ಜೈಪುರ: ಪ್ರಧಾನಿ ನರೇಂದ್ರ ಮೋದಿ ಅವರು ನಟನೆಯನ್ನು ಬಹಳ ಚೆನ್ನಾಗಿ ಮಾಡುತ್ತಾರೆ. ಅವರು ರಾಜಕೀಯವಲ್ಲ ಬಾಲಿವುಡ್ ಸೇರಬಹುದಿತ್ತು ಎಂದು ರಾಜಸ್ಥಾನದ ಸಿಎಂ ಅಶೋಕ್ ಗೆಹ್ಲೋಟ್ ಟೀಕಿಸಿದ್ದಾರೆ.
ರಾಜಸ್ಥಾನದ ಬುಂದಿ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಮಾತನಾಡಿದ ಗೆಹ್ಲೋಟ್, “ಜುಂಬ್ಲೆಬಾಜಿ (ವಾಕ್ಚಾತುರ್ಯ), ಡ್ರಾಮಾಬಾಜಿ (ನಟನೆ) ಮೋದಿ ಅವರ ಸ್ವಭಾವದಲ್ಲಿಯೇ ಇದೆ. ಅವರು ಬಾಲಿವುಡ್ ಸೇರಿ ಒಳ್ಳೆಯ ನಟರಾಗಬಹುದಿತ್ತು” ಎಂದು ಟಾಂಗ್ ಕೊಟ್ಟಿದ್ದಾರೆ.
ನಟನೆಯಲ್ಲಿ ಸತ್ಯ, ವಾಸ್ತವವಿರುವುದಿಲ್ಲ. ಹಾಗೆಯೇ ಮೋದಿ ಅವರು ಸತ್ಯವನ್ನು ಹೇಳುವುದನ್ನು ಬಿಟ್ಟು, ಸುಳ್ಳಿನ ಆಸರೆಯಲ್ಲಿ ನಟಿಸುತ್ತಾರೆ. ನಟನೆ ದೇಶಕ್ಕೇನೂ ಒಳ್ಳೆಯದನ್ನು ಮಾಡಿಲ್ಲ. ಬರೀ ನಟನೆಯಿಂದ ಅಭಿವೃದ್ಧಿಯೂ ಆಗಲ್ಲ, ಯಾರ ಹಸಿವು ಕೂಡ ನೀಗಲ್ಲ ಎಂದು ಕಿಡಿಕಾರಿದರು.
ದೇಶ, ಪ್ರಜಾಪ್ರಭುತ್ವ ಹಾಗೂ ಸಂವಿಧಾನ ಇಂದು ಅಪಾಯದಲ್ಲಿದೆ. ನಾವು ಸಂಪೂರ್ಣ ಬಲ ಮತ್ತು ಸಾಮಥ್ರ್ಯದೊಂದಿಗೆ ಚುನಾವಣೆಯನ್ನು ಎದುರಿಸದಿದ್ದರೆ ಬಿಜೆಪಿ ನಮ್ಮ ದೇಶವನ್ನು ನಿರ್ನಾಮ ಮಾಡುತ್ತಾರೆ ಅಂತ ಆತಂಕ ವ್ಯಕ್ತಪಡಿಸಿದರು. ಬಳಿಕ ಮಾತನಾಡಿದ ರಾಜಸ್ಥಾನ ಡಿಸಿಎಂ ಸಚಿನ್ ಪೈಲಟ್ ಬಿಜೆಪಿ ಸರ್ಕಾರ ರಾಜ್ಯದ ಮತ್ತು ದೇಶದ ಆರ್ಥಿಕತೆಯನ್ನು ನಾಶಮಾಡುತ್ತಿದೆ ಎಂದು ಆರೋಪಿಸಿದರು.
ಅಲ್ಲದೆ 2019 ಲೋಕಸಭಾ ಚುನಾವಣೆ ಪ್ರಜಾಪ್ರಭುತ್ವವನ್ನು ಉಳಿಸಲು ಒಂದು ಅವಕಾಶ. ಹಾಗೆಯೇ ಈಗಾಗಲೇ ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಸಿಬಿಐ ಅಂತಹ ಸಂಸ್ಥೆಯನ್ನು ದುರ್ಬಲಗೊಳಿಸಿದೆ. ಆದರಿಂದ ಈ ಬಾರಿ ರಾಜ್ಯದಲ್ಲಿ ಬಿಜೆಪಿ ಸೋತು ಕಾಂಗ್ರೆಸ್ ಎಲ್ಲಾ ಕ್ಷೇತ್ರದಲ್ಲಿ ಗೆಲುವು ಸಾಧಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.