-ಅಧಿಕಾರಿಗಳ ವರದಿಯಲ್ಲಿ ಏನಿದೆ?
ಮಂಡ್ಯ: ಜಿಲ್ಲೆಯಲ್ಲಿ ಬಸ್ ನಾಲೆಗೆ ಉರುಳಿ 30 ಜನರು ಜಲಸಮಾಧಿಯಾದ ದುರಂತ ಘಟನೆಗೆ ನಿಖರವಾದ ಕಾರಣ ಸಿಕ್ಕಿದೆ.
ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಡ್ಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಬಸ್ ಅಪಘಾತ ಕುರಿತು ತನಿಖೆ ನಡೆಸಿ ಸರ್ಕಾರಕ್ಕೆ ಪ್ರಮುಖ ನಾಲ್ಕು ಅಂಶಗಳ ವರದಿಯನ್ನು ಕೊಟ್ಟಿದ್ದಾರೆ.
ಮೊದಲನೇಯದು ಬಸ್ ಚಾಲಕನ ನಿರ್ಲಕ್ಷ್ಯ ತೋರಿದ್ದು, ಚಾಲನೆ ವೇಳೆ ಮೊಬೈಲ್ ಉಪಯೋಗಿಸಿದ್ದು ಕಾರಣವಾಗಿರಬಹುದು ಎಂದು ತಿಳಿಸಿದ್ದಾರೆ. ನಾಲೆ ಪಕ್ಕ ತಡೆಗೋಡೆ ಇಲ್ಲದೇ ಇರುವುದು ಜೊತೆಗೆ ರಸ್ತೆಯಿಂದ ನಾಲೆವರೆಗೆ ಇಳಿಜಾರು ಇರುವುದು ಸಹ ಅಪಘಾತಕ್ಕೆ ಕಾರಣವಾಗಿದೆ. ಇನ್ನೂ ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳು ಹಾಗೂ ಕಿರಿದಾದ ರಸ್ತೆ ಇದ್ದ ಕಾರಣ 30 ಜನರ ಸಾವಿಗೆ ಕಾರಣವಾಗಿರ ಬಹುದು ಎಂದು ಅಧಿಕಾರಿಗಳು ವರದಿಯಲ್ಲಿ ತಿಳಿಸಿದ್ದಾರೆ.
ಈ ಹಿಂದೆ ಬಸ್ ಅಪಘಾತವಾದ ಸ್ಥಳಿಯರು, ರಸ್ತೆ ಕಿರಿದಾಗಿಲ್ಲ, ಇಲ್ಲಿ ಇದುವರೆಗೂ ಯಾವುದೇ ಅಪಘಾತವೂ ಸಂಭವಿಸಿಲ್ಲ. ಬಸ್ ಹಳೆಯದಾಗಿದ್ದು, ಸ್ಟೇರಿಂಗ್ ಕಟ್ ಆಗಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಿಂದ ನಾಲೆಗೆ ಬಂದು ಪಲ್ಟಿಯಾಗಿ ಬಿದ್ದಿದೆ. ಅಷ್ಟೇ ಅಲ್ಲದೇ ಬಸ್ಸಿನ ಬಾಗಿಲು ನಾಲೆಗೆ ಕೆಳಮುಖವಾಗಿ ಬಿದ್ದ ಕಾರಣ ಪ್ರಯಾಣಿಕರು ಸಹ ಹೊರಗಡೆ ಬರಲು ಸಾಧ್ಯವಾಗಿಲ್ಲ ಎಂದು ತಿಳಿಸಿದ್ದರು.
ಅಪಘಾತ ನಡೆದಿದ್ದು ಹೇಗೆ?
ಪಾಂಡವಪುರದಿಂದ ಮಂಡ್ಯಕ್ಕೆ ತೆರಳುತ್ತಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ ಕನಗನಮರಡಿ ರಸ್ತೆ ಬದಿಯ ವಿಸಿ ನಾಲೆಗೆ ಉರುಳಿತ್ತು. ಖಾಸಗಿ ಬಸ್ ಪ್ರತಿನಿತ್ಯ ಎರಡು ಬಾರಿ ಸಂಚರಿಸುತ್ತಿತ್ತು. ಬಸ್ ಸಂಪೂರ್ಣ ನೀರಿನಲ್ಲಿ ಮುಳುಗಿದ್ದು, 30ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು ವಿಷಯ ತಿಳಿಯುತ್ತಿದ್ದಂತೆ ನಾಲೆಗೆ ಹರಿಸುವ ನೀರನ್ನು ನಿಲ್ಲಿಸಲಾಗಿತ್ತು. ಬಸ್ ಉಲ್ಟಾ ಅಂದರೆ ಬಾಗಿಲು ಕೆಳಗಡೆ ಆಗಿ ಬಿದ್ದಿದ್ದರಿಂದ ಪ್ರಯಾಣಿಕರು ಹೊರ ಬರಲಾರದೇ ಉಸಿರುಗಟ್ಟಿ ಸಾವನ್ನಪ್ಪಿದ್ದರು.
ಮಂಡ್ಯ ಬಸ್ ದುರಂತಕ್ಕೆ ಇಡೀ ರಾಜ್ಯವೇ ಸಂತಾಪ ಸೂಚಿಸಿದ್ದು, ಸರ್ಕಾರ ಮೃತಪಟ್ಟ ಕುಟುಂಬದವರಿಗೆ ತಲಾ 5 ಲಕ್ಷ ರೂ. ಪರಿಹಾರ ಧನವನ್ನು ನೀಡಿದೆ. ಸಿನಿಮಾರಂಗದವರು ಕೂಡ ತಮ್ಮ ಕೈಲಾದ ಸಹಾಯವನ್ನು ಮಾಡಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv