ಬಸವರಾಜ ಬೊಮ್ಮಾಯಿ ಕೋಮುವಾದಿ ಸಿಎಂ: ನಟ ಚೇತನ್

ದಾವಣಗೆರೆ: ಬಸವರಾಜ ಬೊಮ್ಮಾಯಿ ಒಬ್ಬ ಕೋಮುವಾದಿ ಸಿಎಂ, ಯಾವ ಸಿಎಂ ಕೂಡ ಇಷ್ಟು ಕೋಮುವಾದಿಯಾಗಿರಲಿಲ್ಲ. ಇವರಲ್ಲಿ ಎಲ್ಲರಿಗಿಂತ ಹೆಚ್ಚು ಕೋಮುವಾದ ಇದೆ ಎಂದು ನಟ ಚೇತನ್ ಅಹಿಂಸಾ ಕಿಡಿಕಾರಿದರು.
ದಾವಣಗೆರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೇವದಾಸಿಗಳು ಅತ್ಯಂತ ಹೀನಾಯ ಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದಾರೆ. ಇದನ್ನು ನೋಡುವಷ್ಟು ತಾಳ್ಮೆ ರಾಜಕಾರಣಿಗೆ ಇಲ್ಲ. ಸಿಎಂ ಬೊಮ್ಮಾಯಿ ಒಬ್ಬ ಕೋಮುವಾದಿ ಸಿಎಂ. ಯಾವ ಸಿಎಂ ಕೂಡ ಇಷ್ಟು ಕೋಮುವಾದಿಯಾಗಿರಲಿಲ್ಲ. ಇವರಲ್ಲಿ ಎಲ್ಲರಿಗಿಂತ ಹೆಚ್ಚು ಕೋಮುವಾದ ಇದೆ. ಅವರ ತಂದೆ ಒಳ್ಳೆಯ ಪ್ರಗತಿಪರ ಸಿಎಂ ಆಗಿದ್ದರು. ಮತಾಂತರ ನಿಷೇಧ ಕಾಯ್ದೆ ಸಂವಿಧಾನದ ವಿರೋಧ ನೀತಿ. ಅಂಬೇಡ್ಕರ್, ಬಸವಣ್ಣನವರು ಕೂಡ ಅವರಿಗೆ ಬೇಕಾದ ಧರ್ಮ ಸ್ಥಾಪನೆ ಮಾಡಿದ್ದಾರೆ. ಜನರು ಅವರಿಗೆ ಬೇಕಾದ ಧರ್ಮಕ್ಕೆ ಸೇರಬಹುದು ಎನ್ನುವುದು ಸಂವಿಧಾನದಲ್ಲಿದೆ. ಬಲವಂತವಾಗಿ ಮತಾಂತರ ಮಾಡಿದರೆ ಅದಕ್ಕೆ ಬೇಕಾದರೆ ಕ್ರಮ ಕೈಗೊಳ್ಳಲಿ. ಜನರಿಗೆ ಹೆದರಿಸಿ, ಬೆದರಿಸಿ ಕಾಯ್ದೆ ತರುವುದು ಸರಿಯಲ್ಲ. ಅಲ್ಪಸಂಖ್ಯಾತ, ಕ್ರಿಸ್ಚಿಯನ್ರ ಮೇಲೆ ದಬ್ಬಾಳಿಕೆ ಮಾಡಿ ಕಾಯ್ದೆ ತರುವಂತಾಗಿದೆ ಎಂದು ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ರಾಯನ್ ರಾಜ್ ಸರ್ಜಾ ಕ್ರಿಸ್ಮಸ್ ಸಂಭ್ರಮ ಹೇಗಿತ್ತು ಗೊತ್ತಾ?
ಕೆಲ ಸ್ವಾಮೀಜಿಗಳು ಸಸ್ಯಹಾರಿಗಳಿಗೆ ಪ್ರತ್ಯೇಕ ಶಾಲೆಗಳನ್ನು ತೆರೆಯುವಂತೆ ಕೇಳುತ್ತಿರುವುದು ಬೇಸರದ ವಿಚಾರ. ಮೊಟ್ಟೆ ತಿನ್ನುವವರ ಶಾಲೆ, ಮಟನ್ ತಿನ್ನುವವರ ಶಾಲೆ ಹೀಗೆ ಪ್ರತ್ಯೇಕ ಶಾಲೆಗಳಾಗಿ ಚಿದ್ರ ಮಾಡುವುದು ಸ್ವಾಮೀಜಿಗಳ ಉದ್ದೇಶವೆ? ಅನುಭವ ಮಂಟಪದಲ್ಲಿ ಸಹ ಮಾಂಸಾಹಾರಿಗಳಿದ್ದರು. ಇದನ್ನು ಸ್ವಾಮೀಜಿಗಳು ಅರಿತುಕೊಳ್ಳಬೇಕು. ಇಡೀ ರಾಜ್ಯವೇ ದೇಶಕ್ಕೆ ಮಾದರಿ ಆಗಬೇಕು ಎಂಬುದು ನಮ್ಮ ಉದ್ದೇಶ ಎಂದರು. ಇದನ್ನೂ ಓದಿ: ಮಹಿಳೆಯಿಂದ ವಂಚನೆ – ಪೊಲೀಸ್ ಠಾಣೆ ಮೆಟ್ಟಿಲೇರಿದ ನಿರ್ದೇಶಕ ನಾಗಶೇಖರ್