ಬೆಂಗಳೂರು: ಒಂದು ಸಿನಿಮಾ ಹಿಟ್ ಆಗುತ್ತಲೇ ಅದರಲ್ಲಿ ನಟಿಸಿದ್ದ ನಾಯಕ, ನಾಯಕಿಯ ಮುಂದಿನ ಚಿತ್ರ ಯಾವುದೆಂಬುದರ ಬಗ್ಗೆ ಸಹಜವಾಗಿಯೇ ಪ್ರೇಕ್ಷಕರಲ್ಲೊಂದು ಕುತೂಹಲವಿರುತ್ತದೆ. ಅದೇ ರೀತಿ ಅರವಿಂದ್ ಕೌಶಿಕ್ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಹುಲಿರಾಯ ಚಿತ್ರದ ನಾಯಕ ಬಾಲು ನಾಗೇಂದ್ರ ಬಗ್ಗೆಯೂ ಪ್ರೇಕ್ಷಕರಲ್ಲಿ ಅಂಥಾದ್ದೊಂದು ಕುತೂಹಲ ಇದ್ದೇ ಇತ್ತು. ಆದರೆ ಕೊಂಚ ತಡವಾಗಿಯಾದರೂ ಬಾಲು ಭರ್ಜರಿಯಾಗಿಯೇ ಎಂಟ್ರಿ ಕೊಟ್ಟಿದ್ದಾರೆ. ಅವರೀಗ ಕಪಟನಾಟಕ ಪಾತ್ರಧಾರಿಯಾಗಿ ವಾಪಾಸಾಗಿದ್ದಾರೆ. ಇದೀಗ ಈ ಚಿತ್ರದ ರೊಮ್ಯಾಂಟಿಕ್ ಲಿರಿಕಲ್ ವಿಡಿಯೋವೊಂದು ಬಿಡುಗಡೆಯಾಗಿದೆ.
ಕಪಟನಾಟಕ ಪಾತ್ರಧಾರಿ ಕ್ರಿಶ್ ನಿರ್ದೇಶನದ ಚಿತ್ರ. ಇದು ಆರಂಭವಾದಾಗ ಟೈಟಲ್ ಮೂಲಕವೇ ಒಂದಷ್ಟು ಸುದ್ದಿಯಾಗಿತ್ತು. ಆದರೆ ಆ ಬಳಿಕ ಯಾವ ಗದ್ದಲವೂ ಇಲ್ಲದಂತೆ ಅಚ್ಚುಕಟ್ಟಾಗಿ ಚಿತ್ರೀಕರಣ ಮುಗಿಸಿಕೊಂಡಿದ್ದ ಈ ಚಿತ್ರದ ಲಿರಿಕಲ್ ವೀಡಿಯೋ ಸಾಂಗ್ ಈಗ ಬಿಡುಗಡೆಯಾಗಿದೆ. ಯಾಕೆ ಅಂತ ಗೊತ್ತಿಲ್ಲ ಕಂಡ್ರಿ, ನನ್ನ ನೋಡಿ ನಕ್ಬಿಟ್ಳು ಸುಂದ್ರಿ ಎಂಬ ಈ ಹಾಡಿದೆ ನದಾಫ್ ಸಂಗೀತ ನೀಡಿದ್ದರೆ ವೇಣು ಹಸ್ರಳ್ಳಿ ಸಾಹಿತ್ಯ ಬರೆದಿದ್ದಾರೆ. ಈ ಹಾಡು ಹರಿಚರಣ್ ಶೇಷಾದ್ರಿಯವರ ಧ್ವನಿಯಲ್ಲಿ ಮೋಹಕವಾಗಿ ಮೂಡಿ ಬಂದಿದೆ. ಸದ್ಯಕ್ಕೆ ಕಪಟನಾಟಕ ಪಾತ್ರಧಾರಿ ಈ ರೊಮ್ಯಾಂಟಿಕ್ ಹಾಡಿನ ಮೂಲಕವೇ ಜನಮನ ಸೆಳೆದುಕೊಂಡಿದೆ.
ಕಪಟನಾಟಕ ಪಾತ್ರಧಾರಿಯಲ್ಲಿಯೂ ಕೂಡಾ ಬಾಲು ನಾಗೇಂದ್ರ ತಮ್ಮ ನಟನೆಯ ಕಸುವಿಗೆ ತಕ್ಕುದಾದ ಪಾತ್ರದಲ್ಲಿಯೇ ನಟಿಸಿದ್ದಾರಂತೆ. ಹುಲಿರಾಯ ಚಿತ್ರದ ನಂತರ ಬಂದಿದ್ದ ಒಂದಷ್ಟು ಅವಕಾಶಗಳ ನಡುವೆ ಅವರು ಆರಿಸಿಕೊಂಡಿದ್ದು ಕ್ರಿಶ್ ಹೇಳಿದ್ದ ಕಥೆಯನ್ನು. ಇಲ್ಲಿ ಆಟೋ ಡ್ರೈವರ್ ಆಗಿ ಬಾಲು ನಟಿಸಿದ್ದಾರೆಂಬ ಹೊರತಾಗಿ ಕಥೆಯ ಬಗ್ಗೆ ಸಣ್ಣ ಸುಳಿವೂ ಹೊರಬಿದ್ದಿಲ್ಲ. ಆದರೆ ಕಥೆ ತೀರಾ ಭಿನ್ನವಾಗಿರೋದಂತೂ ಸತ್ಯವಂತೆ. ಹುಲಿರಾಯ ಚಿತ್ರದಲ್ಲಿಯೂ ಆ ಪಾತ್ರವನ್ನು ಆವಾಹಿಸಿಕೊಂಡು ನಟಿಸಿರೋ ಬಾಲು ನಾಗೆಂದ್ರ ಪಾಲಿಗೆ ಕಪಟನಾಟಕ ಪಾತ್ರಧಾರಿ ದೊಡ್ಡ ಮಟ್ಟದಲ್ಲಿಯೇ ಬ್ರೇಕ್ ನೀಡೋ ಸೂಚನೆಗಳಿವೆ.