ಶಿವಮೊಗ್ಗ: ವಿಜ್ಞಾನದ ಪ್ರಯೋಗದ ವೇಳೆ ಶಿಕ್ಷಕಿಯ ನಿರ್ಲಕ್ಷ್ಯದಿಂದ ಆರನೇ ತರಗತಿ ಬಾಲಕಿ ಕಾಲಿನ ಮೇಲೆ ಆಸಿಡ್ ಬಿದ್ದ ಘಟನೆ ಶಿವಮೊಗ್ಗದ ಸಾಗರ ರಸ್ತೆಯಲ್ಲಿರುವ ಸೇಂಟ್ ಜೋನ್ಸ್ ಅಕ್ಷರಧಾಮ ಶಾಲೆಯಲ್ಲಿ ನಡೆದಿದೆ. ಘಟನೆಯಲ್ಲಿ ಬಾಲಕಿಯ ತೊಡೆ ಹಾಗೂ ಕಾಲಿನ ಭಾಗದ ಚರ್ಮ ಸುಟ್ಟು ಹೋಗಿದೆ.
ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಸ್ತು ಪ್ರದರ್ಶನದ ವೇಳೆ ವಿಜ್ಞಾನದ ಪ್ರಯೋಗಕ್ಕೆ ಆಸಿಡ್ ಬಳಸಲಾಗಿದೆ. ಇಂತಹ ಪ್ರಯೋಗದ ವೇಳೆ ಮಕ್ಕಳ ಕೈಗೆ ಆಸಿಡ್ ಕೊಡುವಂತಿಲ್ಲ ಎಂಬ ನಿಯಮವಿದ್ದರೂ, ಶಾಲೆಯ ಶಿಕ್ಷಕರು ಹಾಗೂ ಆಡಳಿತ ಮಂಡಳಿ ಮಕ್ಕಳಿಂದಲೇ ಈ ಪ್ರಯೋಗ ಮಾಡಿಸುವ ವೇಳೆ ಈ ದುರ್ಘಟನೆ ನಡೆದಿದೆ.
ಕಾಲು ಸುಟ್ಟುಕೊಂಡ ಬಾಲಕಿಯನ್ನು ತಕ್ಷಣ ಆಸ್ಪತ್ರೆ ಸೇರಿಸಿಲ್ಲ. ಅಲ್ಲದೇ ಪೋಷಕರಿಗೂ ಸಂರ್ಪಕಿಸಿ ಈ ಘಟನೆ ಬಗ್ಗೆ ಮಾಹಿತಿ ನೀಡಿಲ್ಲ. ನಂತರ ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾದ ಮೇಲೆ ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕರು ತಪ್ಪೋಪ್ಪಿಕೊಂಡಿದ್ದಾರೆ.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ಹಾಗೂ ನ್ಯಾಯಾಧೀಶರಾದ ಸೋಮಶೇಖರ್ ಬಾದಾಮಿ ಹಾಗೂ ಬಿಇಓ ಲೋಕೇಶ್ ಅವರ ಸಮ್ಮುಖದಲ್ಲಿ ನಡೆದ ಸಂಧಾನ ಸಭೆಯಲ್ಲಿ ಘಟನೆ ಬಗ್ಗೆ ಶಾಲಾ ಮುಖ್ಯೋಪಾಧ್ಯಾಯರು, ಮುಂದೆ ಇಂತಹ ಘಟನೆ ನಡೆಯದಂತೆ ಎಚ್ಚರಿಕೆ ವಹಿಸುವುದಾಗಿ ತಪ್ಪೋಪ್ಪಿಕೊಂಡಿದ್ದಾರೆ. ಅಲ್ಲದೇ ಪೊಲೀಸರಿಗೆ ಎಫ್ಐಆರ್ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಮಾಪ್ತಿ ಮಾಡಲಾಗಿದೆ. ಯಾವುದೇ ಕಾರಣಕ್ಕೂ ಪ್ರಯೋಗಾಲಯಗಳಲ್ಲಿ ಮಕ್ಕಳ ಕೈಗೆ ಆಸಿಡ್ ನಂತಹ ಮಾರಕ ವಸ್ತುಗಳನ್ನು ಪ್ರಯೋಗಗಳಿಗೆ ಕೊಡುವಂತಿಲ್ಲ. ಈ ನಿಯಮವನ್ನು ಕಡ್ಡಾಯವಾಗಿ ಪಾಲನೆ ಮಾಡುವುದಾಗಿ ಶಾಲಾ ಆಡಳಿತ ಮಂಡಳಿ ತಿಳಿಸಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv