ಚೆನ್ನೈ: ಸ್ವೀಟಿ ಅನುಷ್ಕಾ ಶೆಟ್ಟಿ ಮತ್ತೆ ನಾಗವಲ್ಲಿಯಾಗುತ್ತಾರೆ ಎಂಬ ಸುದ್ದಿ ಕಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿದೆ.
ಬಾಹುಬಲಿ ನಂತರ ಅನುಷ್ಕಾ ಸಿನಿಮಾಗಳು ಯಶಸ್ಸನ್ನು ಕಾಣದ ಕಾರಣ ಅವರು ಸಿನಿಮಾ ಆಯ್ಕೆಯಲ್ಲಿ ಸಖತ್ ಚ್ಯೂಸಿಯಾಗಿದ್ದಾರೆ. ಸ್ವೀಟಿ ಮುಂದೆ ಯಾವ ರೀತಿಯ ಸಿನಿಮಾದಲ್ಲಿ ಬಣ್ಣ ಹಂಚುತ್ತಾರೆ ಎಂದು ಅವರ ಅಭಿಮಾನಿಗಳಲ್ಲಿ ಕುತೂಹಲ ಇದ್ದೇ ಇದೆ. ಅದಕ್ಕೆ ತೆರೆ ಎಳೆಯುವಂತೆ ರಾಘವ ಲಾರೆನ್ಸ್ ಆಕ್ಷನ್ ಕಟ್ ಹೇಳುತ್ತಿರುವ ಸಿನಿಮಾದಲ್ಲಿ ಅನುಷ್ಕಾ ನಟಿಸುತ್ತಿದ್ದಾರೆ ಎಂಬ ಸುದ್ದಿ ಈಗ ಹರಿದಾಡುತ್ತಿದೆ.
ಈ ಹಿಂದೆ 2006ರಲ್ಲಿ ತಮಿಳಿನಲ್ಲಿ ತೆರೆಕಂಡ ‘ಚಂದ್ರಮುಖಿ’ ಸಿನಿಮಾ ತೆಲುಗಿಗೂ ಡಬ್ ಆಗಿದ್ದು, ಆ ಸಿನಿಮಾದಲ್ಲಿ ಅನುಷ್ಕಾ ನಾಗವಲ್ಲಿಯಾಗಿ ಸಖತ್ ಮಿಂಚಿದ್ದರು. ಈಗ ಮತ್ತೆ ರಾಘವ ಲಾರೆನ್ಸ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಸಿನಿಮಾದಲ್ಲಿ ನಾಗವಲ್ಲಿ ಪಾತ್ರವಿದ್ದು, ಅದಕ್ಕೆ ಅನುಷ್ಕಾ ಅವರೇ ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ ಎನ್ನಲಾಗಿದೆ.
ಈ ಕುರಿತು ಲಾರೆನ್ಸ್ ಅವರು ಅನುಷ್ಕಾ ಜೊತೆ ಮಾತುಕತೆಯನ್ನು ಮಾಡಿದ್ದು, ಇನ್ನೂ ಅಧಿಕೃತವಾಗಿ ಏನನ್ನೂ ಹೇಳಿಲ್ಲ. ಅವರನ್ನು ಐತಿಹಾಸಿಕ ಮತ್ತು ಪೌರಾಣಿಕ ಸಿನಿಮಾಗಳಲ್ಲಿ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.
2018ರಲ್ಲಿ ಅನುಷ್ಕಾರ ‘ಭಾಗವತಿ’ ಸಿನಿಮಾ ತೆರೆಕಂಡಿತ್ತು. ನಂತರ ‘ನಿಶ್ಯಬ್ದಂ’ ಸಿನಿಮಾ ಒಟಿಟಿಗೆ ಸೀಮಿತವಾಗಿದ್ದು, ಮೂಕಿ ಪಾತ್ರದಲ್ಲಿ ಸ್ವೀಟಿ ನಟನೆ ತುಂಬಾ ಚೆನ್ನಾಗಿ ಮೂಡಿಬಂದಿದೆ. ಆದರೆ ಆ ಸಿನಿಮಾ ಕೂಡ ಅಷ್ಟು ಸದ್ದು ಮಾಡಲಿಲ್ಲ. ಅದಕ್ಕೆ ಅನುಷ್ಕಾ ತಮ್ಮ ಮುಂದಿನ ಪ್ರಾಜ್ಜೆಕ್ಟಲ್ಲಿ ಸಖತ್ ಕೇರ್ ಫುಲ್ ಆಗಿದ್ದಾರೆ.