ದಕ್ಷಿಣ ಭಾರತದ ಹೆಸರಾಂತ ನಟ, ಕನ್ನಡಿಗ ಅರ್ಜುನ್ ಸರ್ಜಾ (Arjun Sarja) ಅವರು ತಮ್ಮ ಪುತ್ರಿ ಐಶ್ವರ್ಯ ಸರ್ಜಾ ಅವರ ಮದುವೆ (Marriage) ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ಮಾತು ತಮಿಳು ಚಿತ್ರೋದ್ಯಮದಲ್ಲಿ ಕೇಳಿ ಬರುತ್ತಿದೆ. ಮಗಳನ್ನು ಚಿತ್ರೋದ್ಯಮಕ್ಕೆ ತಾವೇ ಪರಿಚಯ ಮಾಡಿಕೊಟ್ಟಿದ್ದರು. ಇದೀಗ ಮಗಳಿಗೆ ತಾವೇ ಹುಡುಗನನ್ನು ಹುಡುಕಿಯೇ ಮದುವೆ ಮಾಡುತ್ತಿದ್ದಾರೆ ಎನ್ನುವುದು ಸದ್ಯದ ವರ್ತಮಾನ.
ಪ್ರೇಮ ಬರಹ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ತಮ್ಮ ಪುತ್ರಿ ಐಶ್ವರ್ಯ (Aishwarya Sarja) ಅವರನ್ನು ಪರಿಚಯ ಮಾಡಿಕೊಟ್ಟಿದ್ದರು ಅರ್ಜುನ್ ಸರ್ಜಾ. ಈ ಸಿನಿಮಾವನ್ನು ತಾವೇ ನಿರ್ಮಾಣ ಮಾಡಿ, ನಿರ್ದೇಶನವನ್ನೂ ಮಾಡಿದ್ದರು. ಅದು ಕನ್ನಡ ಮತ್ತು ತಮಿಳಿನಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಿತ್ತು. ಹೇಳಿಕೊಳ್ಳುವಂತೆ ಸಿನಿಮಾ ಪ್ರೇಕ್ಷಕರ ಮನಸ್ಸು ಗೆಲ್ಲಲಿಲ್ಲ. ಆನಂತರ ಐಶ್ವರ್ಯ ಸಿನಿಮಾ ರಂಗದಲ್ಲಿ ಅಷ್ಟೇನೂ ಸಕ್ರೀಯರಾಗಲಿಲ್ಲ. ಇದನ್ನೂ ಓದಿ: ಹೃದಯ ಕಿತ್ತು ಎದೆಗೆ ಹಚ್ಚಿಕೊಂಡು ಪಾರ್ಟಿಗೆ ಬಂದ ಉರ್ಫಿ ಜಾವೇದ್
ಇದೀಗ ತಮ್ಮ ಪುತ್ರಿಯನ್ನು ತಮಿಳಿನ ಖ್ಯಾತ ಹಾಸ್ಯ ನಟ ತಂಬಿ ರಾಮಯ್ಯ ಅವರ ಪುತ್ರ ಉಮಾಪತಿ ರಾಮಯ್ಯ (Umapati Ramaiah) ಜೊತೆ ಮದುವೆ ಮಾಡಲು ತಯಾರಿ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಂತ ತಮಿಳು ಮಾಧ್ಯಮಗಳು ಸುದ್ದಿ ಮಾಡಿವೆ. ಒಂದು ಮೂಲದ ಪ್ರಕಾರ ಉಮಾಪತಿ ಮತ್ತು ಐಶ್ವರ್ಯ ಹಲವು ವರ್ಷಗಳಿಂದ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು ಎಂದೂ ಹೇಳಲಾಗುತ್ತಿದೆ. ಮದುವೆ ಎರಡೂ ಮನೆಯ ಒಪ್ಪಿಗೆಯೂ ಇದೆಯಂತೆ.
ತಂಬಿ ರಾಮಯ್ಯ ತಮಿಳಿನ ಸುಪ್ರಸಿದ್ದ ಹಾಸ್ಯ ನಟರು. ರಾಷ್ಟ್ರ ಪ್ರಶಸ್ತಿ ವಿಜೇತರು ನಟರು. ಇವರ ಪುತ್ರ ಉಮಾಪತಿ ರಾಮಯ್ಯ ಕೂಡ ನಟರಾಗಿ 2017ರಲ್ಲೇ ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದ್ದಾರೆ. ಆದರೆ, ಅವರಿಗೂ ಇನ್ನೂ ಬ್ರೇಕ್ ಎನ್ನುವಂತಹ ಸಿನಿಮಾ ಬಂದಿಲ್ಲ. ದೇವದಾಸ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ಉಮಾಪತಿ ನಟಿಸಿದ್ದಾರೆ.