ಬೆಂಗಳೂರು: ಸ್ಯಾಂಡಲ್ವುಡ್ ರೆಬೆಲ್ ಸ್ಟಾರ್ ಅಂಬರೀಶ್ ಅವರ ಅಂತಿಮ ಯಾತ್ರೆಗೆ ಸರ್ಕಾರ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ನಾಳೆ ಬೆಳಗ್ಗೆ ಮಂಡ್ಯ ವಿಶ್ವೇಶ್ವರಯ್ಯ ಕ್ರೀಡಾಂಗಣದಿಂದ ಆಗಮಿಸುವ ಪಾರ್ಥೀವ ಶರೀರದ ಮೆರವಣಿಗೆ ಕಂಠೀರವ ಕ್ರೀಡಾಂಗಣದಿಂದ ಆರಂಭವಾಗಲಿದೆ.
ಮಂಡ್ಯದಲ್ಲಿ ನಾಳೆ ಬೆಳಗ್ಗೆ 9 ಗಂಟೆವರೆಗೂ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಬಳಿಕ ಕಂಠೀರವ ಕ್ರೀಡಾಂಗಣಕ್ಕೆ ಕರೆತಂದು ಮೆರವಣಿಗೆ ಆರಂಭಿಸಲಾಗುತ್ತದೆ. ಕ್ರೀಡಾಂಗಣದಿಂದ ಆರಂಭವಾಗುವ ಅಂತಿಮ ಯಾತ್ರೆಯನ್ನು ಮೊದಲು ರಾಜಭವನ, ಕಸ್ತೂರ್ ಬಾ ರಸ್ತೆ ಮೂಲಕ ಕರೆತರಲು ಯೋಜನೆ ರೂಪಸಿಲಾಗಿತ್ತು. ಆದರೆ ಟ್ರಾಫಿಕ್ ಜಾಮ್ ಹಾಗೂ ಗಣ್ಯ ವ್ಯಜ್ತಿಗಳ ಸಂಚಾರ ಪ್ರಯುಕ್ತ ಈ ಮಾರ್ಗವನ್ನು ಬದಲಾವಣೆ ಮಾಡಲಾಗಿದೆ.
ಔಟರ್ ರಿಂಗ್ ರಸ್ತೆಯ ಸುಮನಹಳ್ಳಿ ಜಂಕ್ಷನ್ ನಿಂದ ಗೊರಗುರಂಟೆಪಾಳ್ಯ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದ್ದು, ಸುಮನಹಳ್ಳಿಯಿಂದ ಮಾಗಡಿ ರಸ್ತೆ, ಕಾಮಾಕ್ಷಿ ಪಾಳ್ಯ, ಕಾರ್ಡ್ ರಸ್ತೆ ಮೂಲಕ ಸಂಚಾರ ಮಾಡಲು ಅವಕಾಶ ಕಲ್ಪಿಸಲಾಗಿದೆ. ಅಲ್ಲದೇ ಗೊರಗುಂಟೆಪಾಳ್ಯದಿಂದ ಎಂಇಎ ಜಂಕ್ಷನ್, ಆರ್ಎಂಸಿ ಯಾರ್ಡ್ ನಿಂದ ಸೋಪ್ ಫ್ಯಾಕ್ಟರಿ ಮೂಲಕ ಸುಮನಹಳ್ಳಿಗೆ ವ್ಯವಸ್ಥೆ ಮಾಡಲಾಗಿದೆ. ಉಳಿದಂತೆ ಬಿಎಎಲ್ ರಸ್ತೆ, ಗಂಗಮ್ಮ ಸರ್ಕಲ್ ನಿಂದ ತುಮಕೂರು ರಸ್ತೆಗೆ ಹೋಗಲು ಅವಕಾಶ ನೀಡಲಾಗಿದೆ. ನಾಳೆ ಸಂಚಾರಕ್ಕೆ ಅನಾನನುಕೂಲವಾಗದಂತೆ ಟ್ರಾಫಿಕ್ ಪೊಲೀಸರು ವ್ಯವಸ್ಥೆ ಮಾಡಿದ್ದಾರೆ.
ಕಂಠೀರವ ಕ್ರೀಡಾಂಗಣದಿಂದ ಹೊರಡುವ ಮೆರವಣಿಗೆ ಕೆಜಿ ರೋಡ್ ಮೂಲಕ ಸಾಗಿ ಹಡ್ಸನ್ ಸರ್ಕಲ್, ಹಲಸೂರು ಗೇಟ್ ಪಿಎಸ್, ಪೊಲೀಸ್ ಕಾರ್ನರ್, ಮೈಸೂರ್ ಬ್ಯಾಂಕ್ ಸರ್ಕಲ್ ಮಾರ್ಗವಾಗಿ ಪ್ಯಾಲೇಸ್ ರೋಡ್ ಮೂಲಕ ಸಾಗಲಿದೆ.
ಬಳಿಕ ಸಿಐಡಿ ಜಂಕ್ಷನ್, ಬಸವೇಶ್ವರ ಸರ್ಕಲ್, ಓಲ್ಡ್ ಹೈಗ್ರೌಂಡ್ಸ್ ಪಿಎಸ್, ವಿಂಡ್ಸರ್ ಮ್ಯಾನರ್, ಕಾವೇರಿ ಜಂಕ್ಷನ್, ಬಾಷಂ ಸರ್ಕಲ್, ಸ್ಯಾಂಕಿ ರೋಡ್, ಸರ್ಕಲ್ ಮಾರಮ್ಮ ಸರ್ಕಲ್, ಬಿಎಚ್ಇಐ ಮೂಲಕ ಯಶವಂತಪುರ ಫ್ಲೈಓವರ್ ಮೇಲೇರಿ ಮೆಟ್ರೋ ಬಳಿ ರೈಟ್ ಟರ್ನ್ ಪಡೆದು ಯಶವಂತಪುರ ಆರ್ಎಂಸಿ ಯಾರ್ಡ್ ಪಿಎಸ್ ಮಾರ್ಗವಾಗಿ ಗೊರುಗುಂಟೆಪಾಳ್ಯ ಸಿಗ್ನಲ್ ಬಳಿ ಎಡ ತಿರುವು ಪಡೆದು ಸಿಎಂಟಿಐ ಮಾರ್ಗ ಮೂಲಕ ಕಂಠೀರವ ಸ್ಟುಡಿಯೋ ತಲುಪಲಿದೆ.
ನಾಳೆ ಬೆಳಗ್ಗೆ ಸುಮಾರು 10.30ರ ವೇಳೆಗೆ ಆರಂಭವಾಗುವ ಮೆರವಣಿಗೆಯಿಂದ ಸಂಚಾರದಲ್ಲಿ ಭಾರೀ ವ್ಯತ್ಯಯ ಆಗುವ ಲಕ್ಷಣಗಳು ಇದ್ದು, ಏರ್ ಪೋರ್ಟ್ ರಸ್ತೆ, ತುಮಕೂರು ರಸ್ತೆ, ಮೈಸೂರು ರಸ್ತೆ ಮಾರ್ಗದಲ್ಲಿ ಸಂಚಾರ ದಟ್ಟನೆ ಉಂಟಾಗುವ ಸಾಧ್ಯತೆ ಇದೆ. ಇದರಿಂದ ವಾಹನ ಸವಾರರು ಪರ್ಯಾಯ ಮಾರ್ಗಗಳಲ್ಲಿ ಸಂಚರಿಸೋದು ಸೂಕ್ತವಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv