ಅಗಲಿದ ಕನ್ನಡದ ಹಿರಿಯ ನಟಿ ಲೀಲಾವತಿ (Leelavati) ಅವರ ನಿಧನಕ್ಕೆ ಮಂಡ್ಯ ಸಂಸದೆ ಮತ್ತು ನಟಿ ಸುಮಲತಾ ಅಂಬರೀಶ್ (Sumalatha Ambarish) ಕಂಬನಿ ಮಿಡಿದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಕುರಿತು ಬರೆದುಕೊಂಡಿರುವ ಅವರು, ಅವರೊಂದಿಗಿನ ಒಡನಾಟವನ್ನು ನೆನಪಿಸಿಕೊಂಡಿದ್ದಾರೆ. ಜೊತೆಗೆ ಅವರ ಜೊತೆ ನಟಿಸಿರುವ ಸಿನಿಮಾದ ಕುರಿತು ಹೇಳಿಕೊಂಡಿದ್ದಾರೆ.
ಕನ್ನಡದ ಹೆಸರಾಂತ ಹಿರಿಯ ನಟಿ ಡಾ.ಲೀಲಾವತಿ ಅವರ ನಿಧನದ (Death) ಸುದ್ದಿ ತೀವ್ರ ಆಘಾತ ತಂದಿದೆ. ದಕ್ಷಿಣದ ಸಿನಿಮಾ ರಂಗಕ್ಕೆ ಇದು ತುಂಬಲಾರದ ನಷ್ಟ. ಆರನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಲೀಲಾವತಿ ಅವರು ನಾನಾ ಭಾಷೆಗಳಲ್ಲಿ ನಟಿಸುವ ಮೂಲಕ ದಕ್ಷಿಣ ಯಶಸ್ವಿ ನಟಿಯಾಗಿದ್ದರು. ಅವರೊಂದಿಗೆ ನನಗೂ ಕಥಾನಾಯಕ ಸಿನಿಮಾದಲ್ಲಿ ಪಾತ್ರ ಮಾಡಲು ಅವಕಾಶ ಸಿಕ್ಕಿತ್ತು ಎಂದು ಸುಮಲತಾ ಸೋಷಿಯಲ್ ಮೀಡಿಯಾದಲ್ಲಿ ಬರೆದಿದ್ದಾರೆ.
ಅಗಲಿಕೆ ನೋವನ್ನು ಭರಿಸುವಂತಹ ಶಕ್ತಿಯನ್ನು ಲೀಲಾವತಿ ಅವರ ಕುಟುಂಬಕ್ಕೆ ಮತ್ತು ಅಭಿಮಾನಿಗಳಿಗೆ ಭಗವಂತ ನೀಡಲಿ ಎಂದು ಪ್ರಾರ್ಥಿಸುವೆ ಎಂದು ಅವರು ಹೇಳಿದ್ದಾರೆ. ಲೀಲಾವತಿ ಅವರ ಜೊತೆಗೆ ಆತ್ಮೀಯ ಬಾಂಧವ್ಯ ಹೊಂದಿದ್ದ ಸುಮಲತಾ ಅವರು ವಿಷ್ಣುವರ್ಧನ್ ನಾಯಕನಾಗಿ ನಟಿಸಿದ್ದ ಕಥಾ ನಾಯಕ ಚಿತ್ರದಲ್ಲಿ ಲೀಲಾವತಿ ಅವರ ಜೊತೆ ನಟಿಸಿದ್ದಾರೆ. ಇದು ಪಿ. ವಾಸು ನಿರ್ದೇಶನದ ಸಿನಿಮಾ.
ಉಮಾಶ್ರೀ ಕಂಬನಿ
ಲೀಲಾವತಿ ಅವರು ಬಹಳಷ್ಟು ವರ್ಷಗಳ ಕಾಲ ಸಿನಿಮಾ ರಂಗದಲ್ಲಿ ನಿರ್ಮಾಪಕಿಯಾಗಿ, ನಟಿಯಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ಸಣ್ಣ ವಯಸ್ಸಿನಲ್ಲೇ ಸಿನಿಮಾಗೆ ಬಂದವರು ಲೀಲಾವತಿ ಅವರು. ಆನಂತರ ದೊಡ್ಡ ರೀತಿಯಲ್ಲಿ ನಾಯಕಿ ನಟಿಯಾಗಿ ಬೆಳೆದರು. ಸಾಕಷ್ಟು ಸಿನಿಮಾಗಳನ್ನು ಕೊಟ್ಟವರು. ಅಂತಹ ಕಲಾವಿದರು ನಮ್ಮೊಂದಿಗೆ ಇದ್ದರು ಎನ್ನೋದೇ ಹೆಮ್ಮೆ ಅನಿಸುತ್ತಿದೆ ಎನ್ನುವುದು ನಟಿ ಉಮಾಶ್ರೀ ಮಾತು.
ಲೀಲಾವತಿ ಅವರದ್ದು ಮಾದರಿ ಜೀವನ. ಆ ತಾಯಿ ಸಾಕಷ್ಟು ಕಷ್ಟ ಪಟ್ಟಿದ್ಧಾರೆ. ಸನ್ಮಾನ, ಅವಮಾನ ಎರಡನ್ನೂ ಪಡೆದಿದ್ದಾರೆ. ತಾಯಿ ಮತ್ತು ಮಗನ ಬಾಂಧವ್ಯಕ್ಕೆ ಮಾದರಿ ಆದಂತಹ ಜೀವವದು. ಈಗ ತಾಯಿ ಮಗ ದೂರವಾಗಿದ್ದು ನೋವು ತಂದಿದೆ. ಅವರು ಇಲ್ಲ ಅನ್ನೋದು ನಂಬೋಕೆ ಆಗ್ತಿಲ್ಲ. ಮಹಿಳೆಯಾಗಿ ಸಮಾಜಕ್ಕೆ ಸಾಕಷ್ಟು ಕೊಡುಗೆ ಕೊಟ್ಟಿದ್ದಾರೆ ಲೀಲಮ್ಮ. ಅವರ ಹಾಕಿಟ್ಟ ದಾರಿ ನಮಗೆಲ್ಲ ಮಾದರಿಯಾಗಬೇಕು ಎಂದಿದ್ದಾರೆ ನಟಿ, ಮಾಜಿ ಸಚಿವೆ ಉಮಾಶ್ರೀ.