾಗ ಯುವಕರು ಯಾಕೆ ಮನೆಯಲ್ಲಿ ಕೂರಬೇಕು’ ಎಂದು ಅವರು ಪ್ರಶ್ನೆ ಮಾಡಿದರು.
ರಿಚರ್ಡ್ ಆಂಟನಿ ಸಿನಿಮಾದ ಕೆಲಸದಲ್ಲಿ ಬ್ಯುಸಿಯಾಗಿರುವ ರಕ್ಷಿತ್ ಶೆಟ್ಟಿ ಕೂಡ ಬೆಂಗಳೂರಿನಿಂದ ಉಡುಪಿಗೆ ಪ್ರಯಾಣ ಬೆಳೆಸಿ ಮತ ಹಾಕಿದ್ದಾರೆ. ಪ್ರತಿ ಬಾರಿಯೂ ಅವರು ತಪ್ಪದೇ ಮತದಾನದ ಪ್ರಕ್ರಿಯೆಯಲ್ಲಿ ಭಾಗಿಯಾಗುತ್ತಾರೆ. ಮತದಾನದ ನಂತರ ಮಾಧ್ಯಮಗಳ ಜೊತೆಯ ಮಾತನಾಡಿದ್ದಾರೆ.
ಐದು ವರ್ಷದಲ್ಲಿ ಏನು ಅಭಿವೃದ್ಧಿಯಾಗಿದೆ ಎಂದು ನೋಡಿ ವೋಟ್ ಹಾಕುತ್ತೇನೆ. ಮುಂದಿನ ಐದು ವರ್ಷ ಯಾವ ನಾಯಕ ಅಧಿಕಾರಕ್ಕೆ ಬರಬೇಕು ಎಂದು ವೋಟ್ ಮಾಡ್ತೇನೆ. ಯೋಚನೆ ಮಾಡಿ ರಾಜಕೀಯ ತಿಳಿದವರ ಜೊತೆ ತರ್ಕ ಮಾಡಿ ಮತ ಹಾಕುತ್ತೇನೆ. ಯಾವಾಗಲೂ ನಾನು ಒಂದು ನಿರ್ಧಾರಕ್ಕೆ ಬಂದು ಮತ ಹಾಕುತ್ತೇನೆ. ದೇಶವನ್ನು ಚೆನ್ನಾಗಿ ನಡೆಸಿಕೊಂಡು ಹೋಗುವ ನಾಯಕ ಅಧಿಕಾರಕ್ಕೆ ಬರಬೇಕು ಎಂದಿದ್ದಾರೆ ರಕ್ಷಿತ್.